ಮೈಸೂರು: ಗೆಳೆಯನ ಮನೆಯಲ್ಲಿ ನೆಪೋಲಿಯನ್ ರೈಸ್ ಊಟದ ಸವಿ... ಕಾಳಿದಾಸ ರಸ್ತೆಯ ಹೋಟೆಲ್ನಲ್ಲಿ ಖಾದ್ಯದ ರುಚಿ... ಕಾಲೇಜು ಕ್ಯಾಂಪಸ್ನಲ್ಲಿ ಕಳೆದ ರಂಗುರಂಗಿನ ದಿನಗಳ ನೆನಪುಗಳು...
-ಈ ಎಲ್ಲ ಗಳಿಗೆಗಳನ್ನು ಮತ್ತೆ ಮತ್ತೆ ನೆನಪಾಗಿಸಿಕೊಂಡರು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್. ತಾವು ಓದಿದ ಶ್ರೀಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ (ಎಸ್ಜೆಸಿಇ) ಶುಕ್ರವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಕಾಲೇಜು ದಿನಗಳ ಚೇಷ್ಟೆ, ತುಂಟಾಟ, ಪರೀಕ್ಷೆಯಲ್ಲಿ ಫೇಲಾಗಿದ್ದನ್ನು ನೆನಪಿಸಿಕೊಂಡು ಭಾವೋದ್ವೇಗಕ್ಕೆ ಒಳಗಾದರು. ಮುಖ್ಯಮಂತ್ರಿಯಾಗಿದ್ದರೂ ಥೇಟ್ ವಿದ್ಯಾರ್ಥಿಯಂತೆ ಕಾಲೇಜು ಕ್ಯಾಂಪಸ್ನಲ್ಲಿ ಸುತ್ತಾಡಿ ಕಳೆದುಹೋದ ಅಮೂಲ್ಯ ದಿನಗಳನ್ನು ಮೆಲುಕು ಹಾಕಿದರು.
`1992ರಿಂದ 96ರ ಅವಧಿಯಲ್ಲಿ ಅಖಿಲೇಶ್, ಎಸ್ಜೆಸಿಇ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ನಲ್ಲಿ ಅಭ್ಯಾಸ ಮಾಡುತ್ತಿದ್ದರು. ಆದರೆ, ತಾವು ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಲಾಯಂಸಿಂಗ್ ಯಾದವ್ ಅವರ ಪುತ್ರ ಎಂದು ಎಲ್ಲಿಯೂ ಹೇಳಿಕೊಂಡಿರಲಿಲ್ಲ' ಎಂಬುದನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಜಿ. ಸಂಗಮೇಶ್ವರ್ ಬಹಿರಂಗಪಡಿಸಿದಾಗ ಅಖಿಲೇಶ್ ಪತ್ನಿ ಡಿಂಪಲ್, ಒಂದು ಕ್ಷಣ ಪತಿಯನ್ನು ದಿಟ್ಟಿಸಿ ನೋಡಿ ಮುಗುಳ್ನಕ್ಕರು.
ಅಂದು ಒಬ್ಬಂಟಿ; ಇಂದು ಮುಖ್ಯಮಂತ್ರಿ! `1992ರಲ್ಲಿ ಬಿ.ಇ ಓದಲು ದೂರದ ಉತ್ತರ ಪ್ರದೇಶದಿಂದ ಒಬ್ಬಂಟಿಯಾಗಿ ಮೈಸೂರಿಗೆ ಬಂದಿದ್ದೆ. ನನ್ನ ಜತೆ ಪೋಷಕರು ಬಂದಿರಲಿಲ್ಲ. ಆದರೆ, ಇಂದು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ, ಸಂಸದೆಯ ಪತಿಯಾಗಿ, ಮೂವರು ಮಕ್ಕಳ ತಂದೆಯಾಗಿ ಮೈಸೂರಿಗೆ ಬಂದಿದ್ದೇನೆ. ಮೈಸೂರು ನನಗೆ ಕಲಿಸಿದ ಪಾಠ ದೊಡ್ಡದು' ಎಂದು ಅಖಿಲೇಶ್ ಹೇಳಿದಾಗ ವಿದ್ಯಾರ್ಥಿಗಳ ಕರತಾಡನ ಮುಗಿಲು ಮುಟ್ಟಿತು.
`ಮೊದಲ ಸೆಮಿಸ್ಟರ್ ಫಲಿತಾಂಶ ಬಂದಾಗ ನಾನು ಬುದ್ಧಿವಂತ ವಿದ್ಯಾರ್ಥಿ ಎಂಬಂತೆ ಪೋಸ್ ಕೊಡಲು ಪ್ರಾಂಶುಪಾಲರ ಛೇಂಬರ್ ಮತ್ತು ನೋಟಿಸ್ ಬೋರ್ಡ್ನತ್ತ ಸುಳಿದಾಡುತ್ತಿದ್ದೆ. ಸ್ನೇಹಿತರೆಲ್ಲ ಕ್ಯಾಂಟೀನ್ನಲ್ಲಿ ಕಾಲ ಕಳೆಯುತ್ತಿದ್ದರು. ಅಂತಿಮವಾಗಿ ಫಲಿತಾಂಶ ಪ್ರಕಟವಾದಾಗ, ಸ್ನೇಹಿತರು ಏಳರಲ್ಲಿ ಆರು ವಿಷಯಗಳಲ್ಲಿ ಪಾಸಾಗಿದ್ದರು. ನಾನು, ಒಂದರಲ್ಲಿ ತೇರ್ಗಡೆಯಾಗಿ ಆರರಲ್ಲಿ ಫೇಲಾಗಿದ್ದೆ. ಆ ಬಳಿಕವಷ್ಟೇ ನನಗೆ ಗೊತ್ತಾಗಿದ್ದು, ಉತ್ತಮ ಸ್ನೇಹಿತರು ಇದ್ದ ಕಾರಣಕ್ಕೇ ನಾನು ಅದೊಂದು ವಿಷಯದಲ್ಲಿ ಪಾಸಾಗಿದ್ದೆ ಎಂದು. ಎರಡನೇ ಸೆಮಿಸ್ಟರ್ನಲ್ಲಿ 15 ವಿಷಯಗಳಿಗೆ ಪರೀಕ್ಷೆ ಬರೆದು 11ರಲ್ಲಿ ಪಾಸಾಗಿದ್ದೆ. `ಬಾತೇಂ ಭೂಲ್ ಜಾತೇ ಹೈ; ಕುಚ್ ಯಾದ್ ರೆಹ್ ಜಾತೇ ಹೈ' (ಮಾತು ಮರೆತು ಹೋಗುತ್ತದೆ, ನೆನಪು ಸದಾ ಕಾಲ ಉಳಿಯುತ್ತದೆ) ಎಂಬಂತೆ ಇಲ್ಲಿ ಕಳೆದ ದಿನಗಳನ್ನು ಎಂದೂ ಮರೆಯಲಾಗದು' ಎಂದು ಮೈಸೂರಿನಲ್ಲಿ ಕಳೆದ ದಿನಗಳನ್ನು ಸ್ಮರಿಸಿದರು.
ಇದಕ್ಕೂ ಮುನ್ನ ಕಾಲೇಜು ಸಹಪಾಠಿಯಾಗಿದ್ದ ಮಹಮ್ಮದ್ ಅಶ್ರಫ್ ಮನೆಗೆ ಭೇಟಿ ನೀಡಿದ ಅಖಿಲೇಶ್, ತಮ್ಮ ಇಷ್ಟದ ನೆಪೋಲಿಯನ್ ರೈಸ್, ಆಲೂ ಬೋಂಡಾ, ವೆಜ್-ಕರಿ, ಪನೀರ್, ಕೇಕ್ ಸವಿದರು. ಪತ್ನಿ ಡಿಂಪಲ್, ಮಕ್ಕಳಾದ ಅದಿತಿ, ಅರ್ಜುನ್, ಟೀನಾ ಅವರನ್ನು ಅಶ್ರಫ್ ಕುಟುಂಬಕ್ಕೆ ಪರಿಚಯಿಸಿದರು. ಬಳಿಕ ಸುತ್ತೂರು ಮಠಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಜತೆ ಸಮಾಲೋಚನೆ ನಡೆಸಿದರು. ಎಸ್ಜೆಸಿಇ ಕಾಲೇಜಿನ ಉಪ ಪ್ರಾಂಶುಪಾಲ ಶಕೀಬ್-ಉರ್-ರೆಹಮಾನ್, ಮತ್ತೊಬ್ಬ ಗೆಳೆಯ ದಶರಥ ರೈ ಮನೆಗೆ ಭೇಟಿ ನೀಡಿ ಸಂಭ್ರಮ ಹಂಚಿಕೊಂಡರು.
ಕಾಳಿದಾಸ ರಸ್ತೆಯಲ್ಲಿರುವ, ತಾವು ವಿದ್ಯಾರ್ಥಿಯಾಗಿದ್ದಾಗ ಅತಿ ಹೆಚ್ಚು ಭೇಟಿ ನೀಡುತ್ತಿದ್ದ ಇಂದ್ರಾಸ್ ಸ್ವೀಟ್ಸ್ ಅಂಡ್ ಸ್ಪೈಸ್ ಹೋಟೆಲ್ಗೆ ತೆರಳಿ `ಆಟೆಕಾ ಹಲ್ವ' ರುಚಿ ಸವಿದರು. ನಂತರ ಅದೇ ರಸ್ತೆಯಲ್ಲಿರುವ, ಕಪಾಲಿ ಪೇಯಿಂಗ್ ಗೆಸ್ಟ್ಗೆ ತೆರಳಿ ಪತ್ನಿ ಮತ್ತು ಮಕ್ಕಳಿಗೆ ತಾವು ಉಳಿದುಕೊಂಡಿದ್ದ ಕೋಣೆಯನ್ನು ಪರಿಚಯಿಸಿದರು. ಮನೆಯ ಮುಂಭಾಗದಲ್ಲೇ ಇದ್ದ ಅಡುಗೆ ಭಟ್ಟ (ಅಖಿಲೇಶ್ಗೆ ಅಡುಗೆ ಮಾಡಿಕೊಡುತ್ತಿದ್ದರು) ಚಂದ್ರಶೇಖರ್ ಅವರನ್ನು ಪ್ರೀತಿಯಿಂದ ಮಾತನಾಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.