ADVERTISEMENT

ಮುಜಾಫರ್‌ ನಗರಕ್ಕೆ ಪಿಯುಸಿಎಲ್‌ ತಂಡ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2013, 19:59 IST
Last Updated 15 ಸೆಪ್ಟೆಂಬರ್ 2013, 19:59 IST

ಮಂಗಳೂರು: ಉತ್ತರ ಪ್ರದೇಶದ ಮುಜಾಫರ್‌­ನಗರ­ದಲ್ಲಿ ನಡೆಯುತ್ತಿ­ರುವ ಕೋಮು­ಗಲಭೆಯ ವಾಸ್ತವದ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಲು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್‌ (ಪಿಯುಸಿಎಲ್‌) ಸಂಘಟನೆ ನಿರ್ಧರಿಸಿದೆ.

ಮಂಗಳೂರಿನಲ್ಲಿ ನಡೆದ ಪಿಯುಸಿಎಲ್‌ನ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಚರ್ಚೆಯಾದ ವಿಷಯಗಳ ಬಗ್ಗೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಪ್ರಧಾನ ಕಾರ್ಯದರ್ಶಿ ಡಾ.ವಿ.ಸುರೇಶ್‌, ‘ಮುಜಾಫರ್‌ನಗರಲ್ಲಿ 50ಕ್ಕೂ ಅಧಿಕ ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಕುಮ್ಮಕ್ಕಿನಿಂದ ನಡೆಯುತ್ತಿರುವ ಈ ಕೋಮಗಲಭೆ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಈ ಬಗ್ಗೆ ರಾಷ್ಟ್ರ ಮಟ್ಟದ ತಂಡವು ಸ್ಥಳಕ್ಕೆ ಭೇಟಿ ನೀಡಿ ಶೀಘ್ರ ನಾಗರಿಕರ ವರದಿಯನ್ನು ಸಿದ್ಧಪಡಿಸಲಿದೆ’ ಎಂದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯಕ್ಕೆ ವಿರುದ್ಧವಾದ ಕರಾಳ ಕಾನೂನುಗಳು ದೇಶದಲ್ಲಿವೆ. ಕಾರ್ಪೊರೇಟ್‌ ವಲಯ, ಗಣಿಗಾರಿಕೆ, ಕೈಗಾರಿಕೆಗಳ ಹಿತಾಸಕ್ತಿ ಕಾಪಾಡಲು ಸರ್ಕಾರವೇ ಜನರ ವಿರುದ್ಧ ರಾಜದ್ರೋಹದಂತಹ ಕಾನೂನುಗಳನ್ನು ಬಳ­ಸುತ್ತಿದೆ. ಈ ಕಾನೂನುಗಳನ್ನು ಬಳಸಿ, ನೈಸರ್ಗಿಕ ಸಂಪ­ನ್ಮೂ­ಲ­ಗಳನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಪ್ರಜಾಪ್ರಭುತ್ವದ ಬೆನ್ನೆ­ಲು­ಬಾದ ಪ್ರಶ್ನಿಸುವ ಅವಕಾಶವನ್ನೇ ಈ ಕಾನೂನುಗಳು ಕಿತ್ತು­ಕೊಂ­ಡಿವೆ. ಈ ಕಾನೂನುಗಳನ್ನು ಕೈಬಿಡುವ ಹೋರಾ­ಟ­ವನ್ನು ಚುರು­ಕುಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು’ ಎಂದರು.   

‘ಆಹಾರ ಭದ್ರತಾ ಕಾಯ್ದೆಯು ಸುಪ್ರೀಂ ಕೋರ್ಟ್‌ ತೀರ್ಪಿನ ಆಶಯಕ್ಕೆ ಅನುಗುಣವಾಗಿಲ್ಲ. ರೈತ ಸಮುದಾಯದ ಹಿತಾಸಕ್ತಿಯನ್ನು ಇದು ಒಳಗೊಂಡಿಲ್ಲ. ಜನರಿಗೆ ಅಗತ್ಯವಿರು­ವಷ್ಟು ಪೌಷ್ಟಿಕ ಆಹಾರ ಒದಗಿಸುವುದನ್ನೂ ಇದು ಖಾತರಿ ಪಡಿಸುವುದಿಲ್ಲ ಎಂದರು.

ಪಿಯುಸಿಎಲ್‌ನ ರಾಷ್ಟ್ರೀಯ ಅಧ್ಯಕ್ಷ ಪ್ರೊ.ಪ್ರಭಾಕರ ಸಿನ್ಹ, ಕವಿತಾ ಶ್ರೀವಾತ್ಸವ್‌, ಬಿನಾಯಕ್‌ ಸೆನ್‌, ರವಿಕಿರಣ್‌ ಜೈನ್‌, ರಾಜ್ಯ ಘಟಕದ ಅಧ್ಯಕ್ಷ ಪಿ.ಬಿ.ಡೆಸಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.