ADVERTISEMENT

ಮರಕ್ಕೆ ಕಾರು ಡಿಕ್ಕಿ: ಸಚಿವ ಪಾರು

​ಪ್ರಜಾವಾಣಿ ವಾರ್ತೆ
Published 8 ಜನವರಿ 2013, 19:59 IST
Last Updated 8 ಜನವರಿ 2013, 19:59 IST
ಆನೇಕಲ್ ತಾಲ್ಲೂಕಿನ ಬ್ಯಾಗಡದೇನ ಹಳ್ಳಿ ಸಮೀಪ ಆರ್.ಕೆ.ಫಾರ್ಮ್ ಬಳಿ ಕಾರು ಅಪಘಾತಕ್ಕೆಡಾದ ಸಚಿವ ಎ. ನಾರಾಯಣ ಸ್ವಾಮಿ ಅವರ ಕಾರು ಜಖಂ ಗೊಂಡಿರುವುದು. ಒಳಚಿತ್ರದಲ್ಲಿ ಗಾಯಗೊಂಡಿರುವ ಸಚಿವರನ್ನು ಕಾಣಬಹುದು.
ಆನೇಕಲ್ ತಾಲ್ಲೂಕಿನ ಬ್ಯಾಗಡದೇನ ಹಳ್ಳಿ ಸಮೀಪ ಆರ್.ಕೆ.ಫಾರ್ಮ್ ಬಳಿ ಕಾರು ಅಪಘಾತಕ್ಕೆಡಾದ ಸಚಿವ ಎ. ನಾರಾಯಣ ಸ್ವಾಮಿ ಅವರ ಕಾರು ಜಖಂ ಗೊಂಡಿರುವುದು. ಒಳಚಿತ್ರದಲ್ಲಿ ಗಾಯಗೊಂಡಿರುವ ಸಚಿವರನ್ನು ಕಾಣಬಹುದು.   

ಆನೇಕಲ್: ಸಮಾಜ ಕಲ್ಯಾಣ ಸಚಿವ ಎ.ನಾರಾಯಣ ಸ್ವಾಮಿ ಅವರು ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾದ ಘಟನೆ ಆನೇಕಲ್- ಚಂದಾಪುರ ರಸ್ತೆಯ ಆರ್.ಕೆ.ಫಾರ್ಮ್ ಬಳಿ ಮಂಗಳವಾರ ನಡೆದಿದೆ.

ಘಟನೆಯಲ್ಲಿ ಸಚಿವರ ತಲೆ ಮತ್ತು ಕೆನ್ನೆಗೆ ಸಣ್ಣ ಗಾಯವಾಗಿದ್ದು ಆನೇಕಲ್‌ನ ವಿಜಯ ನರ್ಸಿಂಗ್ ಹೋಮ್‌ನಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಬೊಮ್ಮಸಂದ್ರದ ಸ್ಪರ್ಶ ಆಸ್ಪತ್ರೆಗೆ ದಾಖಲಾದರು.

ಸಚಿವರೂ ಸೇರಿದಂತೆ ಚಾಲಕ ಶಿವಶಂಕರ್ ಮತ್ತು ಅಂಗರಕ್ಷಕ ಶ್ರೆನಿವಾಸ್ ಅವರಿಗೂ ಗಾಯಗಳಾಗಿದ್ದು ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, `ಆನೇಕಲ್ ಸಮೀಪದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರ ಪುತ್ರ ಮೃತಪಟ್ಟ ವಿಷಯ ತಿಳಿದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ತೆರಳುತ್ತಿದ್ದೆ. ಆಗ ಈ ಘಟನೆ ಸಂಭವಿಸಿತು' ಎಂದರು.

`ಚಂದಾಪುರ-ಆನೇಕಲ್ ರಸ್ತೆಯ ಬ್ಯಾಗಡದೇನ ಹಳ್ಳಿ ಸಮೀಪ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಯಲ್ಲಿ ರಸ್ತೆಯಲ್ಲಿ ಜಲ್ಲಿ ಕಲ್ಲು ಇದ್ದವು. ಕಾರು ಸ್ಕಿಡ್ ಆಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಯಿತು. ಕಾರಿನಲ್ಲಿದ್ದ ಏರ್‌ಬ್ಯಾಗ್ ತೆರೆದುಕೊಂಡಿದ್ದರಿಂದ ಹೆಚ್ಚಿನ ಅವಘಡ ತಪ್ಪಿದೆ' ಎಂದು ತಿಳಿಸಿದರು. ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಸಚಿವರು ಎಪಿಎಂಸಿ ಚುನಾವಣೆ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆನೇಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.