ADVERTISEMENT

ರಾತ್ರಿ ಅಷ್ಟೊಂದು ಹಣ ಹೇಗೆ ಬಂತು?

ಕುಣಿಗಲ್; ₹ 13 ಲಕ್ಷ ದರೋಡೆ ಪ್ರಕರಣ, ತನಿಖೆ ಚುರುಕುಗೊಳಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 20:28 IST
Last Updated 11 ಜೂನ್ 2018, 20:28 IST

ಕುಣಿಗಲ್: ಪಟ್ಟಣದ ಹೊರವಲಯದ ಬಿದನಗೆರೆ ಸತ್ಯ ಶನೇಶ್ವರಸ್ವಾಮಿ ದೇವಾಲಯದ ಧರ್ಮದರ್ಶಿ ಧನಂಜಯಸ್ವಾಮಿ ಅವರ ಕಾರು ಅಡ್ಡಗಟ್ಟಿ ₹ 13 ಲಕ್ಷ ನಗದನ್ನು ಶನಿವಾರ ರಾತ್ರಿ ದುಷ್ಕರ್ಮಿಗಳು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ದರೋಡೆಕೋರರ ಪತ್ತೆ ಕಾರ್ಯದ ಜತೆಗೆ ಧನಂಜಯಸ್ವಾಮಿ ಅವರ ಬಳಿ ಅಷ್ಟು ಹೊತ್ತಿನಲ್ಲಿ ₹ 13 ಲಕ್ಷ ಹಣ ಹೇಗೆ ಬಂತು ಎಂಬುದರ ವಿಚಾರಣೆ ನಡೆಸಿದ್ದಾರೆ.

ಸತ್ಯ ಶನೇಶ್ವರಸ್ವಾಮಿ ದೇವಾಲಯದ ಅಕ್ಕಪಕ್ಕ ಬಸವಣ್ಣ, ಆಂಜನೇಯ ಸ್ವಾಮಿ ಮೂರ್ತಿಗಳು ಇವೆ. ಆವರಣದಲ್ಲಿ ಮೂರು ಹುಂಡಿಗಳಿದ್ದು, ಎರಡು ವಾರಗಳಿಂದ ಹುಂಡಿ ತೆರೆದು ಹಣ ಎಣಿಕೆ ಮಾಡಿರಲಿಲ್ಲ. ಆ ಹಣವನ್ನು ಶನಿವಾರ ಎಣಿಕೆ ಮಾಡಲಾಗಿತ್ತು ಎಂದು ಧನಂಜಯಸ್ವಾಮಿ ಪೊಲೀಸರಿಗೆ ತಿಳಿಸಿದ್ದಾರೆ.

ADVERTISEMENT

ಅದೇ ರೀತಿ ದೇವಾಲಯದ ಆವರಣದಲ್ಲಿಯೇ 150 ಅಡಿ ಎತ್ತರದ ಬೃಹತ್ ಆಂಜನೇಯಸ್ವಾಮಿ ಪ್ರತಿಷ್ಠಾಪನೆಗಾಗಿ ಕಾಮಗಾರಿ ನಡೆಯುತ್ತಿದ್ದು, ಅದಕ್ಕಾಗಿ ಭಕ್ತರು ಕೊಟ್ಟ ದೇಣಿಗೆ ಹಣವು ಇತ್ತು. ಅಲ್ಲದೇ, ಶನಿವಾರ ಬೆಳಿಗ್ಗೆಯಿಂದ ರಾತ್ರಿ 10ರವರೆಗೆ ಭಕ್ತರು ಪೂಜೆ, ಹರಕೆ ರೂಪದಲ್ಲಿ ಸಲ್ಲಿಸಿದ ಕಾಣಿಕೆ ಮೊತ್ತವೂ ಸೇರಿ ₹ 13 ಲಕ್ಷ ನನ್ನ ಬಳಿ ಇತ್ತು ಎಂದು ಧನಂಜಯಸ್ವಾಮಿ ಪೊಲೀಸರಿಗೆ ವಿವರಣೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.