ADVERTISEMENT

ವಾಲುತ್ತಿದೆ ಪಟ್ಟದಕಲ್ಲು ದೇವಾಲಯ

ವಿಶ್ವ ಪರಂಪರೆ ಸ್ಮಾರಕಕ್ಕೆ ಮಲಪ್ರಭಾ ಪ್ರವಾಹದಿಂದ ಧಕ್ಕೆ?

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2014, 19:30 IST
Last Updated 5 ಫೆಬ್ರುವರಿ 2014, 19:30 IST

ಬಾಗಲಕೋಟೆ: ಬಾದಾಮಿ ಚಾಲುಕ್ಯರ ‘ಸಾಂಸ್ಕೃ­ತಿಕ ಕೇಂದ್ರ’ ವಿಶ್ವ ಪರಂಪರಾ ಸ್ಮಾರಕ­ವಾದ ಪಟ್ಟದ­ಕಲ್ಲಿನ ಐತಿಹಾಸಿಕ ವಿರೂಪಾಕ್ಷ ದೇವಾಲಯ ವಾಲುತ್ತಿದೆ. ಮರಳು ಶಿಲೆಯಿಂದ ನಿರ್ಮಾಣವಾಗಿರುವ ಈ ದೇವಾಲಯದ ಎಡ ಭಾಗದ ಗೋಡೆ ಕಣ್ಣ­ಳತೆ­­ಯಿಂದ ಗುರುತಿಸಲಾಗದಷ್ಟು ಅಂದರೆ, ಅಂದಾಜು 6 ಡಿಗ್ರಿಯಷ್ಟು ವಾಲಿರುವುದಾಗಿ ವಾಸ್ತು­ಶಿಲ್ಪ ತಜ್ಞರ ಪರೀಕ್ಷೆಯಿಂದ ದೃಢಪಟ್ಟಿದೆ.

ಬೃಹತ್‌ ಗಾತ್ರದ ಗೋಡೆ ಅಲ್ಪಪ್ರಮಾಣದಲ್ಲಿ ವಾಲಿ­ರು­ವುದರಿಂದ ಕಲ್ಲುಗಳು ಬಿಚ್ಚಿಕೊಂಡಿ­ರು­ವುದು (ಕದಲಿರುವ) ಕಾಣುತ್ತದೆ. ಆದರೆ ದೇವಾ­ಲಯದ ಗೋಡೆ ಎಂದಿನಿಂದ ವಾಲುತ್ತಿದೆ? ಯಾವ ಕಾರಣಕ್ಕೆ ವಾಲುತ್ತಿದೆ? ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಪ್ರವಾಹ ಪರಿಣಾಮದ ಶಂಕೆ: ‘ದೇವಾಲಯದ ಮುಂಭಾಗ­ದಲ್ಲಿ ಉತ್ತರ ವಾಹಿನಿಯಾಗಿ ಹರಿಯುವ ಮಲಪ್ರಭಾ ನದಿಯು 1994, 2002, 2007 ಮತ್ತು 2009ರಲ್ಲಿ ಭಾರಿ ಮಳೆ­ಯಿಂದ ಉಕ್ಕಿ ಹರಿದ ಪರಿಣಾಮ ಈ ದೇವಾಲಯ ಪ್ರವಾಹಕ್ಕೆ ತುತ್ತಾಗಿತ್ತು. ಆಗ ಹಲವು ದಿನಗಳ ಕಾಲ ದೇವಾಲಯದ ಆವರಣ­ದಲ್ಲಿ ನೀರು ನಿಂತಿದ್ದರಿಂದ ಅಡಿಪಾಯಕ್ಕೆ ತೊಂದ­ರೆ­­ಯಾಗಿರಬಹುದು’ ಎಂದು ಹೆಸರು ಹೇಳಲು ಇಚ್ಛಿಸದ ಪಟ್ಟದಕಲ್ಲಿನ ಪ್ರವಾಸಿ ಮಾರ್ಗದರ್ಶಿ­ಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ದೇವಾಲಯದ ಕಳಸಕ್ಕೆ 1991ರಲ್ಲಿ ಸಿಡಿಲು ಬಡಿದಿತ್ತು. ಈ ಸಂದರ್ಭದಲ್ಲಿ ದೇವಾಲಯದ ಕಳಸ ಚೂರಾಗಿತ್ತು. ಬಹುಶಃ ಈ ಸಂದರ್ಭದಲ್ಲೂ ದೇವಾಲಯಕ್ಕೆ ಹಾನಿ­ಯಾಗಿರಬಹುದು. ಅಲ್ಲದೇ ಸಣ್ಣ ಪ್ರಮಾಣದ ಭೂ ಕಂಪನದಂತಹ ಪ್ರಾಕೃ­ತಿಕ ಕಾರಣದಿಂದಲೂ ಗೋಡೆ ವಾಲಿರ­ಬಹುದು’ ಎನ್ನುತ್ತಾರೆ ಅವರು.

