ದಾವಣಗೆರೆ: ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ವೇತನಗಳನ್ನು ಪಡೆಯಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಶೀಘ್ರವೇ ಆರಂಭವಾಗಲಿದೆ. ತಹಶೀಲ್ದಾರರ ಕಚೇರಿಗಳಲ್ಲಿ ಉಚಿತವಾಗಿ ಈ ಸೇವೆಯನ್ನು ಪಡೆಯಬಹುದು.
ಮುಂದಿನ ದಿನಗಳಲ್ಲಿ, ಅನರ್ಹರು ಸೌಲಭ್ಯ ಪಡೆಯುವುದನ್ನು ತಡೆಯಬೇಕು ಎಂಬ ಉದ್ದೇಶದಿಂದ, ತಹಶೀಲ್ದಾರರ ಕಚೇರಿಯಲ್ಲಿಯೇ ಆನ್ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲು ಸರ್ಕಾರ ಯೋಜಿಸಿದೆ. ಈ ಮಾಸಾಂತ್ಯದೊಳಗೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಹೊಸ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ ಎಂದು ಕಂದಾಯ ಇಲಾಖೆ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.
ಪ್ರಸ್ತತ ಸಾಮಾಜಿಕ ಭದ್ರತಾ ಯೋಜನೆ ಸೌಲಭ್ಯ ಪಡೆಯಲು `ನೆಮ್ಮದಿ~ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕಿದೆ. ಇಂತಿಷ್ಟು ಶುಲ್ಕ ನೀಡಬೇಕಾಗುತ್ತದೆ. ಹೊಸ ವ್ಯವಸ್ಥೆಯಲ್ಲಿ ಈ ಸೇವೆ ಉಚಿತವಾಗಿ ದೊರೆಯಲಿದೆ.
ಸಾಮಾಜಿಕ ಭದ್ರತಾ ಯೋಜನೆ ಅಡಿ ವೇತನ ಪಡೆಯಲು ಶೀಘ್ರವೇ ಆರಂಭವಾಗಲಿರುವ `ಕೆಎಸ್ಡಬ್ಲ್ಯೂಎನ್ ನೆಟ್ವರ್ಕ್~ (ಕರ್ನಾಟಕ ಸ್ಟೇಟ್ ವೈಡ್ ನೆಟ್ವರ್ಕ್) ಮೂಲಕ ತಾಲ್ಲೂಕು ಕಚೇರಿಗೆ ಬಂದು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಕೈಯಲ್ಲಿ ಬರೆದು ಕೊಡುವ ಅಗತ್ಯವಿಲ್ಲ.
ಸಿದ್ಧ ಮಾದರಿಯಲ್ಲಿ ಮಾಹಿತಿ ಭರ್ತಿ ಮಾಡಿದರಷ್ಟೇ ಸಾಕು. ಅರ್ಜಿಗಳನ್ನು ಸರ್ಕಾರ ಹಾಗೂ ಖಜಾನೆಗೆ ಕಳುಹಿಸಲಾಗುವುದು. ಕಂದಾಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ ಬಳಿಕ, ಅರ್ಹರಿಗೆ ಮಂಜೂರಾತಿ ದೊರೆಯಲಿದೆ.
ನಂತರ ಸರ್ಕಾರದ ಅನುಮತಿ ಮೇರೆಗೆ ಖಜಾನೆಯಿಂದ ಫಲಾನುಭವಿ ಖಾತೆಗೆ ಹಣ ಜಮಾ ಆಗಲಿದೆ. ಯಾರೂ ಸಹ ಮಧ್ಯವರ್ತಿಗಳ ಬಳಿ ಹೋಗುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ವಿದ್ಯುನ್ಮಾನ ಆಡಳಿತ ಇಲಾಖೆ ವತಿಯಿಂದ ವ್ಯವಸ್ಥೆ ಅನುಷ್ಠಾನಕ್ಕೆ ತರಲಾಗುತ್ತಿದೆ. ತಹಶೀಲ್ದಾರರ ಕಚೇರಿಯಲ್ಲಿ ಸಿದ್ಧಗೊಳ್ಳುವ ಘಟಕದಲ್ಲಿ, `ಕೆಎಸ್ಡಬ್ಲ್ಯೂಎನ್ ನೆಟ್ವರ್ಕ್~ನ ಸರ್ವರ್, ಕಂಪ್ಯೂಟರ್, ಯುಪಿಎಸ್, ಅಂತರ್ಜಾಲ ಸಂಪರ್ಕ ಮತ್ತಿತರ ಅಗತ್ಯ ಸೌಲಭ್ಯ ಒದಗಿಸಲಾಗುವುದು. ಅರ್ಜಿದಾರರ ಭಾವಚಿತ್ರ ಹಾಗೂ ಬೆರಳಚ್ಚು ಪಡೆಯಲಾಗುವುದು. ಮಧ್ಯವರ್ತಿಗಳ ಹಾವಳಿ ತಡೆಯಲು ಹೊಸ ವ್ಯವಸ್ಥೆಯಿಂದ ಸಾಧ್ಯವಾಗಲಿದೆ. ಅನರ್ಹರಿಗೆ ಸೌಲಭ್ಯ ದೊರೆಯದಂತೆ ನೋಡಿಕೊಳ್ಳಬಹುದು ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.