ADVERTISEMENT

ಬಿಎಸ್‌ಆರ್‌ ವಿಲೀನಕ್ಕೆ ತಾಂತ್ರಿಕ ತೊಂದರೆ?

ಸದ್ಯದಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಳ್ಳಾರಿಯಿಂದ ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2014, 19:30 IST
Last Updated 14 ಮಾರ್ಚ್ 2014, 19:30 IST
ಬಿಎಸ್‌ಆರ್‌ ವಿಲೀನಕ್ಕೆ ತಾಂತ್ರಿಕ ತೊಂದರೆ?
ಬಿಎಸ್‌ಆರ್‌ ವಿಲೀನಕ್ಕೆ ತಾಂತ್ರಿಕ ತೊಂದರೆ?   

ಬೆಂಗಳೂರು: ಬಿ.ಎಸ್‌.ಆರ್‌ ಕಾಂಗ್ರೆಸ್‌ ಸಂಸ್ಥಾಪಕ, ಶಾಸಕ ಬಿ.ಶ್ರೀರಾಮುಲು ಶುಕ್ರವಾರ ಸಂಜೆ ಮಾತೃಪಕ್ಷ ಬಿಜೆಪಿ ಸೇರಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, ಮುಖಂಡರಾದ ಜಗದೀಶ ಶೆಟ್ಟರ್‌, ಆರ್‌.ಅಶೋಕ ಅವರು ಶ್ರೀರಾಮುಲು ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರು. ಈ ಸಂದರ್ಭದಲ್ಲಿ ರಾಮುಲು ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

‘ತಾಂತ್ರಿಕ ಕಾರಣಗಳಿಂದ ಪಕ್ಷವನ್ನು ವಿಲೀನ­ಗೊಳಿಸಲು ಸಾಧ್ಯವಾಗಿಲ್ಲ. ಈಗ ನಾನು ಮಾತ್ರ ಬಿಜೆಪಿ ಸೇರುತ್ತಿದ್ದೇನೆ’ ಎಂದು ಶ್ರೀರಾಮುಲು ಸಮಜಾಯಿಷಿ ನೀಡಿದರು.

ಹಾಲಿ ಇರುವ ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ಶಾಸಕ ಸ್ಥಾನಕ್ಕೆ ರಾಜೀ­ನಾಮೆ ನೀಡಿದ ನಂತರವೇ ಬೇರೊಂದು ಪಕ್ಷಕ್ಕೆ ಸೇರಲು ಕಾನೂ­ನಿನಲ್ಲಿ ಅವಕಾಶ. ಇಲ್ಲದಿದ್ದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುತ್ತದೆ. ಈ ಭಯದಿಂದಲೇ  ಶ್ರೀರಾಮುಲು ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆಯಲಿಲ್ಲ ಎನ್ನಲಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ಅಭಿಪ್ರಾಯ ಪಡೆದು, ಮುಂದಿನ ತೀರ್ಮಾನ ಕೈಗೊಳ್ಳ­ಲಾಗು­ವುದು ಎಂದು ಜೋಶಿ ಸುದ್ದಿಗಾರರಿಗೆ ತಿಳಿಸಿದರು.

ವಿಲೀನಕ್ಕೆ ವಿರೋಧ: ಶ್ರೀರಾಮುಲು ಸೇರ್ಪಡೆ ಅಥವಾ ಅವರ ಪಕ್ಷದ ವಿಲೀನಕ್ಕೆ ಸುಷ್ಮಾ ಸ್ವರಾಜ್‌ ಇನ್ನೂ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ. ಅವರ ವಿರೋಧದ ನಡುವೆಯೂ ಕೇವಲ ಶ್ರೀರಾಮುಲು ಅವರ ಸೇರ್ಪಡೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥಸಿಂಗ್‌ ಒಪ್ಪಿಗೆ ಸೂಚಿಸಿದರು ಎಂದು ಗೊತ್ತಾಗಿದೆ.

ವಿಲೀನ ಮಾಡಿಕೊಂಡರೆ ಅಕ್ರಮ ಗಣಿಗಾರಿಕೆ ಆಪಾದನೆ ಇರುವವರನ್ನೂ ಬಿಜೆಪಿಗೆ ಸೇರಿಸಿಕೊಳ್ಳ­ಬೇಕಾಗುತ್ತದೆ. ಅದರಿಂದಾಗುವ ಮುಜುಗರ ತಪ್ಪಿ­ಸಲು ಕೇವಲ ಶ್ರೀರಾಮುಲು ಅವರನ್ನು ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಒಂದೆರಡು ದಿನಗಳಲ್ಲಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ-­ದ್ದಾರೆ. ಅದರ ನಂತರವೇ ಬಿಜೆಪಿ ಟಿಕೆಟ್‌ ಮೇಲೆ ಬಳ್ಳಾರಿಯಿಂದ ಕಣಕ್ಕೆ ಇಳಿಯಲಿದ್ದಾರೆ ಎಂದು ಗೊತ್ತಾಗಿದೆ.

ತಮ್ಮ ಸೇರ್ಪಡೆಗೆ ಸುಷ್ಮಾ ಸ್ವರಾಜ್‌ ಅವರ ವಿರೋಧ ಇನ್ನೂ ಇದೆಯಲ್ಲ ಎನ್ನುವ ಪ್ರಶ್ನೆಗೆ ‘ಹಾಗೇನೂ ಇಲ್ಲ. ರಾಷ್ಟ್ರದ ಎಲ್ಲ ನಾಯಕರ ಒಪ್ಪಿಗೆ ನಂತರವೇ ನಾನು ಬಿಜೆಪಿಗೆ ವಾಪಸಾಗಿದ್ದೇನೆ’ ಎಂದರು.

ಮೂವರು ಸಂಸದರ ಅಮಾನತು ರದ್ದು
ಬೆಂಗಳೂರು:
ಬಳ್ಳಾರಿ ಸಂಸದೆ ಜೆ.ಶಾಂತಾ, ರಾಯಚೂರು ಸಂಸದ ಸಣ್ಣ ಫಕೀರಪ್ಪ ಮತ್ತು ತುಮಕೂರು ಸಂಸದ ಜಿ.ಎಸ್‌.ಬಸವರಾಜು ಅವರ ಅಮಾನತು ಆದೇಶವನ್ನು ಹಿಂದಕ್ಕೆ ಪಡೆಯುವುದಾಗಿ ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಶಿ ಶುಕ್ರವಾರ ಇಲ್ಲಿ ತಿಳಿಸಿದರು.

ಶ್ರೀರಾಮುಲು ಅವರನ್ನು ಬಿಜೆಪಿಗೆ ಸೇರಿಸಿಕೊಂಡ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿ, ಬಿಎಸ್‌ಆರ್‌ ಕಾಂಗ್ರೆಸ್‌ ಜತೆ ಗುರು­ತಿಸಿಕೊಂಡು, ಪಕ್ಷ ವಿರೋಧಿ ಚಟು­ವಟಿಕೆ ನಡೆಸಿದರು ಎನ್ನುವ ಆರೋಪದ ಮೇಲೆ ಶಾಂತ ಮತ್ತು ಫಕೀರಪ್ಪ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು.

ಕೆಜೆಪಿ ಜತೆ ಗುರುತಿಸಿಕೊಂಡು ಪಕ್ಷದ ಮುಖಂಡರ ವಿರುದ್ಧ ಟೀಕೆ ಮಾಡಿದ್ದರು ಎನ್ನುವ ಕಾರಣಕ್ಕೆ ಬಸವರಾಜು ಅವ­ರನ್ನು ಅಮಾನತು ಮಾಡಲಾಗಿತ್ತು.

ಬಿಜೆಪಿ ಸೇರಿದ ಪ್ರತಾಪ್‌
ಮೈಸೂರು ಅಭ್ಯರ್ಥಿ, ಪತ್ರಕರ್ತ ಪ್ರತಾಪ್‌ ಸಿಂಹ ಮತ್ತು ಮಂಡ್ಯ ಅಭ್ಯರ್ಥಿ ಪ್ರೊ.­ಶಿವ­ಲಿಂಗಯ್ಯ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆಯು­ವುದರ ಮೂಲಕ ಆ ಪಕ್ಷದ ಸದಸ್ಯರಾದರು.

ಪಕ್ಷ ಸೇರುವುದಕ್ಕೂ ಮುನ್ನವೇ  ಇವರಿಬ್ಬರಿಗೆ ಟಿಕೆಟ್‌ ಘೋಷಣೆ ಮಾಡಲಾಗಿತ್ತು.

ಸ್ವಾಭಿಮಾನಕ್ಕಿಂತ ದೇಶ ಮುಖ್ಯ
ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಹೊಸ ಪಕ್ಷ ಕಟ್ಟಿದೆ. ಆದರೆ, ಈಗ ಸ್ವಾಭಿಮಾನಕ್ಕಿಂತ ದೇಶ ಮುಖ್ಯ ಎನ್ನುವ ಕಾರಣಕ್ಕೆ ಮೋದಿ ಅವರನ್ನು ಪ್ರಧಾನಿ ಮಾಡಲು ಬಿಜೆಪಿಗೆ ವಾಪಸಾಗಿದ್ದೇನೆ. ಇದಕ್ಕೆ ಜೈಲಿನಲ್ಲಿರುವ ಜನಾರ್ದನ ರೆಡ್ಡಿ ಅವರ ಒಪ್ಪಿಗೆಯೂ ಇದೆ’
–  ಬಿ.ಶ್ರೀರಾಮುಲು

ಬಿಜೆಪಿ ಸೇರಲು ರಾಜೀವ್‌ ವಿರೋಧ

ಬೆಂಗಳೂರು: ಬಿಎಸ್‌ಆರ್‌ ಕಾಂಗ್ರೆಸ್‌ನ ಕುಡಚಿ ಶಾಸಕ ಪಿ.ರಾಜೀವ್‌ ಅವರು ಬಿಜೆಪಿ ಸೇರು­ವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

‘ಬಿಜೆಪಿ ಸೇರುವುದಾದರೆ ನಾನು ನಿಮ್ಮ ಜತೆ ಇರುವುದಿಲ್ಲ’ ಎಂಬುದನ್ನು ರಾಜೀವ್‌ ಅವರು ಶ್ರೀರಾಮುಲು ಅವರಿಗೆ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.

ಬಿಎಸ್‌ಆರ್‌ ಕಾಂಗ್ರೆಸ್‌ನ ನಾಲ್ಕು ಶಾಸಕರ ಪೈಕಿ ಶ್ರೀರಾಮುಲು ಮಾತ್ರ ಬಿಜೆಪಿ ಸೇರಿದ್ದಾರೆ. ಅವರ ಅಳಿಯ ಸುರೇಶ ಬಾಬು ಜೈಲಿನಲ್ಲಿದ್ದಾರೆ. ಮತ್ತೊಬ್ಬ ಶಾಸಕ ಎಸ್‌.ತಿಪ್ಪೇಸ್ವಾಮಿ ಅವರು ರಾಮುಲು ಜತೆ ಇದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.