ADVERTISEMENT

ಲಂಚ ಕೊಡಬೇಡಿ: ಉದ್ಯಮಿಗಳಿಗೆ ನಾರಾಯಣಮೂರ್ತಿ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ಹುಬ್ಬಳ್ಳಿ:  `ಭ್ರಷ್ಟಾಚಾರವನ್ನು ನಿಯಂತ್ರಿಸಲು ಲೋಕಪಾಲ್‌ನಂತಹ ಸಂಸ್ಥೆಗಳು ಅಗತ್ಯ ನಿಜ. ಆದರೆ, ಲಂಚ ಕೊಡುವುದಿಲ್ಲ ಎಂಬ ಗಟ್ಟಿ ನಿರ್ಧಾರಕ್ಕೆ ನಾವು ಬರುವುದೂ ಅಷ್ಟೇ ಮುಖ್ಯ. ಉದ್ಯಮ ಹಾಗೂ ಕಾರ್ಪೊರೇಟ್ ವಲಯದಲ್ಲಿರುವರಂತೂ ಅಧಿಕಾರಿ ಗಳಿಗೆ ಲಂಚ ಕೊಡಲೇಬಾರದು~ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಶನಿವಾರ ಇಲ್ಲಿ ಹೇಳಿದರು.

ದೇಶಪಾಂಡೆ ಪ್ರತಿಷ್ಠಾನ ಏರ್ಪ ಡಿಸಿದ್ದ `ಟೈಕಾನ್ ಹುಬ್ಬಳ್ಳಿ -2012~ ಕಾರ್ಯಕ್ರಮದಲ್ಲಿ ಉದ್ಯಮಿ ಗಳೊಂದಿಗೆ ಸಂವಾದ ನಡೆಸಿದ ಅವರು, `ಸರ್ಕಾರದ ಮಟ್ಟದಲ್ಲಿ ನಿಮ್ಮ ಅಧಿಕೃತ ಕೆಲಸ ಆಗಲು ತಾಳ್ಮೆ ಬೇಕು; ತಾಳ್ಮೆಯಿಂದ ನಾಲ್ಕು ಸಲ ಓಡಾಡಿದ ಮೇಲಾದರೂ ಸಂಬಂಧಿಸಿದ ಅಧಿಕಾರಿ ನಿಮ್ಮ ಕೆಲಸವನ್ನು ಲಂಚ ಪಡೆಯದೆ ಮಾಡಿಕೊಡುತ್ತಾನೆ~ ಎಂದರು.

`ಉದ್ಯಮಿಗಳಾದ ನೀವು ಪ್ರಾಮಾ ಣಿಕರು, ನಿಮ್ಮ ವ್ಯವಹಾರ ಪಾರ ದರ್ಶಕವಾಗಿದೆ ಎನ್ನುವ ಮನವರಿಕೆ ಅಧಿಕಾರಿಗಳಿಗೆ ಆಗಬೇಕು. ಆಗ ಸಹಜವಾಗಿಯೇ ಅವರಿಗೂ ಭಯ ಹುಟ್ಟಿ ನಿಮ್ಮ ಕಡತಕ್ಕೆ ಮುಕ್ತಿ ದೊರೆಯುತ್ತದೆ. ಒಂದು ಮಾತನ್ನು ನೆನಪಿಡಿ. ಎಂತಹ ಭ್ರಷ್ಟ ಅಧಿಕಾರಿಯಾದರೂ, ಕೆಲಸ ಮುಗಿಸಿ ಮನೆಗೆ ಹೋದ ಮೇಲೆ, ತನ್ನ ಅಪ್ಪ ಲಂಚಕೋರ ಎಂದು ಮಕ್ಕಳಿಂದ ಬಹಿರಂಗವಾಗಿ ಕರೆಸಿಕೊಳ್ಳಲು ಬಯಸುವುದಿಲ್ಲ~ ಎಂಬ ಅರ್ಥಪೂರ್ಣ ಮಾತನ್ನು ನಾರಾಯಣಮೂರ್ತಿ ಉದ್ಯಮಿಗಳಿಗೆ ಹೇಳಿದರು. `ಉದ್ಯಮಿಗಳು ಸರ್ಕಾರದ ನಿಯಮಾನುಸಾರ ಎಲ್ಲ ಅಗತ್ಯ ತೆರಿಗೆಗಳನ್ನು ಕಟ್ಟಬೇಕು. ಕರ ವಂಚನೆ ಮಾಡಬಾರದು. ಇನ್ಫೋಸಿಸ್ ಸ್ಥಾಪನೆಯಾದ ದಿನದಿಂದ ಇದುವರೆಗೆ  ನಾವು ಯಾವುದೇ ಅಧಿಕಾರಿಗೆ ಒಂದು ಪೈಸೆ ಲಂಚವನ್ನೂ ನೀಡಿಲ್ಲ~ ಎಂದು ಹೆಮ್ಮೆಯಿಂದ ನುಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.