ಹೊಸಪೇಟೆ: ಸರ್ಕಾರದಿಂದ ಸಕಾಲಕ್ಕೆ ವಾರ್ಷಿಕ ಅನುದಾನ ಬಿಡುಗಡೆಯಾಗದ ಕಾರಣ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯ ವಿದ್ಯುತ್ ಶುಲ್ಕ ಭರಿಸಿಲ್ಲ.
‘ಪ್ರತಿ ತಿಂಗಳು ಸರಾಸರಿ ₹ 3.5 ಲಕ್ಷ ವಿದ್ಯುತ್ ಶುಲ್ಕ ಬರುತ್ತದೆ. ಆದರೆ, ಸದ್ಯ ವಿಶ್ವವಿದ್ಯಾಲಯದ ಬ್ಯಾಂಕ್ ಖಾತೆಯಲ್ಲಿ ₹ 12 ಸಾವಿರ ಮಾತ್ರ ಇರುವುದರಿಂದ ಎರಡು ತಿಂಗಳಿನಿಂದ ಶುಲ್ಕ ಪಾವತಿಸಿಲ್ಲ. ಜೊತೆಗೆ ಸಿಬ್ಬಂದಿಗೆ ಸಂಬಳ ನೀಡಲೂ ಆಗುತ್ತಿಲ್ಲ’ ಎಂದು ಕುಲಪತಿ ಪ್ರೊ. ಮಲ್ಲಿಕಾ ಎಸ್. ಘಂಟಿ ತಿಳಿಸಿದರು.
‘ಅಧಿಕಾರಿಗಳು ಹಂಪಿ ವಿ.ವಿ.ಯನ್ನು ರಾಜ್ಯದ ಇತರ ವಿ.ವಿ.ಗಳಂತೆ ನೋಡುತ್ತಾರೆ. ಮೊದಲು ಆ ಮನೋಭಾವ ದೂರವಾಗಬೇಕು. ನಮ್ಮ ವಿ.ವಿ. ಸಂಪೂರ್ಣವಾಗಿ ಸಂಶೋಧನೆಗೆ ಮೀಸಲಾಗಿದೆ. ಸರ್ಕಾರ ಕೊಡುವ ಅನುದಾನ ಬಿಟ್ಟರೆ ಇದಕ್ಕೆ ಬೇರೆ ಕಡೆಯಿಂದ ಆದಾಯ ಬರುವುದಿಲ್ಲ’ ಎಂದು ಹೇಳಿದರು.
‘ಬೆಳ್ಳಿ ಹಬ್ಬದ ಅಂಗವಾಗಿ ವರ್ಷವಿಡೀ ಕಾರ್ಯಕ್ರಮ ನಡೆಸಲು ₹25 ಕೋಟಿ ನೀಡುವುದಾಗಿ ಸ್ವತಃ ಮುಖ್ಯಮಂತ್ರಿಯವರೇ ಭರವಸೆ ನೀಡಿದ್ದಾರೆ. ಬಜೆಟ್ನಲ್ಲಿಯೂ ಘೋಷಿಸಲಾಗಿದೆ. ಹೀಗಿದ್ದರೂ ಅಧಿಕಾರಿಗಳು ಹಣ ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ತಿಳಿಸಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.