ಅಪಾಯವಿಲ್ಲ: ‘ದೇವಾಲಯದ ಗೋಡೆ ಅಲ್ಪ­ಪ್ರಮಾಣ­ದಲ್ಲಿ ವಾಲಿದ್ದರೂ ದೇವಾಲಯಕ್ಕೆ ಯಾವುದೇ ಅಪಾಯವಿಲ್ಲ’ ಎಂದು ಭಾರತೀಯ ಪುರಾ­ತತ್ವ ಸರ್ವೇಕ್ಷಣ ಇಲಾಖೆಯ ಬಾದಾಮಿ ವಲಯದ ಹಿರಿಯ ಸಂರಕ್ಷಣಾ ಸಹಾಯಕ ಸೋಮಲ ನಾಯಕ ಬುಧವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಈ ದೇವಾಲಯದ ಎಡ ಗೋಡೆ ಯಾವ ಕಾರಣಕ್ಕೆ ವಾಲಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ’ ಎಂದರು.

‘ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಕೇಂದ್ರ ಕಚೇರಿಯ ನಿರ್ದೇಶಕಿ ಡಾ.ಸತ್ಯಭಾಮ ಮತ್ತು ಇಲಾಖೆಯ ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಡಾ. ಜಿ.ಎಸ್‌.ನರಸಿಂಹನ್‌ ಇತ್ತೀಚೆಗೆ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವಾಲಯಕ್ಕೆ ಇನ್ನೂ ನೂರಾರು ವರ್ಷ ಯಾವುದೇ ಅಪಾಯವಿಲ್ಲ ಎಂದು ದೃಢಪಡಿಸಿದ್ದಾರೆ’ ಎಂದು ತಿಳಿಸಿದರು.

‘ವಾಲಿರುವ ದೇವಾಲಯದ ಗೋಡೆಯನ್ನು ಹುಬ್ಬಳ್ಳಿಯ ವಾಸ್ತುಶಿಲ್ಪ ತಂತ್ರಜ್ಞರಾದ ಜಗದೀಶ ತೋಟ ಎಂಬುವವರು ದೇವಾಲಯ ರೂಪುರೇಷೆ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ವಾಲಿರುವ ನಿರ್ದಿಷ್ಟ ಭಾಗವನ್ನು ಗುರುತು ಹಚ್ಚಿದ್ದಾರೆ’ ಎಂದರು.

‘ದೇವಾಲಯಕ್ಕೆ ಕಿಂಚಿತ್ತೂ ಹಾನಿಯಾಗದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಕಾಳಜಿ ವಹಿಸಿದೆ. ಅಂತಹ ಸಂದರ್ಭ ಎದುರಾದರೆ ದೇವಾಲಯವನ್ನು ಸಂರಕ್ಷಿಸುವ ಉದ್ದೇಶದಿಂದ ವೈಜ್ಞಾನಿಕವಾಗಿ ಬಿಚ್ಚಿ ಕಟ್ಟಲಾಗುವುದು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT