ಮಂಗಳೂರು: 'ಜಮ್ಮು ಮತ್ತು ಕಾಶ್ಮೀರದ ಕಠುವಾದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾಗಿ ಕೊಲೆಯಾದ ಎಂಟು ವರ್ಷ ವಯಸ್ಸಿನ ಸಂತ್ರಸ್ತ ಬಾಲಕಿಯ ಹೆಸರನ್ನೇ ನನ್ನ ಮಗಳಿಗೂ ಇಡುವೆ' ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಪ್ರತಿಭಾ ಕುಳಾಯಿ ಹೇಳಿದರು.
ಪಕ್ಷದ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ' ಕಠುವಾ ಘಟನೆ ಅತ್ಯಂತ ಹೇಯವಾದುದು. ಒಬ್ಬ ಮಹಿಳೆಯಾಗಿ ಅದನ್ನು ಬಲವಾಗಿ ಖಂಡಿಸುತ್ತೇನೆ. ನನ್ನ ಮಗಳು ಪೃಥ್ವಿಯ ಹೆಸರಿನ ಮೊದಲು ಸಂತ್ರಸ್ತೆಯ ಹೆಸರನ್ನೂ ಸೇರಿಸುತ್ತೇನೆ' ಎಂದರು.
'ಸ್ವಘೋಷಿತ ಬಿಜೆಪಿ ಹಿಂದೂ ಕಾರ್ಯಕರ್ತರು ನಡೆಸುತ್ತಿರುವ ದೌರ್ಜನ್ಯಗಳಿಂದ ಭಾರತೀಯ ಮಹಿಳೆಯರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ನಾನು ಒಬ್ಬ ಭಾರತೀಯ ಮಹಿಳೆ ಎನ್ನಲು ನಾಚಿಕೆಪಡುವಂತಾಗಿದೆ' ಎಂದು ಹೇಳಿದರು.
'ಮಂಗಳೂರಿನಲ್ಲೂ ಸ್ವಘೋಷಿತ ಬಿಜೆಪಿ ಹಿಂದೂಗಳ ಹಾವಳಿ ಜಾಸ್ತಿ ಇದೆ. ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಕೋಡಿಕರೆಗೆ ಪ್ರಚಾರಕ್ಕೆ ಹೋಗಿದ್ದಾಗ ನನ್ನ ಮೇಲೆ ದೌರ್ಜನ್ಯ ನಡೆಸಿದ್ದರು. ನನ್ನ ಹಿಂದೂ ಅಣ್ಣ, ತಮ್ಮಂದಿರೇ ಕಾಲಿನ ಮೇಲೆ ಮೂತ್ರ ವಿಸರ್ಜಿಸಿ ಹಿಂಸಿಸಿದ್ದರು' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.