ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕರ ನೇಮಕ ವಿವಾದ ಸೋಮವಾರ ಹೈಕೋರ್ಟ್ ಮೆಟ್ಟಿಲೇರಿದೆ.
ಈ ಹುದ್ದೆಗೆ ಶಂಕರ ಬಿದರಿ ಅವರ ನೇಮಕವನ್ನು ರದ್ದುಗೊಳಿಸಿರುವ ಕೇಂದ್ರ ಆಡಳಿತ ನ್ಯಾಯಮಂಡಳಿಯ (ಸಿಎಟಿ) ಬೆಂಗಳೂರು ಘಟಕದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.
`ಡಿಜಿಪಿ ಹುದ್ದೆಗೆ ಅರ್ಹ ವ್ಯಕ್ತಿಗಳ ನೇಮಕ ನಡೆಯುವವರೆಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿಯಾಗಿರುವ ಎ.ಆರ್. ಇನ್ಫೆಂಟ್ ಅವರನ್ನು ತಾತ್ಕಾಲಿಕವಾಗಿ ನೇಮಕ ಮಾಡುವಂತೆ ಸಿಎಟಿ ಆದೇಶ ಹೊರಡಿಸಿದೆ. ಆದರೆ ಈ ರೀತಿ ಆದೇಶ ಹೊರಡಿಸುವ ಅಧಿಕಾರ ಸಿಎಟಿಗೆ ಇಲ್ಲ. ಈ ಹುದ್ದೆಗೆ ಯಾರನ್ನು ನೇಮಕ ಮಾಡಬೇಕು ಎಂಬ ಬಗ್ಗೆ ನ್ಯಾಯಮಂಡಳಿ ತನ್ನ ವ್ಯಾಪ್ತಿ ಮೀರಿ ಆದೇಶ ಹೊರಡಿಸಿದೆ~ ಎನ್ನುವುದು ಸರ್ಕಾರದ ವಾದ.
`ಕೇಂದ್ರ ಲೋಕಸೇವಾ ಆಯೋಗಕ್ಕೆ ಹೆಸರುಗಳನ್ನು ಶಿಫಾರಸು ಮಾಡುವಾಗ ಶಂಕರ ಬಿದರಿ ಅವರಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸರ್ಕಾರ ಆಯೋಗದ ಮುಂದೆ ಇಟ್ಟಿತ್ತು. ಯಾವುದೇ ಸತ್ಯಾಂಶವನ್ನು ಮುಚ್ಚಿಡಲಿಲ್ಲ. ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಿದ ನಂತರವೇ ಆಯೋಗವು ಶಿಫಾರಸು ಮಾಡಿದೆ.
ಆದುದರಿಂದ ಅವರ ನೇಮಕ ಕಾನೂನುಬದ್ಧವಾಗಿಯೇ ನಡೆದಿದೆ. ಅವರ ಕುರಿತಾಗಿ ಆಯೋಗದ ಮುಂದೆ ಸತ್ಯಾಂಶ ಮುಚ್ಚಿಡಲಾಗಿದೆ ಎಂಬ ವಾದದಲ್ಲಿ ಹುರುಳಿಲ್ಲ. ಈ ಹಿನ್ನೆಲೆಯಲ್ಲಿ ಸಿಎಟಿ ಆದೇಶಕ್ಕೆ ತಡೆ ನೀಡಬೇಕು~ ಎಂದು ಅರ್ಜಿಯಲ್ಲಿ ಕೋರಲಾಗಿದೆ.
ನ್ಯಾಯಮೂರ್ತಿ ದಿಲೀಪ್ ಬಿ.ಭೋಸಲೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ಮಂಗಳವಾರ ಅರ್ಜಿಯು ವಿಚಾರಣೆಗೆ ಬರಲಿದೆ. ಅರ್ಜಿಯಲ್ಲಿ ಇನ್ಫೆಂಟ್, ಕೇಂದ್ರ ಸರ್ಕಾರ ಹಾಗೂ ಕೇಂದ್ರ ಲೋಕಸೇವಾ ಆಯೋಗವನ್ನು ಪ್ರತಿವಾದಿಯನ್ನಾಗಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.