ADVERTISEMENT

ಯುವತಿ ಮೇಲೆ ಶಿಕ್ಷಕನಿಂದ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 19:59 IST
Last Updated 20 ಜೂನ್ 2013, 19:59 IST

ಶ್ರೀರಂಗಪಟ್ಟಣ:  ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕನೊಬ್ಬ ಕಾಲೇಜಿನ  ಹಳೆಯ ವಿದ್ಯಾರ್ಥಿನಿಯನ್ನು ಟೆನಿಕಾಯ್ಟ ಟೂರ್ನಿಗೆಂದು ಬೆಂಗಳೂರಿಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಕ್ಯಾತನಹಳ್ಳಿ ಗ್ರಾಮದ ಸರ್ ಎಂ. ವಿಶ್ವೇಶ್ವರಯ್ಯ ಪದವಿಪೂರ್ವ ಕಾಲೇಜಿನ  ದೈಹಿಕ ಶಿಕ್ಷಕ, 51 ವರ್ಷದ ವಿವೇಕಾನಂದ ಎಂಬಾತ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

`ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಇರುವ ಕಾಮತ್ ವಸತಿಗೃಹದಲ್ಲಿ ವಿವೇಕಾನಂದ ನನ್ನನ್ನು ಬೆದರಿಸಿ ಎರಡು ಬಾರಿ ಅತ್ಯಾಚಾರ ಎಸಗಿದರು' ಎಂದು ಯುವತಿ ಬುಧವಾರ ರಾತ್ರಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಹೇಳಿಕೆ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವೇಕಾನಂದನನ್ನು ಬಂಧಿಸಿದ್ದಾರೆ.

ಘಟನೆ ವಿವರ: ಜೂನ್ 16ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಟೆನಿಕಾಯ್ಟ ಟೂರ್ನಿ ನಡೆಯಲಿದೆ ಎಂದು ನಂಬಿಸಿ ವಿವೇಕಾನಂದ, ಯುವತಿಯನ್ನು ಜೂನ್ 15ರಂದು ಸಂಜೆಯೇ ಕರೆದೊಯ್ದು ಈ ಕೃತ್ಯ ನಡೆಸಿದ್ದಾನೆ. ಜೂನ್ 16ರ ಮುಂಜಾನೆ ಯುವತಿ ತನ್ನ ಪೋಷಕರಿಗೆ ಮೊಬೈಲ್ ಮೂಲಕ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಅನಂತರ ಯುವತಿ ಆಂಧ್ರದ ವಿಶಾಖಪಟ್ಟಣಂನ ತನ್ನ ಸ್ನೇಹಿತನಿಗೆ (ಬಿಪಿಇಡಿ ಕಾಲೇಜಿನಲ್ಲಿ ಸಹಪಾಠಿ) ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ. ಆಕೆಗೆ ಸಾಂತ್ವನ ಹೇಳಿದ ಆತ, ವಿಶಾಖಪಟ್ಟಣಂಗೆ ಬರುವಂತೆ ಹೇಳಿದ್ದಾನೆ. ನಂತರ ಯುವತಿ ಸ್ನೇಹಿತನ ಮನೆಗೆ ತೆರಳಿದ್ದಾಳೆ. ವಿಶಾಖಪಟ್ಟಣಂ ಪೊಲೀಸ್ ಠಾಣೆಗೂ ದೂರು ನೀಡಲಾಗಿದೆ ಎಂದು ಸ್ನೇಹಿತ ತಿಳಿಸಿದ್ದಾನೆ.

ಇತ್ತ ಯುವತಿಯ ಪೋಷಕರು ವಿವೇಕಾನಂದ ಮೇಲೆ ಅನುಮಾನ ವ್ಯಕ್ತಪಡಿಸಿ ಜೂನ್ 17ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿವೇಕಾನಂದನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಕೆ.ಆರ್. ಪೇಟೆ ತಾಲ್ಲೂಕಿನ ಶೀಳನೆರೆ ಗ್ರಾಮದ ವಿವೇಕಾನಂದ 20 ವರ್ಷಗಳಿಂದ ಕ್ಯಾತನಹಳ್ಳಿ ಯ ಅನುದಾನಿತ ಸರ್ ಎಂ. ವಿಶ್ವೇಶ್ವರಯ್ಯ ಪದವಿಪೂರ್ವ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕನಾಗಿದ್ದಾನೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.