ಮೂಡುಬಿದಿರೆ: ‘ಬರಗೂರು ರಾಮಚಂದ್ರಪ್ಪ ನುಡಿಸಿರಿ ವಿರುದ್ಧ ಬಂಡಾಯ ಏಳಲು ಸಾಧ್ಯವೇ ಇಲ್ಲ. ಅವರಿಗೆ ತಾತ್ವಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ, ನುಡಿಸಿರಿಗೆ ಬಂಡಾಯ ಎದ್ದಿದ್ದಾರೆ ಎಂಬ ಸುದ್ದಿಯನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಆಳ್ವಾಸ್ ವಿಶ್ವನುಡಿಸಿರಿಯ ಸಂಘಟಕ ಡಾ.ಮೋಹನ ಆಳ್ವ ಭಾನುವಾರ ಇಲ್ಲಿತಿಳಿಸಿದರು.
ಮಾಧ್ಯಮ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೇರೆ ಯಾವುದೋ ಕಾರಣಕ್ಕಾಗಿ ಅವರು ಸಮಾಜ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಮೊದಲ ನುಡಿಸಿರಿಯನ್ನು ಅವರೇ ಉದ್ಘಾಟಿಸಿದ್ದು, ಅವರೇ ಇದೀಗ ಬಂಡಾಯ ಏಳುತ್ತಾರೆ ಎಂದರೆ ನಂಬಲು ಸಾಧ್ಯವೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.
ಸ್ವರೂಪ ಬದಲಾವಣೆ
‘ನುಡಿಸಿರಿ ನಿಂತ ನೀರಲ್ಲ. ಅದು ಮುಂದೆಯೂ ಆಯೋಜನೆಗೊಳ್ಳಲಿದೆ. ಆದರೆ, ನನ್ನ ಬಳಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನುಡಿಸಿರಿಯನ್ನು ಏರ್ಪಡಿಸಲು ಕಷ್ಟ. ಹಾಗಾಗಿ, ಸದ್ಯದಲ್ಲೇ ಸಮಾನ ಮನಸ್ಕರು ಸೇರಿ ಇದರ ಸ್ವರೂಪದಲ್ಲಿ ಬದಲಾವಣೆ ಮಾಡಿಕೊಳ್ಳುತ್ತೇವೆ. ಆದರೆ, ನುಡಿಸಿರಿಯ ಮೂಲಕ ಕನ್ನಡ ಮನಸುಗಳನ್ನು ಕಟ್ಟುವ ಕೆಲಸ ಮಾತ್ರ ನಿಲ್ಲುವುದಿಲ್ಲ’ ಎಂದು ಮೋಹನ ಆಳ್ವ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.