ADVERTISEMENT

ಪ್ರಾಮಾಣಿಕ ರಾಜಕಾರಣಿಗಳೇ ಈಗಿಲ್ಲ

ಹಂದಿ, ನಾಯಿ, ಕುರಿ, ಕೋಳಿಗಳಂತಾದ `ಸಾಸಿವೆ'ಗಳು: ನಾಣಯ್ಯ ಲೇವಡಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 19:59 IST
Last Updated 12 ಜೂನ್ 2013, 19:59 IST

ಬೆಂಗಳೂರು: `ಕಳೆದ ವಿಧಾನಸಭಾ ಅವಧಿಯಲ್ಲಿ ನಡೆದ ಆಪರೇಷನ್ ಕಮಲದಿಂದಾಗಿ ಸಾಸಿವೆಯಂತಿದ್ದ ಶಾಸಕರು ಹಂದಿ, ನಾಯಿ, ಕುರಿ, ಕೋಳಿಗಳಂತೆ ಖರೀದಿ ವಸ್ತುಗಳಾಗಿದ್ದರು' ಎಂದು ಜೆಡಿಎಸ್ ನಾಯಕ ಎಂ.ಸಿ. ನಾಣಯ್ಯ ಲೇವಡಿ ಮಾಡಿದರು.

ವಿಧಾನ ಪರಿಷತ್‌ನಲ್ಲಿ ಬುಧವಾರ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ಪ್ರಸಕ್ತ ರಾಜಕಾರಣದಲ್ಲಿ ಯಾರೂ ಪ್ರಾಮಾಣಿಕರಿಲ್ಲ. ಚುನಾವಣೆಗೆ ಮಾಡುವ ವೆಚ್ಚವೇನೂ ಗುಟ್ಟಾಗಿ ಉಳಿದಿಲ್ಲ' ಎಂದ ಅವರು, `ಪುಣ್ಯಕೋಟಿ ಹಾಡು ಕೇಳಲು ಚೆನ್ನ. ಮನಸ್ಸನ್ನೂ ಗಾಢವಾಗಿ ತಟ್ಟುತ್ತದೆ. ರಾಜಕೀಯದಲ್ಲಿ ಆ ಹಾಡಿನ ಬಳಕೆ ಸೂಕ್ತ ಎನಿಸುವುದಿಲ್ಲ. ಪುಣ್ಯಕೋಟಿ ಒಂದು ಆಕಳು. ಬುದ್ಧಿಯಿಲ್ಲದ ಪ್ರಾಣಿ. ಅದಕ್ಕೆ ಇರುವ ಧಾರಾಳತನವೂ ರಾಜಕಾರಣಿಗಳಿಗಿಲ್ಲ' ಎಂದು ಪರೋಕ್ಷವಾಗಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಚುಚ್ಚಿದರು.

`ಶೇ 70ರಷ್ಟಿರುವ ಅದೃಶ್ಯ ಮತದಾರರಲ್ಲಿ (ಅನಕ್ಷರಸ್ಥರು, ಹಸಿವಿನಿಂದ ಬಳಲುವವರು, ಬಡವರು, ಆದಿವಾಸಿಗಳು ಇತ್ಯಾದಿ) ಬಹುಪಾಲು ಜನ ಕಾಂಗ್ರೆಸ್ ಕೈಹಿಡಿದಿದ್ದಾರೆ. ಆದ್ದರಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದೆ. ಅವರ ಒಳಿತೇ ಸರ್ಕಾರದ ಮೊದಲ ಆದ್ಯತೆಯಾಗಬೇಕು' ಎಂದು ಪ್ರತಿಪಾದಿಸಿದರು.

`ಅಧಿಕಾರಿಗಳನ್ನು ಲಂಚದ ಏಜೆಂಟ್ ಆಗಿ ಪರಿವರ್ತಿಸದೆ ಕೈಶುದ್ಧ ಇಟ್ಟುಕೊಂಡು ಅಧಿಕಾರ ನಡೆಸಬೇಕು. 1964ರಲ್ಲಿದ್ದ ಗೋಹತ್ಯೆ ನಿಷೇಧ ಕಾಯ್ದೆಯನ್ನೇ ಮರು ಅನುಷ್ಠಾನಕ್ಕೆ ತರಬೇಕು. ಕಳೆದ ಸರ್ಕಾರ ತರಾತುರಿಯಲ್ಲಿ ಅಂಗೀಕರಿಸಿದ ಮಸೂದೆಗಳನ್ನು ಮತ್ತೆ ವಿಮರ್ಶೆಗೆ ಒಳಪಡಿಸಬೇಕು. ಭ್ರಷ್ಟ ಅಧಿಕಾರಿಗಳ ವಿರುದ್ಧದ ತನಿಖೆಗೆ ಲೋಕಾಯುಕ್ತರಿಗೆ ಅಧಿಕಾರ ನೀಡಬೇಕು. ಬಿಬಿಎಂಪಿ ಅವ್ಯವಹಾರವನ್ನು ತನಿಖೆಗೆ ಒಳಪಡಿಸಬೇಕು' ಎಂದು ಆಗ್ರಹಿಸಿದರು.

