ಚಿತ್ರದುರ್ಗ: ಲಾರಿಗಳಲ್ಲಿ ಕುರಿಗಳಂತೆ ಮಕ್ಕಳನ್ನು ತುಂಬಿಕೊಂಡು ಶಾಲಾ ಪ್ರವಾಸ ಕರೆ ತಂದಿದ್ದ ಶಿಕ್ಷಕರಿಗೆ ಛೀಮಾರಿ ಹಾಕಿ ತರಾಟೆಗೆ ತೆಗೆದುಕೊಂಡ ಡಿಡಿಪಿಐ ಬಸ್ ವ್ಯವಸ್ಥೆ ಕಲ್ಪಿಸಿದ ಪ್ರಸಂಗ ನಗರದಲ್ಲಿ ಶುಕ್ರವಾರ ನಡೆಯಿತು.
ಹಿರಿಯೂರು ತಾಲೂಕಿನ ರಂಗನಾಥಪುರ, ಉಪ್ಪಳಗೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 100ಕ್ಕೂ ಹೆಚ್ಚು ಮಕ್ಕಳನ್ನು ಶಿಕ್ಷಕರು ಎರಡು ಲಾರಿಗಳಲ್ಲಿ ನಗರದ ಕೋಟೆ ವೀಕ್ಷಿಸಲು ಪ್ರವಾಸ ಕರೆ ತಂದಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಡಿಡಿಪಿಐ ಮಂಜುನಾಥ್ ಕೋಟೆ ಆವರಣಕ್ಕೆ ಬಂದು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.
ಎಸ್ಡಿಎಂಸಿ ಸಮಿತಿ ಲಾರಿ ವ್ಯವಸ್ಥೆ ಕಲ್ಪಿಸಿದ್ದರಿಂದ ಪ್ರವಾಸಕ್ಕೆ ಕರೆ ತರಬೇಕಾಯಿತು ಎಂದು ಶಿಕ್ಷಕರು ನೆಪ ಹೇಳಿದರು. ನಂತರ ಮಕ್ಕಳಿಗೆ ನಿರಾಸೆ ಆಗುವುದು ಬೇಡ, ಅವರಿಗೆ ಕೋಟೆ, ಮುರುಘಾಮಠ ಎಲ್ಲ ತೋರಿಸಿ ಕರೆದುಕೊಂಡು ಹೋಗಿ ಎಂದು ಬಸ್ ವ್ಯವಸ್ಥೆ ಕಲ್ಪಿಸಿದರು. ಆರ್ಟಿಒ ಕೂಡ ಸ್ಥಳಕ್ಕೆ ಆಗಮಿಸಿ ಲಾರಿ ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸಿದರು.
ಶಿಕ್ಷಕರು ಮಕ್ಕಳನ್ನು ಶಾಲಾ ಪ್ರವಾಸ ಕರೆತರಲು ಶಿಕ್ಷಣ ಇಲಾಖೆ ಅನುಮತಿ ಕೂಡ ಪಡೆದಿರಲಿಲ್ಲ. ಜತೆಗೆ ಡಿ. 31ರವರೆಗೆ ಮಾತ್ರ ಶಾಲಾ ಪ್ರವಾಸಕ್ಕೆ ಅವಕಾಶ ನೀಡಲಾಗಿದೆ.
ಆದರೆ, ಈ ಶಿಕ್ಷಕರು ಇಲಾಖೆ ಅನುಮತಿಯಿಲ್ಲದೇ ಜನವರಿಯಲ್ಲಿ ಪ್ರವಾಸ ಕರೆತಂದಿದ್ದಾರೆ. ಜತೆಗೆ, ಪ್ರವಾಸಕ್ಕಾಗಿ ಪ್ರತಿ ವಿದ್ಯಾರ್ಥಿಯಿಂದ ರೂ. 70 ಪಡೆದಿದ್ದಾರೆ ಎಂದು ಬಿಇಒ ತಿಳಿಸಿದ್ದಾರೆ.
ಮಕ್ಕಳನ್ನು ಕುರಿಗಳಂತೆ ಲಾರಿಯಲ್ಲಿ ಪ್ರವಾಸಕ್ಕೆ ಕರೆ ತಂದಿದ್ದಾರೆ. ಜತೆಗೆ ಇಲಾಖೆ ಅನುಮತಿ ಕೂಡ ಪಡೆದಿಲ್ಲ. ಹಾಗಾಗಿ, ರಂಗನಾಥಪುರ ಹಾಗೂ ಉಪ್ಪಳಗೆರೆ ಶಾಲೆ ಮುಖ್ಯಶಿಕ್ಷಕರ ವಿರುದ್ಧ ಕ್ರಮ ಜರುಗಿಸುವಂತೆ ಹಿರಿಯೂರು ತಾಲ್ಲೂಕು ಬಿಇಒ ರೇವಣಸಿದ್ದಪ್ಪ ಡಿಡಿಪಿಐಗೆ ಶಿಫಾರಸು ಮಾಡಿದ್ದಾರೆ.
ಲಾರಿಯಲ್ಲಿ ಮಕ್ಕಳನ್ನು ಸಾಗಿಸಿರುವುದಕ್ಕಾಗಿ ಮೊಕದ್ದಮೆ ದಾಖಲಿಸಲಾಗುವುದು. ಲಾರಿ ಚಾಲಕ ಮತ್ತು ಮಾಲೀಕರಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ತೆಂಬದ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.