ಕೊಳ್ಳೇಗಾಲ: ಪುತ್ರನೊಬ್ಬ ತನ್ನ ತಾಯಿ ಸತ್ತ ಬಳಿಕ ದೇಹವನ್ನು ಮಣ್ಣು ಮಾಡದೇ ಗಾಜಿನ ಪೆಟ್ಟಿಗೆಯಲ್ಲಿಟ್ಟು ಮೂರು ತಿಂಗಳಿಂದ ಪೂಜಿಸುತ್ತಿದ್ದ ಘಟನೆ ತಾಲ್ಲೂಕಿನ ರಾಮಾಪುರ ಬಳಿಯ ಪಳನಿಮೇಡು ಗ್ರಾಮದಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ, ಪುತ್ರನ ಮನವೊಲಿಸಿ ಶವಸಂಸ್ಕಾರ ಮಾಡಿಸ್ದಿದಾರೆ.
ಪಳನಿಮೇಡು ಗ್ರಾಮದ ಲಕ್ಷ್ಮಮ್ಮ (113) ಮೂರು ತಿಂಗಳ ಹಿಂದೆ ಮೃತಪಟ್ಟರು. ಅವರ ಪುತ್ರ ಮುನಿಸ್ವಾಮಿ ತಾಯಿಯ ಶವವನ್ನು ಮಣ್ಣು ಮಾಡದೇ ಮನೆಯಲ್ಲೇ ಆಳವಾದ ತೊಟ್ಟಿ ತೆಗೆದು ಗಾಜಿನ ಪೆಟ್ಟಿಗೆಯಲ್ಲಿಟ್ಟು, ಮೇಲೆ ಗೋಪುರ ನಿರ್ಮಿಸಿ ದೇವಾಲಯದಂತೆ ನಿತ್ಯ ಪೂಜೆ ಸಲ್ಲಿಸುತ್ತಿದ್ದ. ಅಯ್ಯಪ್ಪಸ್ವಾಮಿ ದೇವಸ್ಥಾನದ ಅರ್ಚಕರಾಗಿರುವ ಮುನಿಸ್ವಾಮಿಗೆ, ತಾಯಿ ಮೇಲೆ ಅಪಾರವಾದ ಪ್ರೀತಿ ಇಟ್ಟಿದ್ದರಿಂದ ಈ ರೀತಿ ಮಾಡುತ್ತಿದ್ದ. ಅಲ್ಲದೇ, ತಾಯಿಯ ಶವ ಇದ್ದ ಸ್ಥಳದಲ್ಲಿಯೇ ಓಂ ಶಕ್ತಿ ದೇವಸ್ಥಾನ ನಿರ್ಮಿಸುವ ಉದ್ದೇಶ ಹೊಂದಿದ್ದ ಎನ್ನಲಾಗಿದೆ.
ಶವವನ್ನು ಮನೆಯ್ಲ್ಲಲಿಟ್ಟುಕೊಂಡು ಪೂಜಿಸುತ್ತಿದ್ದ ವಿಷಯ ಗ್ರಾಮಸ್ಥರು ಹಾಗೂ ಯಜಮಾನರಿಗೂ ಗೊತ್ತಿತ್ತು. ಅವರ್ಯಾರೂ ಮುನಿಸ್ವಾಮಿ ಭಕ್ತಿಗೆ ಅಡ್ಡಿ ಮಾಡಲಿಲ್ಲ. ಮುನಿಸ್ವಾಮಿ ಗ್ರಾಮದಲ್ಲಿ ಒಳ್ಳೆಯ ಹೆಸರು ಸಂಪಾದಿಸಿದ್ದೇ ಇದಕ್ಕೆ ಕಾರಣ. ಶುಕ್ರವಾರ ಗ್ರಾಮದ ವ್ಯಕ್ತಿಯೊಬ್ಬ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ.
ತಕ್ಷಣ ಗ್ರಾಮಕ್ಕೆ ತೆರಳಿದ ಸಿಪಿಐ ರಾಜಣ್ಣ, ಪಿಎಸ್ಐ ಬಸವರಾಜು ಅವರು ಮುನಿಸ್ವಾಮಿಯ ಮನವೊಲಿಸಿ ಅಂತ್ಯಸಂಸ್ಕಾರ ನಡೆಸಿದರು. ಹನೂರು ಹೆಚ್ಚುವರಿ ತಹಶೀಲ್ದಾರ್ ಶ್ರೀನಿವಾಸ್ ಹಾಗೂ ರಾಜಸ್ವ ನಿರೀಕ್ಷಕ ಮಹದೇವಪ್ಪ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.