ಅಕ್ಕಿಆಲೂರ (ಹಾವೇರಿ ಜಿಲ್ಲೆ): ನೀರಿನ ಸಮಸ್ಯೆಯಿಂದಾಗಿ, ಮಹಾರಾಷ್ಟ್ರದ ಅಲೆಮಾರಿ ಕುಟುಂಬವೊಂದು ಭಾನುವಾರ ಹಾವೇರಿ ಜಿಲ್ಲೆಯ ಗ್ರಾಮದಲ್ಲಿ ಮದುವೆ ಸಮಾರಂಭ ನಡೆಸಿತು.
ಫಂಡರಪುರದ ಮಾಳವಿ ಕುಟುಂಬದವರು ತಮ್ಮ ಪುತ್ರಿ ರೇಖಾಳ ಮದುವೆಯನ್ನು ಮುಂಡಗೋಡ ತಾಲ್ಲೂಕಿನ ತಿಮ್ಮನಕೊಪ್ಪದ ದತ್ತು ಅವರೊಂದಿಗೆ ನಿಶ್ಚಯ ಮಾಡಿದ್ದರು. ವರ್ಷದಲ್ಲಿ ಮೂರ್ನಾಲ್ಕು ತಿಂಗಳು ಸಾಯಿಬಾಬಾ ದೇವರ ಪಲ್ಲಕ್ಕಿಯೊಂದಿಗೆ ದೇಶ ಸಂಚಾರ ಮಾಡುವ ಈ ಕುಟುಂಬ ಈ ವರ್ಷ ಎಲ್ಲ ಕಡೆಯೂ ಬರದ ಭೀಕರತೆಯನ್ನು ಕಂಡಿದೆ. ಫಂಡರಪುರಕ್ಕೆ ಮರಳಬೇಕೆಂದರೆ ಅಲ್ಲಿಯೂ ತೀವ್ರ ಬರ! ಮಗಳ ಮದುವೆಯನ್ನು ಎಲ್ಲಿ ಮಾಡುವುದು ಎಂದು ದಿಕ್ಕು ತಿಳಿಯದೇ, ಕೊನೆಗೆ ಅಕ್ಕಿ ಆಲೂರಿನ ಗ್ರಾಮಸ್ಥರ ಮುಂದೆ ಈ ವಿಷಯ ಪ್ರಸ್ತಾಪ ಮಾಡಿದೆ.
ಇದಕ್ಕೆ ಖುಷಿಯಿಂದಲೇ ಸ್ಪಂದಿಸಿದ ಊರವರು, ಭಾನುವಾರ ಶುಭ ಕಾರ್ಯಕ್ಕೆ ಕೈಜೋಡಿಸಿದರು.
ಇಲ್ಲಿಯ ಕಲ್ಲಾಪುರ ರಸ್ತೆಯಲ್ಲಿರುವ ಬಯಲು ನಿವೇಶನವೊಂದರಲ್ಲಿ ಸಡಗರದಿಂದ ಮದುವೆ ಶಾಸ್ತ್ರ ನಡೆಯಿತು. ಲಗ್ನ ಕಟ್ಟಿಸುವುದು, ಬೀಗರನ್ನು ಸ್ವಾಗತಿಸುವ ಕಾರ್ಯ, ಮೆಹಂದಿ, ಸುರಗಿ, ನಿಶ್ಚಿತಾರ್ಥ, ಪೂಜೆ ಸೇರಿದಂತೆ ಮದುವೆಯ ಎಲ್ಲ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.
ವಿದ್ಯುತ್ ಸಂಪರ್ಕ, ಪೆಂಡಾಲ್ ವ್ಯವಸ್ಥೆ, ಊಟೋಪಚಾರ ಸೇರಿದಂತೆ ಇನ್ನಿತರ ಸಹಾಯ ಒದಗಿಸಿದ ಸ್ಥಳೀಯರು ಶುಭಕಾರ್ಯದಲ್ಲಿ ಪಾಲ್ಗೊಂಡರು.
ಮದುವೆಗೆ ಆಗಮಿಸಿದ್ದ ಅಲೆಮಾರಿ ಕುಟುಂಬದ ಬಂಧು–ಬಾಂಧವರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ತರಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.