ಹೊಸಪೇಟೆ: ಇಲ್ಲಿನ ಆದರ್ಶ ಕಾಲೊನಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಜಡೇಶ್ ರೆಡ್ಡಿ ಆದಾಯಕ್ಕಿಂತ ಹೆಚ್ಚು ಆಸ್ತಿಗಳನ್ನು ಹೊಂದಿದ್ದಾರೆಂಬ ಎಂಬ ದೂರಿನನ್ವಯ ಲೋಕಾಯುಕ್ತ ಅಧಿಕಾರಿಗಳ ತಂಡ ಗುರುವಾರ ಬೆಳಿಗ್ಗೆ ದಾಳಿ ನಡೆಸಿ ಅಪಾರ ಆಸ್ತಿ, ನಗದು ಹಣ, ಮಹತ್ವದ ದಾಖಲೆಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.
ಬಳ್ಳಾರಿಯ ಲೋಕಾಯುಕ್ತ ಡಿವೈಎಸ್ಪಿ ಎಂ.ಎಂ. ದೇಸಾಯಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದಾರೆ. ಜೆಪಿ ನಗರದಲ್ಲಿ ಜಡೇಶ್ ರೆಡ್ಡಿ ವಾಸವಾಗಿರುವ ಮನೆ, ತೋರಣಗಲ್ಲಿನಲ್ಲಿರುವ ಅವರ ಅಳಿಯನ ಮನೆ, ಕೂಡ್ಲಿಗಿ ತಾಲ್ಲೂಕಿನ ಆಲೂರಿನಲ್ಲಿರುವ ಅವರ ಸ್ವಂತ ನಿವಾಸಗಳ ಮೇಲೆ ಏಕ ಕಾಲಕ್ಕೆ ದಾಳಿ ಮಾಡಿ ಆತನ ಆದಾಯದ ಮೂಲ, ಹೊಂದಿರುವ ಆಸ್ತಿ, ನಗದು ಹಣ ಸೇರಿದಂತೆ ಮಹತ್ವದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಜಡೇಶ್ ರೆಡ್ಡಿ ಅವರು ಶಿಕ್ಷಕ ವೃತ್ತಿ ಜೊತೆಗೆ ಚೀಟಿ ಹಾಗೂ ಲೇವಾದೇವಿ ವ್ಯವಹಾರ ಮಾಡುವ ಮೂಲಕ ಅಪಾರ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ
ವಶಪಡಿಸಿಕೊಂಡ ವಸ್ತುಗಳ ವಿವರ: 9.57ಲಕ್ಷ ನಗದು, ಇನೋವಾ ಕಾರು (ಮೌಲ್ಯ 14ಲಕ್ಷ), 12ಸೈಟ್ಗಳು (ಮೌಲ್ಯ15ಲಕ್ಷ), 616 ಗ್ರಾಂ ಬಂಗಾರ, 3ಕೆಜಿ 310ಗ್ರಾಂ ಬೆಳ್ಳಿ, ದ್ವಿಚಕ್ರ ವಾಹನ (ಮೌಲ್ಯ45ಸಾವಿರ) 25 ಲಕ್ಷ ಮೌಲ್ಯದ ನಿವಾಸ, ವಿವಿಧ ಬ್ಯಾಂಕುಗಳಲ್ಲಿ ಹೊಂದಿರುವ ಖಾತೆಗಳು ವಿವರ ಹಾಗೂ 3ಲಕ್ಷ ಮೌಲ್ಯದ ಕೃಷಿ ಭೂಮಿಯ ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.