ADVERTISEMENT

ಮದುವೆ ಮಂಟಪದಲ್ಲೂ ಮತದಾನ ಸಂದೇಶ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 19:30 IST
Last Updated 19 ಮಾರ್ಚ್ 2014, 19:30 IST

ರಾಮನಗರ: ಮತಗಟ್ಟೆಗೆ ಹೆಚ್ಚಿನ ಸಂಖ್ಯೆಯ ಮತದಾರರನ್ನು ಸೆಳೆಯಲು ‘ಸ್ವೀಪ್‌’ ಸಮಿತಿಯು ಜಿಲ್ಲೆಯಲ್ಲಿ ನಡೆ­ಯುವ ನಿಶ್ಚಿತಾರ್ಥ ಮತ್ತು ವಿವಾಹ ಕಾರ್ಯಕ್ರಮಗಳನ್ನೂ ಸಾರ್ವಜನಿಕ ಜಾಗೃತಿಯ ವೇದಿಕೆಯನ್ನಾಗಿ ಪರಿವರ್ತಿ­ಸಿ­­ಕೊಳ್ಳಲು ಮುಂದಾಗಿದೆ.

ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾರರ ಸಹಭಾಗಿತ್ವ (ಸಿಸ್ಟಮ್ಯಾಟಿಕ್‌ ವೋಟರ್ಸ್‌ ಎಜು­ಕೇಷನ್‌ ಆ್ಯಂಡ್‌ ಎಲೆಕ್ಟೋರಲ್‌ ಪಾರ್ಟಿಸಿಪೇಷನ್‌– ಸ್ವೀಪ್‌) ಮೂಡಿ­ಸುವುದು ‘ಸ್ವೀಪ್‌’ನ ಮುಖ್ಯ ಉದ್ದೇಶ.  ಸಮಿತಿಯು ಈಗಾಗಲೇ ರಂಗೋಲಿ, ಚಿತ್ರಕಲಾ ಸ್ಪರ್ಧೆ, ಚರ್ಚಾ ಸ್ಪರ್ಧೆ, ವಿದ್ಯಾರ್ಥಿಗಳಿಂದ ಪ್ರಮಾಣ ವಚನ, ಜಾಗೃತಿ ಜಾಥಾ, ಮಾನವ ಸರಪಳಿ ಆಯೋಜಿಸುವ ನಿಟ್ಟಿನಲ್ಲಿ ವಿವಿಧ ಜಾಗೃತಿ ಯೋಜನೆಗಳನ್ನು ರೂಪಿಸಿದೆ.

ಇದೀಗ ಸಮಿತಿ ಖಾಸಗಿ ಕಾರ್ಯ­­ಕ್ರಮಗಳಲ್ಲಿಯೂ ಮತ­ದಾನದ ಬಗ್ಗೆ ಅರಿವು ಮೂಡಿಸಲು ನಿರ್ಧರಿಸಿ­ರುವ ಮೂಲಕ ಹೊಸ ಹೆಜ್ಜೆ ಇಟ್ಟಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಡೆಯುವ ಯಾವುದೇ ನಿಶ್ಚಿತಾರ್ಥ, ವಿವಾಹ ಕಾರ್ಯಕ್ರಮಗಳಿಗೆ ‘ಸ್ವೀಪ್‌’ ತಂಡದ ಅಧಿಕಾರಿಗಳು ಭೇಟಿ ನೀಡಿ, ಏ 17ರಂದು ‘ತಪ್ಪದೆ ಮತದಾನದಲ್ಲಿ ಭಾಗವಹಿಸಿ’ ಎಂದು ನವದಂಪತಿಯ ಕುಟುಂಬ ಹಾಗೂ ಅಲ್ಲಿ ನೆರೆಯುವ ಜನರನ್ನು ಕೋರಲು ಆಲೋಚಿಸಿದೆ ಎಂದು ಜಿಲ್ಲಾ ‘ಸ್ವೀಪ್‌’ ಸಮಿತಿ ಅಧ್ಯಕ್ಷರೂ ಆದ ಜಿ.ಪಂ ಸಿಇಒ ಡಾ.­ಎಂ.­­ವಿ.ವೆಂಕಟೇಶ್‌ ಅವರು ಬುಧವಾರ ‘ಪ್ರಜಾವಾಣಿ’ಗೆ ವಿವರಿಸಿದರು.

ಜಿಲ್ಲೆಯಲ್ಲಿ ಯಾವ ಕುಟುಂಬದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಮತ­ದಾನ ಮಾಡಿರುತ್ತಾರೋ ಅವರಿಗೆ ‘ಉತ್ತಮ ಅಥವಾ ಜಾಗೃತ ಕುಟುಂಬ’ ಎಂದು ಸತ್ಕರಿಸಲು ನಿರ್ಧರಿಸಲಾಗಿದೆ ಎಂದೂ ಅವರು ತಿಳಿಸಿದರು.

ರಂಗೋಲಿಯಲ್ಲಿ ಮತದಾನದ ಸಂದೇಶ: ಮನೆಗಳ ಮುಂದೆ ಬಿಡಿಸುವ ರಂಗೋಲಿಯಲ್ಲಿ ಏಪ್ರಿಲ್‌ 17ರಂದು ಮತದಾನ ದಿನದ ಶುಭಾಶಯದ ಜತೆಗೆ ‘ಮತದಾನ ಮಾಡುವುದನ್ನು ಮರೆಯ­ಬೇಡಿ’ ಎಂಬ ಘೋಷಣೆ ಬರೆಯುವಂತೆ ಪ್ರೇರೇಪಿಸ
ಲಾಗುವುದು.

ಕಂದಾಯ ಇಲಾಖೆಯ ‘ಭೂಮಿ’, ಬೆಸ್ಕಾಂನ ವಿದ್ಯುತ್ ಬಿಲ್, ಆಸ್ಪತ್ರೆಗಳ ವೈದ್ಯರ ಸಲಹಾ ಚೀಟಿಗಳು ಇತ್ಯಾದಿ­ಗಳ­ಲ್ಲಿಯೂ ಮತದಾನದ ಕುರಿತು ಜಾಗೃತಿ ಸಂದೇಶದ ಮುದ್ರೆ ಒತ್ತಲಾಗುವುದು ಎಂದು ಅವರು ವೆಂಕಟೇಶ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.