ಮಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ಧ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ‘ಬಂಡಲ್ ರಾಜ’ ಎಂದು ಟೀಕಿಸಿ ಪೋಸ್ಟ್ ಹಾಕಿದ್ದ ವಿದ್ಯಾರ್ಥಿಯನ್ನು 15 ದಿನಗಳ ಕಾಲ ಅಮಾನತು ಮಾಡಿದ್ದ ಆದೇಶವನ್ನು ಪುತ್ತೂರಿನ ವಿವೇಕಾನಂದ ವಿದ್ಯಾ ಕೇಂದ್ರ ಶನಿವಾರ ಹಿಂದಕ್ಕೆ ಪಡೆದಿದೆ.
ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆಫೆಬ್ರುವರಿ 20ರಂದು ಅಮಿತ್ ಶಾ ಜೊತೆ ಸಂವಾದ ಆಯೋಜಿಸಲಾಗಿತ್ತು. ವಿವೇಕಾನಂದ ಕಾನೂನು ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಜಸ್ಟೀನ್ ಎಂಬುವವರು ಅದೇ ದಿನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು. ಅದನ್ನು ತೆರವು ಮಾಡುವಂತೆ ಕಾಲೇಜು ಆಡಳಿತ ಮಂಡಳಿ ನೀಡಿದ್ದ ಸೂಚನೆಯನ್ನು ಪಾಲಿಸಲು ನಿರಾಕರಿಸಿದ್ದರು.
15 ದಿನಗಳ ಕಾಲ ತರಗತಿಯಿಂದ ವಿದ್ಯಾರ್ಥಿಯನ್ನು ಅಮಾನತು ಮಾಡುವನಿರ್ಧಾರವನ್ನು ಆಡಳಿತ ಮಂಡಳಿ ಕೈಗೊಂಡಿತ್ತು. 15 ದಿನಗಳ ಕಾಲ ತರಗತಿಗೆ ಹಾಜರಾಗದಂತೆ ವಿದ್ಯಾರ್ಥಿಗೆ ಸೂಚನೆಯನ್ನೂ ನೀಡಿತ್ತು. ಶನಿವಾರ ವಿದ್ಯಾರ್ಥಿಯ ಪೋಷಕರು ಮತ್ತು ಕಾಲೇಜಿನ ಆಡಳಿತ ಮಂಡಳಿ ಪ್ರತಿನಿಧಿಗಳ ನಡುವೆ ಮಾತುಕತೆ ನಡೆದಿದೆ. ಆ ಬಳಿಕ ಅಮಾನತು ಆದೇಶವನ್ನು ಹಿಂದಕ್ಕೆಪಡೆದಿದ್ದು, ಸೋಮವಾರದಿಂದ ತರಗ
ತಿಗೆ ಹಾಜರಾಗಲು ಜಸ್ಟೀನ್ಗೆ ಅವಕಾಶ ನೀಡಲಾಗಿದೆ.
‘ಸಂಸ್ಥೆಯ ಕಾರ್ಯಕ್ರಮದ ವಿರುದ್ಧ ಟೀಕಿಸಿದ್ದರಿಂದ ವಿದ್ಯಾರ್ಥಿಯನ್ನು ಅಮಾನತು ಮಾಡಲಾಗಿತ್ತು. ವಿದ್ಯಾರ್ಥಿ ಕ್ಷಮೆ ಕೋರಿದ್ದರಿಂದ ಅಮಾನತು ಹಿಂದಕ್ಕೆ ಪಡೆಯಲಾಗಿದೆ’ ಎಂದು ಸಂಸ್ಥೆಯ ಆಡಳಿತ ಮಂಡಳಿ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.