ವಿಜಾಪುರ: ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆಯ ವೇಳೆ ಎರಡು ಗುಂಪುಗಳ ಮಧ್ಯೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿ, ಅಭ್ಯರ್ಥಿಯ ಬೆಂಬಲಿಗನೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಬುಧವಾರ ಇಲ್ಲಿ ನಡೆದಿದೆ. ಈ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ.
`ಇರ್ಫಾನ್ ಕಲಾದಗಿ ಎಂಬಾತ ಗಾಳಿಯಲ್ಲಿ ಗುಂಡು ಹಾರಿಸಿ, ತನ್ನ ಸಹಚರರೊಂದಿಗೆ ಜೀಪ್ನಲ್ಲಿ ಪರಾರಿಯಾಗಿದ್ದಾನೆ. ಆತನ ಪತ್ತೆ ಕಾರ್ಯ ನಡೆದಿದೆ. ಆತನ ಬೆಂಬಲದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಸೈಯದ್ಗೌಸ್ ಅಲಿಯಾಸ್ ಆಸೀಫ್ ಇನಾಮದಾರ ಎಂಬಾತನನ್ನು ಬಂಧಿಸಲಾಗಿದೆ~ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಸಿ. ರಾಜಪ್ಪ ಹೇಳಿದರು.
`ವಿಜಾಪುರ ನಗರ ವಿಧಾನಸಭಾ ಮತಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಫಯಾಜ್ ಮುಶ್ರಿಫ್ ಬೆಂಬಲಿತ ಮೊಯಿನ್ಅಹ್ಮದ್ ಶೇಖ್ ಮತ್ತು ಇರ್ಫಾನ್ ಕಲಾದಗಿ ಬೆಂಬಲಿತ ಸೈಯದ್ಗೌಸ್ ಅಲಿಯಾಸ್ ಆಸೀಫ್ ಇನಾಮದಾರ ಸ್ಪರ್ಧಿಸಿದ್ದರು~ ಎಂದು ರಾಜಪ್ಪ ಹೇಳಿದರು.
`ಚುನಾವಣೆಗೆ ಸ್ಪರ್ಧಿಸದಂತೆ ಕಳೆದ ಮೂರು ದಿನಗಳಿಂದ ಆತ ನನ್ನ ಮೇಲೆ ಒತ್ತಡ ತಂದಿದ್ದ. ಜೀವ ಬೆದರಿಕೆಯನ್ನೂ ಹಾಕಿದ್ದ. ಮುಂಜಾನೆ 9.20ರ ಸುಮಾರು ಏಕಾಏಕಿ ನನ್ನ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ~ ಎಂದು ಮತ್ತೊಬ್ಬ ಅಭ್ಯರ್ಥಿ ಮೊಯಿನ್ಅಹ್ಮದ್ ಶೇಖ್ ದೂರು ನೀಡಿದ್ದಾರೆ.
`ಆತ್ಮರಕ್ಷಣೆಗಾಗಿ ಇರ್ಫಾನ್ ಕಲಾದಗಿ ಪಿಸ್ತೂಲ್ ಪರವಾನಿಗೆ ಪಡೆದಿದ್ದ. ಅದೇ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾನೆ. ಆತನಿಗೆ ನೀಡಿರುವ ಪಿಸ್ತೂಲ್ನ ಪರವಾನಿಗೆಯನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು~ ಎಂದರು.
`ಬಂದೂಕು ಸಂಸ್ಕೃತಿ ಕಾಂಗ್ರೆಸ್ನಲ್ಲಿ ಇಲ್ಲ. ಈ ಘಟನೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ವರದಿ ಪಡೆದು ಅಭ್ಯರ್ಥಿ ಅಥವಾ ಸದಸ್ಯ ತಪ್ಪಿತಸ್ಥನಾಗಿದ್ದರೆ ಆತನನ್ನು ಅನರ್ಹ ಗೊಳಿಸಲಾಗುವುದು~ ಎಂದು ಚುನಾವಣಾಧಿಕಾರಿ ಧ್ಯಾನಪ್ರಕಾಶ ಸಿಂಗ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.