ಬಾಗಲಕೋಟೆ/ಚಡಚಣ: ಕೇಂದ್ರ ಅಧ್ಯಯನ ತಂಡ ಭಾನುವಾರ ಬಾಗಲಕೋಟೆ ಮತ್ತು ವಿಜಾಪುರ ಜಿಲ್ಲೆಗಳಲ್ಲಿ ಭಾನುವಾರ ಸಂಚರಿಸಿ, ಇತ್ತೀಚೆಗೆ ಆಲಿಕಲ್ಲು ಮಳೆಯಿಂದಾದ ಹಾನಿ ಕುರಿತು ರೈತರು ಮತ್ತು ಜಿಲ್ಲಾಡಳಿತದಿಂದ ಮಾಹಿತಿ ಸಂಗ್ರಹಿಸಿತು.
ಅಧ್ಯಯನ ತಂಡವು ಬಾಗಲಕೋಟೆ ತಾಲ್ಲೂಕು ವ್ಯಾಪ್ತಿಯ ದ್ರಾಕ್ಷಿ, ಪಪ್ಪಾಯಿ, ಕಲ್ಲಂಗಡಿ, ದಾಳಿಂಬೆ, ಚಿಕ್ಕು (ಸಪೋಟಾ) ತೋಟಗಳಿಗೆ ಮತ್ತು ಬಿಳಿ ಜೋಳದ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿತು.
‘ಅಕಾಲಿಕ ಆಲಿಕಲ್ಲು ಮಳೆಯಿಂದ ರಾಜ್ಯದಲ್ಲಿ ಆಗಿರುವ ಬೆಳೆ ಹಾನಿಯ ಗಂಭೀರತೆ ಮನದಟ್ಟಾಗಿದೆ’ ಎಂದು ಕೇಂದ್ರ ಅಧ್ಯಯನ ತಂಡದ ಮುಖ್ಯಸ್ಥರಾದ ಯೋಜನಾ ಆಯೋಗದ ಉಪ ಸಲಹೆಗಾರ ಮಾನಸ್ ಚೌಧರಿ ತಿಳಿಸಿದರು.
ಬಾಗಲಕೋಟೆ ತಾಲ್ಲೂಕಿನ ಸೀಮಿಕೇರಿ, ತುಳಸಿಗೇರಿ, ಕಲಾದಗಿ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದ ಹೊಲಗಳಿಗೆ ಭೇಟಿ ನೀಡಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
‘ತೊಂದರೆಗೊಳಗಾದ ಕೃಷಿಕರಿಗೆ ತಕ್ಷಣ ಪರಿಹಾರ ಒದಗಿಸುವುದು ಅಸಾಧ್ಯ. ಆದರೆ, ನಷ್ಟ ಅನುಭವಿಸಿರುವ ರೈತರಿಗೆ ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಮಾನದಂಡ ಆಧರಿಸಿ ಹೆಚ್ಚಿನ ನೆರವು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಆದಷ್ಟು ಬೇಗ ವರದಿ ನೀಡಲಾಗುವುದು’ ಎಂದು ಚೌಧರಿ ಅವರು ಹೇಳಿದರು.
ಆಲಿಕಲ್ಲು ಮಳೆಯಿಂದ ಜಿಲ್ಲೆಯಲ್ಲಿ ರೂ. 193 ಕೋಟಿ ಮೌಲ್ಯದ ತೋಟಗಾರಿಕೆ ಬೆಳೆ ಮತ್ತು ರೂ. 17.75 ಕೋಟಿ ಮೌಲ್ಯದ ಕೃಷಿ ಬೆಳೆ ಹಾನಿಗೊಳಲಾಗಿದೆ ಎಂಬ ವಿಷಯವನ್ನು ಬಾಗಲಕೋಟೆ ಜಿಲ್ಲಾಧಿಕಾರಿ ಮನೋಜ್ ಜೈನ್ ಅವರು ಕೇಂದ್ರ ಅಧ್ಯಯನ ತಂಡದ ಗಮನಕ್ಕೆ ತಂದರು.
ಇನ್ನೊಂದು ತಂಡ: ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ವಸುಧಾ ಮಿಶ್ರಾ ನೇತೃತ್ವದ ಇನ್ನೊಂದು ತಂಡ ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ, ಹತ್ತಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿತು.
ಬೆಳೆ ಹಾನಿಗೀಡಾದ ತೋಟಗಳಿಗೆ ಭೇಟಿ ನೀಡಿದ ತಂಡವು, ಸಂತ್ರಸ್ತ ರೈತರೊಂದಿಗೆ ಚರ್ಚೆ ನಡೆಸಿತು.
ಜಿಲ್ಲಾಧಿಕಾರಿ ರಿತ್ವಿಕ್ ರಂಜನ್ ಪಾಂಡೆ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ನಾರಾಯಣ ಮತ್ತು ಸಹಾಯಕ ನಿರ್ದೇಶಕ ಎಚ್.ಎಸ್. ಪಾಟೀಲ ಅವರು ಬೆಳೆ ಹಾನಿ ಕುರಿತು ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.
ಯಾದಗಿರಿ ವರದಿ: ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಪ್ರಸನ್ನ ವಿ.ಸಾಲಿಯನ್ ನೇತ್ವತ್ವದ ತಂಡವು ಯಾದಗಿರಿ ಜಿಲ್ಲೆಯ ವಿವಿಧೆಡೆಗಳಿಗೆ ಭಾನುವಾರ ಭೇಟಿ ನೀಡಿ ಆಲಿಕಲ್ಲು ಮಳೆಯಿಂದಾದ ಹಾನಿ ಬಗ್ಗೆ ಪರಿಶೀಲನೆ ನಡೆಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.