ಹುಳಿಯಾರು (ತುಮಕೂರು ಜಿಲ್ಲೆ): ‘ಜಾತಿ ಸಮುದಾಯಗಳಿಗೆ ರಾಜಕೀಯವಾಗಿ ಸಾಮಾಜಿಕವಾಗಿ ನ್ಯಾಯಬದ್ಧ ಪ್ರಾತಿನಿಧ್ಯ ನೀಡಲು ಜಾತಿ ಗಣತಿಯು ಪೂರಕವಾಗಿದೆ. ಈ ವಿಷಯದಲ್ಲಿ ಅನಗತ್ಯ ಗೊಂದಲ ಸಲ್ಲದು’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಇಲ್ಲಿ ಸೋಮವಾರ ನಡೆದ ಭಗೀರಥ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ‘ಜಾತಿ ಗಣತಿ ನಡೆಸಲು ₹ 240 ಕೋಟಿ ಖರ್ಚು ಮಾಡಲಾಗಿದೆ. ಜನರ ಅಭಿವೃದ್ಧಿಗಾಗಿಯೇ ಗಣತಿಯನ್ನು ಮಾಡಲಾಗಿದೆ. ಈ ವಿಷಯವಾಗಿ ಮಾಧ್ಯಮಗಳು ತಪ್ಪು ವರದಿ ನೀಡಿ ಜನರನ್ನು ದಾರಿ ತಪ್ಪಿಸುತ್ತಿವೆ’ ಎಂದು ದೂರಿದರು.
‘ರಾಜಕೀಯ ಪಕ್ಷಗಳ ನಾಯಕರು ಚುನಾವಣೆ ಸಮಯದಲ್ಲಿ ಕೊಡುವ ಲೆಕ್ಕದ ಪ್ರಕಾರ ರಾಜ್ಯದಲ್ಲಿ 20 ಕೋಟಿಗೂ ಹೆಚ್ಚು ಜನಸಂಖ್ಯೆ ಇರಬೇಕಾಗುತ್ತದೆ. ಆದರೆ ಜನ ಗಣತಿಯ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 6.30 ಕೋಟಿ ಜನಸಂಖ್ಯೆ ಮಾತ್ರ ಇದೆ. ಹಾಗಾದರೆ ಉಳಿದ 13 ಕೋಟಿಗೂ ಹೆಚ್ಚು ಜನರು ಎಲ್ಲಿ ಹೋದರು’ ಎಂದು ಪ್ರಶ್ನಿಸಿದರು.