ADVERTISEMENT

ಲೋಕೋಪಯೋಗಿ ಇಲಾಖೆ ಕಾಮಗಾರಿಗೆ ಕೃತಕ ಮರಳು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಲೋಕೋಪಯೋಗಿ ಇಲಾಖೆ­ಯಿಂದ ಕೈಗೆತ್ತಿಕೊಳ್ಳುವ ಕಾಮ­ಗಾರಿಗಳಿಗೆ ಜಲ್ಲಿಯಿಂದ ತಯಾ­ರಿಸುವ ಕೃತಕ ಮರಳನ್ನೇ ಬಳಸುವಂತೆ ಆದೇಶ ಹೊರಡಿಸಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ರಾಜ್ಯದಲ್ಲಿ ತಿಂಗಳಿಗೆ 33 ಲಕ್ಷ ಟನ್‌ ಮರಳಿನ ಅವಶ್ಯಕತೆ ಇದೆ. ಆದರೆ 8 – 9 ಲಕ್ಷ ಟನ್‌ ಮರಳು ಮಾತ್ರ ಲಭ್ಯವಾಗುತ್ತಿದೆ. ಆದ್ದರಿಂದ ಕೃತಕ ಮರಳು ಬಳಸಲು ನಿರ್ಧರಿಸಲಾಗಿದೆ ಎಂದು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಬಿಡದಿ ಬಳಿ ಕೃತಕ ಮರಳು ತಯಾರಿಕಾ ಘಟಕ ಆರಂಭಿಸಲು ಅನುಮತಿ ನೀಡಲಾಗಿದೆ. ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಮರಳು ಬ್ಲಾಕ್‌ಗಳನ್ನು ಗುರುತಿಸಿ ಹರಾಜು ಹಾಕಬೇಕು.

ಈ ನಿಟ್ಟಿನಲ್ಲಿ ಒಂದು ತಿಂಗಳಲ್ಲಿ ಹೊಸ ಮರಳು ನೀತಿ ಜಾರಿ­ಗೊಳಿಸಲಾಗುವುದು ಎಂದರು.

‘ಮರಳನ್ನು ಸಹ ಗಣಿಗಾರಿಕೆ ಎಂದು ನ್ಯಾಯಾಲಯ ಪರಿಗಣಿಸಿದೆ. ಅಷ್ಟೇ  ಅಲ್ಲದೆ ಮರಳು ಗಣಿಗಾರಿಕೆಗೆ ಅನುಮತಿ ನೀಡುವ ಸಂಬಂಧ ನಿಮ್ಮದೇ ಆದ ನೀತಿ ರೂಪಿಸಿಕೊಳ್ಳಿ’ ಎಂದು ರಾಜ್ಯಗಳಿಗೆ ಸೂಚಿಸಿದೆ ಎಂದರು.

ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಮರಳು ಹಾಗೂ ಜಲ್ಲಿ ಗಣಿಗಾರಿಕೆಗೆ ಪರಿಸರ ಇಲಾ­­ಖೆಯ ಅನುಮತಿ ಪಡೆಯ­ಬೇಕಾಗುತ್ತದೆ. ಇದನ್ನು ಗಮನ ದಲ್ಲಿಟ್ಟು­ಕೊಂಡು ಹೊಸ ನೀತಿಯನ್ನು ಸಮಗ್ರವಾಗಿ ರೂಪಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.