ಬೆಂಗಳೂರು: ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಬಣ ಶಾಸಕಾಂಗ ಪಕ್ಷದ ಸಭೆಗೆ ಮಂಗಳವಾರ ಸಂಜೆಯಾದರೂ ಬರದಿದ್ದಾಗ ಅಸಮಾಧಾನಗೊಂಡ ಬಿ.ಎಸ್.ಯಡಿಯೂರಪ್ಪ ಅವರು ಬಲಪ್ರದರ್ಶನಕ್ಕೆ ಸಜ್ಜಾಗಿದ್ದರು ಎನ್ನಲಾಗಿದೆ.
`ಕ್ಯಾಪಿಟಲ್~ ಹೋಟೆಲ್ಗೆ ನಿಗದಿತ ಸಮಯಕ್ಕೆ ಬಂದ ಯಡಿಯೂರಪ್ಪ ಮತ್ತು ಅವರ ಬಣದ ಸಚಿವರು, ಶಾಸಕರು ಮಧ್ಯಾಹ್ನದವರೆಗೂ ಗೌಡರ ಬಣದ ಸಚಿವರು, ಶಾಸಕರ ಬರುವಿಕೆಗೆ ಕಾದು ಕುಳಿತರು.
ಕಾದು ಕಾದು ಬೇಸತ್ತ ಯಡಿಯೂರಪ್ಪ ಅವರು ದೆಹಲಿಯಲ್ಲಿರುವ ಪಕ್ಷದ ವರಿಷ್ಠರಿಗೆ ದೂರವಾಣಿ ಕರೆ ಮಾಡಿ, `ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಚುನಾವಣೆ ನಡೆಸಿ~ ಎನ್ನುವ ಸಲಹೆ ನೀಡಿದರು. ಕಾಯುವ ಅಗತ್ಯ ಇಲ್ಲ. ಯಾರಿಗೆ ಹೆಚ್ಚು ಮತ ಬೀಳುತ್ತದೊ ಅವರು ನಾಯಕನಾಗಿ ಆಯ್ಕೆಯಾಗುತ್ತಾರೆ. ಕಳೆದ ಬಾರಿ ಕೂಡ ಚುನಾವಣೆ ಮೂಲಕವೇ ಸದಾನಂದ ಗೌಡರು ಆಯ್ಕೆಯಾಗಿದ್ದರು. ಹೀಗಾಗಿ ವಿಳಂಬ ಏಕೆ ಎಂದು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.
ಚುನಾವಣೆ ನಾಯಕನ ಆಯ್ಕೆಗೆ ಮಾತ್ರವಲ್ಲ. ಸಚಿವರ ಆಯ್ಕೆ, ಖಾತೆ ಹಂಚಿಕೆ, ಉಪ ಮುಖ್ಯಮಂತ್ರಿ ಆಯ್ಕೆ... ಹೀಗೆ ಎಲ್ಲದಕ್ಕೂ ಆಗಲಿ. ಆಗ ಯಾರ ಶಕ್ತಿ ಎಷ್ಟು ಎಂಬುದು ಗೊತ್ತಾಗುತ್ತದೆ ಎಂದು ಗುಟುರು ಹಾಕಿದರು ಎಂದು ಗೊತ್ತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.