ADVERTISEMENT

ಬಾಲಕಿ ಮೇಲೆ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 19:59 IST
Last Updated 25 ಡಿಸೆಂಬರ್ 2012, 19:59 IST

ಚಿಂಚೋಳಿ (ಗುಲ್ಬರ್ಗ ಜಿ.): ದನಗಳನ್ನು ಕಾಯಲು ಅಡವಿಗೆ ಹೋಗಿದ್ದ 11 ವರ್ಷದ ಬಾಲಕಿಯ ಮೇಲೆ ಅವಿವಾಹಿತ ಯುವಕ ಅತ್ಯಾಚಾರ ನಡೆಸಿ ತಲೆಮರೆಸಿಕೊಂಡ ಘಟನೆ ತಾಲ್ಲೂಕಿನ ಗಡಿಲಿಂಗದಳ್ಳಿಯಿಂದ ತಡವಾಗಿ ವರದಿಯಾಗಿದೆ.

ದನಗಳನ್ನು ಮೇಯಿಸಿ ಅವುಗಳಿಗೆ ನೀರು ಕುಡಿಸುವುದಕ್ಕಾಗಿ ಹತ್ತಿರದ ತೊರೆಯೊಂದಕ್ಕೆ ಜಾನುವಾರುಗಳೊಂದಿಗೆ ಬಂದ ಬಾಲಕಿಯನ್ನು ಕಂಡ ಆರೋಪಿ 20 ವರ್ಷದ ರಮೇಶ ಹಣಮಂತ ವಡ್ಡರ್ ಒತ್ತಾಯಪೂರ್ವಕವಾಗಿ ಅವಳನ್ನು ಎತ್ತಿಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ಡಿ.19ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಅತ್ಯಾಚಾರ ನಡೆದಿರುವುದಾಗಿ ಬಾಲಕಿಯ ತಾಯಿ ಸುಮಾ (ಹೆಸರು ಬದಲಿಸಿದೆ) ಚಿಂಚೋಳಿ ಪೊಲೀಸ್ ಠಾಣೆಗೆ ಸೋಮವಾರ ದೂರು ನೀಡಿದ್ದಾರೆ.

ಬಾಲಕಿಯನ್ನು ಸೋಲಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಮರುದಿನವೇ ಬಾಲಕಿಯ ತಾಯಿ ಚಿಂಚೋಳಿ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಆದರೆ ಅವಳು ದೂರು ನೀಡದೇ ಹೋಗಿದ್ದರು ಎನ್ನಲಾಗಿದೆ.

ಅತ್ಯಾಚಾರಕ್ಕೊಳಗಾದ ಬಾಲಕಿಗೆ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ. ಕೆಲವು ತಿಂಗಳ ಹಿಂದೆ ತಾಲ್ಲೂಕಿನ ಜಿಲವರ್ಷಾದಲ್ಲಿ ವಿವಾಹಿತನೊಬ್ಬ ಚಾಕೊಲೇಟ್ ಆಸೆ ತೋರಿಸಿ  ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ನಡೆದಿತ್ತು. ಅನಂತರ ಚಿಕ್ಕಲಿಂಗದಳ್ಳಿಯಲ್ಲಿ 9ನೇ ತರಗತಿಯ ಬಾಲಕನನ್ನು ಸಲಿಂಗ ಕಾಮಕ್ಕೆ ಬಳಸಿಕೊಂಡು ಅಲ್ಲಿಯೇ ಕೊಂದ ವಿಕೃತ ಕಾಮಿಗಳ ದುಷ್ಕೃತ್ಯವೂ ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.