ಬಿಜೆಪಿಯ ಬಿ.ಜೆ. ಪುಟ್ಟಸ್ವಾಮಿ, `ಹಿಂದುಳಿದ ವರ್ಗಗಳ ಕಲ್ಯಾಣದ ಪ್ರಸ್ತಾಪ ಕೇವಲ ಬೂಟಾಟಿಕೆ. ರಂಗನಾಥ್ ಮಿಶ್ರಾ ಮತ್ತು ಸಾಚಾರ್ ಸಮಿತಿ ವರದಿಗಳ ಅನುಷ್ಠಾನಕ್ಕೆ ಮುಂದಾಗುವ ಮೂಲಕ ರಾಜ್ಯ ಸರ್ಕಾರ ಮುಸ್ಲಿಮರನ್ನು ಎತ್ತಿ ಕಟ್ಟುತ್ತಿದ್ದು, ಹಿಂದುಳಿದ ವರ್ಗಗಳನ್ನು ತುಳಿಯಲು ಹೊರಟಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಮುಸ್ಲಿಮರಿಗೆ ಪ್ರತ್ಯೇಕ ವಿಶ್ವವಿದ್ಯಾಲಯ, ಬ್ಯಾಂಕ್ ಸ್ಥಾಪನೆಗೆ ಮಿಶ್ರಾ ಆಯೋಗ ಶಿಫಾರಸು ಮಾಡಿದೆ. ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಒಂದು ಪಾಲನ್ನು ಕಿತ್ತುಕೊಂಡು ಮುಸ್ಲಿಮರಿಗೆ ನೀಡುವ ಹುನ್ನಾರವೂ ಅದರಲ್ಲಿದೆ. ಆ ಶಿಫಾರಸುಗಳು ಜಾರಿಗೆ ಬಂದರೆ ನಿರ್ಗತಿಕರು ಇನ್ನಷ್ಟು ಅಧೋಗತಿಗೆ ಇಳಿಯಲಿದ್ದಾರೆ. ಮತ ಬ್ಯಾಂಕ್ ಉದ್ದೇಶದಿಂದ ಸರ್ಕಾರ ಸಮಾಜವನ್ನು ಒಡೆಯಲು ಹೊರಟಿದೆ' ಎಂದು ದೂರಿದರು.

ಬಿಜೆಪಿಯ ಡಿ.ಎಸ್. ವೀರಯ್ಯ, `ರೂಪಾಯಿಗೆ ಕೆ.ಜಿಯಂತೆ ಅಕ್ಕಿ ಕೊಡುವ ಬದಲು ಪ್ರತಿ ಬಡಾವಣೆಗೆ ಒಂದರಂತೆ ಭೋಜನ ಶಾಲೆ ತೆರೆದಿದ್ದರೆ ಒಳ್ಳೆಯದಿತ್ತು' ಎಂದು ವ್ಯಂಗ್ಯವಾಡಿದರು. `ಮೀನು ಹಿಡಿಯಲು ಕಲಿಸದೆ ಸರ್ಕಾರ ಮೀನು ಕೊಡಲು ಹೊರಟಿದೆ. ಕೈಗಾರಿಕೆ, ಗಣಿಗಾರಿಕೆ, ಬ್ಯಾಂಕಿಂಗ್ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಮೀಸಲಾತಿ ಬೇಕು' ಎಂದು ಆಗ್ರಹಿಸಿದರು.

ದಪ್ಪ ಚರ್ಮದ ಸಚಿವರು
ಬೆಂಗಳೂರು: `ಅಧಿಕಾರಕ್ಕೆ ಬಂದು ಒಂದು ತಿಂಗಳಾಗಿಲ್ಲ. ಆಗಲೇ ಆಡಳಿತ ಪಕ್ಷದವರ ಚರ್ಮ ದಪ್ಪವಾಗಿದೆ. ಹಲವು ಬಾರಿ ಹೇಳಿದರೂ ಸದನಕ್ಕೆ ಗೈರು ಹಾಜರಾಗುವುದು ಮುಂದುವರಿದಿದೆ' ಎಂದು ಜೆಡಿಎಸ್‌ನ ಎಂ.ಸಿ. ನಾಣಯ್ಯ ಪರಿಷತ್ತಿನಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆದಾಗ ಆಡಳಿತ ಪಕ್ಷದ ಸಾಲಿನಲ್ಲಿ ಕೇವಲ ನಾಲ್ವರು ಸದಸ್ಯರು ಇದ್ದುದು ಅವರನ್ನು ಕೆರಳಿಸಿತ್ತು. `ಹೇಳುವುದಕ್ಕೆ ನಮಗೂ ನಾಚಿಕೆ ಇಲ್ಲ. ಗೈರು ಹಾಜರಾಗುವುದಕ್ಕೆ ಅವರಿಗೂ ನಾಚಿಕೆ ಇಲ್ಲ' ಎಂದು ಬಸವರಾಜ ಹೊರಟ್ಟಿ ಧ್ವನಿಗೂಡಿಸಿದರು. ಚರ್ಚೆ ಕಾವು ಪಡೆಯುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ಒಬ್ಬೊಬ್ಬರೆ ಬಂದು ಕುರ್ಚಿಯಲ್ಲಿ ಆಸೀನರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT