ಬೆಂಗಳೂರು: ಕಾಂಗ್ರೆಸ್ನ ಕೆ.ಗೋವಿಂದರಾಜು, ಇಕ್ಬಾಲ್ ಅಹ್ಮದ್ ಸರಡಗಿ, ಜೆಡಿಎಸ್ನ ಸೈಯದ್ ಮುದೀರ್ ಆಗಾ ಮತ್ತು ಪಕ್ಷೇತರ ಅಭ್ಯರ್ಥಿ ಬಿ.ಎಸ್.ಸುರೇಶ್ ಅವರು ವಿಧಾನ ಪರಿಷತ್ ಚುನಾವಣೆಗೆ ಸಲ್ಲಿಸಿರುವ ನಾಮಪತ್ರಗಳಿಗೆ ಬಿಜೆಪಿ ತಕರಾರು ಎತ್ತಿದೆ.
ಈ ಹಿನ್ನೆಲೆಯಲ್ಲಿ ಶನಿವಾರ ನಡೆಯಬೇಕಿದ್ದ ಅವರ ನಾಮಪತ್ರಗಳ ಪರಿಶೀಲನೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ಟಿ.ಡಿ.ಆರ್.ಹರಿಶ್ಚಂದ್ರಗೌಡ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಬಿಜೆಪಿಯ ಆರು ಮತ್ತು ಕಾಂಗ್ರೆಸ್ನ ಇಬ್ಬರು ಅಭ್ಯರ್ಥಿಗಳ ನಾಮಪತ್ರಗಳನ್ನು ಅಂಗೀಕರಿಸಲಾಗಿದೆ.
ನಾಮಪತ್ರ ಅಸಿಂಧುವಾಗದು... |
2011ರ ಸೆಪ್ಟೆಂಬರ್ನಲ್ಲಿ ಮದ್ರಾಸ್ ಹೈಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಆಯಾ ರಾಜ್ಯ ಸರ್ಕಾರಗಳ ಸ್ಟಾಂಪ್ ಕಾಯ್ದೆ ಪ್ರಕಾರ ನಿಗದಿತ ಮೌಲ್ಯದ ಸ್ಟಾಂಪ್ ಪೇಪರ್ನಲ್ಲಿ ಪ್ರಮಾಣ ಪತ್ರ ಸಲ್ಲಿಸಲು ಅವಕಾಶವಿದೆ ಎಂದು ರಾಜ್ಯ ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. |
ಸರಡಗಿ, ಆಗಾ ಮತ್ತು ಸುರೇಶ್ ಅವರು 50 ರೂಪಾಯಿ ಮೌಲ್ಯದ ಸ್ಟಾಂಪ್ ಪೇಪರ್ನಲ್ಲಿ ಪ್ರಮಾಣ ಪತ್ರ ಸಲ್ಲಿಸುವ ಬದಲು, 20 ರೂಪಾಯಿ ಮೌಲ್ಯದ ಸ್ಟಾಂಪ್ ಪೇಪರ್ನಲ್ಲಿ ಸಲ್ಲಿಸಿದ್ದಾರೆ. ಹೀಗಾಗಿ ಅವರ ನಾಮಪತ್ರಗಳನ್ನು ತಿರಸ್ಕರಿಸಬೇಕು ಎಂದು ಬಿಜೆಪಿ, ಚುನಾವಣಾಧಿಕಾರಿಯನ್ನು ಕೋರಿದೆ.
ಮತ್ತೊಬ್ಬ ಅಭ್ಯರ್ಥಿ ಗೋವಿಂದರಾಜು ಅವರು ಲಾಭದಾಯಕ ಹುದ್ದೆ ಹೊಂದಿದ್ದಾರೆ.
ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿರುವ ಅವರು, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಪದನಿಮಿತ್ತ ಸದಸ್ಯರಾಗಿದ್ದಾರೆ. ಲಾಭದಾಯಕ ಹುದ್ದೆ ಹೊಂದಿರುವ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಬಿಜೆಪಿ ಲಿಖಿತ ರೂಪದಲ್ಲಿ ಕೋರಿದೆ.
ಬಿಜೆಪಿಯವರ ಆಕ್ಷೇಪಣೆಗಳಿಗೆ ಉತ್ತರಿಸಲು ಶನಿವಾರ ಮಧ್ಯಾಹ್ನ ಮೂರು ಗಂಟೆವರೆಗೂ ಅಭ್ಯರ್ಥಿಗಳಿಗೆ ಕಾಲಾವಕಾಶ ನೀಡಲಾಗಿತ್ತು. ವಕೀಲರ ಮೂಲಕ ನಾಲ್ವರು ಅಭ್ಯರ್ಥಿಗಳು ಉತ್ತರ ನೀಡಿದ್ದಾರೆ. ಸೋಮವಾರ ಬೆಳಿಗ್ಗೆ 11ಕ್ಕೆ ವಿಚಾರಣೆ ನಡೆಯಲಿದೆ. ಅಂದೇ ತೀರ್ಪು ನೀಡಲಾಗುವುದು. ನಾಮಪತ್ರ ವಾಪಸ್ ಪಡೆಯಲು ಸೋಮವಾರ ಮಧ್ಯಾಹ್ನ ಮೂರು ಗಂಟೆವರೆಗೂ ಅವಕಾಶವಿದೆ. ಇದೇ 11ಕ್ಕೆ ಚುನಾವಣೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾಧಿಕಾರಿ ಓಂಪ್ರಕಾಶ್ ಸುದ್ದಿಗಾರರಿಗೆ ತಿಳಿಸಿದರು.
`ರಾಜ್ಯ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷನಾಗಿರುವ ನಾನು ಸಂಬಳ ಸೇರಿ ಯಾವುದೇ ಸೌಲಭ್ಯ ಪಡೆಯುತ್ತಿಲ್ಲ. ಚುನಾವಣಾಧಿಕಾರಿಗೆ ಈ ಮಾಹಿತಿ ನೀಡಲಾಗಿದೆ~ ಎಂದು ಗೋವಿಂದರಾಜು ಹೇಳಿದರು.
ಅವಕಾಶವಿದೆ: ಕರ್ನಾಟಕ ಸ್ಟಾಂಪ್ ಕಾಯ್ದೆ ಪ್ರಕಾರ 20 ರೂಪಾಯಿ ಮೌಲ್ಯದ ಸ್ಟಾಂಪ್ ಪೇಪರ್ನಲ್ಲಿ ಪ್ರಮಾಣ ಪತ್ರ ಸಲ್ಲಿಸಲು ಅವಕಾಶವಿದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ದರ ನಿಗದಿಯಾಗಿದೆ. ದೆಹಲಿಯಲ್ಲಿ 50 ರೂಪಾಯಿ ಮೌಲ್ಯದ ಪೇಪರ್ನಲ್ಲಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದಿದೆ. ಆ ಪ್ರಕಾರ ಚುನಾವಣಾ ಆಯೋಗ ತಿಳಿಸಿರಬಹುದು. ಆದರೆ ಇದು ಕಡ್ಡಾಯ ಅಲ್ಲ. ನಾಮಪತ್ರ ಸಲ್ಲಿಸುವ ಮೊದಲು ಈ ಬಗ್ಗೆ ಯಾವುದೇ ನಿರ್ದೇಶನ ನೀಡಿರಲಿಲ್ಲ. 20 ರೂಪಾಯಿ ಮೌಲ್ಯದ ಪ್ರಮಾಣ ಪತ್ರ ಸಲ್ಲಿಸಲು ಅವಕಾಶವಿದೆ ಎಂದು ಪಕ್ಷೇತರ ಅಭ್ಯರ್ಥಿ ಸುರೇಶ್ ಪರವಾಗಿ ಉತ್ತರ ನೀಡಿರುವ ವಕೀಲ ಎಂ.ನಾರಾಯಣ ರೆಡ್ಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.