ADVERTISEMENT

ಸಾಹಿತ್ಯ ಸಂಭ್ರಮದಲ್ಲಿ ಹಾಸ್ಯದ ‘ಸಂಭ್ರಮ’

ಗೋಷ್ಠಿ 14: ಸಾಹಿತ್ಯಿಕ ಪ್ರಸಂಗಗಳು

ರಾಮಕೃಷ್ಣ ಸಿದ್ರಪಾಲ
Published 19 ಜನವರಿ 2014, 19:30 IST
Last Updated 19 ಜನವರಿ 2014, 19:30 IST
ಸಾಹಿತ್ಯಿಕ ಪ್ರಸಂಗಗಳು ಗೋಷ್ಠಿಯಲ್ಲಿ ಜಯಂತ್ ಕಾಯ್ಕಿಣಿ, ಐ.ಎಂ.ವಿಠಲಮೂರ್ತಿ, ಟಿ.ವಿ.ವೆಂಕಟಾಚಲ­ಶಾಸ್ತ್ರಿ, ರಮಾಕಾಂತ ಜೋಶಿ, ಟಿ.ಎಸ್‌.ನಾಗಾಭರಣ, ಶತಾವಧಾನಿ ಗಣೇಶ್‌ ಭಾಗವಹಿಸಿದ್ದರು
ಸಾಹಿತ್ಯಿಕ ಪ್ರಸಂಗಗಳು ಗೋಷ್ಠಿಯಲ್ಲಿ ಜಯಂತ್ ಕಾಯ್ಕಿಣಿ, ಐ.ಎಂ.ವಿಠಲಮೂರ್ತಿ, ಟಿ.ವಿ.ವೆಂಕಟಾಚಲ­ಶಾಸ್ತ್ರಿ, ರಮಾಕಾಂತ ಜೋಶಿ, ಟಿ.ಎಸ್‌.ನಾಗಾಭರಣ, ಶತಾವಧಾನಿ ಗಣೇಶ್‌ ಭಾಗವಹಿಸಿದ್ದರು   

ಧಾರವಾಡ: ಯಾವುದೇ ಸಾಹಿತ್ಯ ಸಮ್ಮೇಳನ, ವಿಚಾರ ಸಂಕಿರಣಗಳಲ್ಲಿ ಕಾಣಿಸಿ­ಕೊಳ್ಳದೇ ಇರುವ ಹೊಸ ಬಗೆಯ ಗೋಷ್ಠಿಗೆ ಭಾನುವಾರ ಸಂಜೆ ನಡೆದ ಸಾಹಿತ್ಯ ಸಂಭ್ರಮ ವೇದಿಕೆ ನೀಡಿತು.

ಕನ್ನಡದ ಅನೇಕ ಹಿರಿಯ ಸಾಹಿತಿಗಳ ಜೀವನ­ವನ್ನು ಹತ್ತಿರದಿಂದ ಕಂಡವರು ಅವರ ಕುರಿತಾದ ದಂತಕಥೆಗಳನ್ನು ‘ಸಾಹಿತ್ಯಿಕ ಪ್ರಸಂಗಗಳು’ ಎಂಬ ಗೋಷ್ಠಿಯಲ್ಲಿ  ಸಾಹಿತಿಗಳು, ರಂಗಕರ್ಮಿಗಳು, ಶತಾವ­ಧಾನಿಗಳು ಪ್ರಸ್ತುತಪಡಿಸಿದರೆ ಇನ್ನುಳಿ­ದ­ವರು ಅವರದೇ ಬದುಕಿನ ಸಂಭ್ರಮದ ಹಾಗೂ ತಾವು ಪೇಚಿಗೆ ಸಿಲುಕಿದ ಸ್ವಾರಸ್ಯಕರ ಘಟನೆಗಳನ್ನು ಹಂಚಿಕೊಂಡರು. ಆ ಮೂಲಕ ಸಾಹಿತ್ಯ ಸಂಭ್ರಮದ ಸಂಜೆಯನ್ನು ‘ಹಾಸ್ಯ ಸಂಭ್ರಮ’ವಾಗಿಸಿ ಸಭಿಕರನ್ನು ನಕ್ಕುನಗಿಸಿದರು, ಚಪ್ಪಾಳೆ ಗಿಟ್ಟಿಸಿದರು. ಸಾಹಿತ್ಯಿಕ ಪ್ರಸಂಗಗಳು ಬಹುತೇಕ ಹಾಸ್ಯ ಪ್ರಸಂಗಗಳೇ ಆಗಿದ್ದ-­ರಿಂದ ಗೋಷ್ಠಿಯು ಬಹುತೇಕ  ‘ನಗೆ ಹಬ್ಬ’ವಾಗಿ ಮಾರ್ಪಟ್ಟಿತು.

ಗೋಷ್ಠಿಯನ್ನು ನಿರ್ವಹಿಸಿದ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ತಮ್ಮದೇ ರಂಗದ ಮೇಲಿನ ಅನುಭವಗಳನ್ನು, ನಾಟಕಕಾರ ಬಿ.ವಿ.ಕಾರಂತರ ಒಡನಾಟಗಳನ್ನು ಮೆಲುಕು ಹಾಕುತ್ತ ನಗಿಸಿದರು.

ಎಲ್ಲವನ್ನೂ ನೆನಪಿನಲ್ಲಿಟ್ಟುಕೊಳ್ಳುವ ಅವ­ಧಾನಿ–ಶತಾವಧಾನಿ ಆರ್‌.ಗಣೇಶ್‌ ಅವರು ಅಂಗಡಿಗೆ ಹೋಗಿ ಸಾಮಾನು ತರಲು ಕೈಚೀಲ ಮರೆತು ಹೋದ ಪ್ರಸಂಗವನ್ನು ಕಂದ ಪದ್ಯದ ಮೂಲಕ ಹೇಳಿ ಗೋಷ್ಠಿ ಆರಂಭಿಸಿದರು. ಡಿವಿಜಿ, ರಂಗನಾಥ ಶರ್ಮ, ಸೇಡಿಯಾಪು ಕೃಷ್ಣಭಟ್ಟ, ಬಿಎಂಶ್ರೀ ಮತ್ತಿತರರ ಕುರಿತ ನೆನಪಿನ ಪ್ರಸಂಗಗಳನ್ನು ಹೇಳಿದರು. ಕನ್ನಡದಲ್ಲಿ ಚುಟುಕು ಪದ್ಯದ ಪ್ರಕಾರ ಹೆಚ್ಚಾಗಲಿ ಎಂದು ಆಶಿಸಿದರು.

ಕವಿ ಜಯಂತ ಕಾಯ್ಕಿಣಿ ಅವರು ‘ಮುಂಗಾರು ಮಳೆ’ ಸಿನಿಮಾಕ್ಕೆ ಬರೆದ ಹಾಡುಗಳು ಜನಪ್ರಿಯ ಆದ ನಂತರ ಅನುಭವಿಸಿದ ಅಭಿಮಾನಿಗಳ ಹಿತವಾದ ‘ಕಾಟ’ವನ್ನು ಹಂಚಿಕೊಂಡರು. ಜತೆಗೆ ತಮ್ಮ ತಂದೆ ಸಾಹಿತಿ ಗೌರೀಶ ಕಾಯ್ಕಿಣಿ ಅವರು ಧಾರವಾಡಕ್ಕೆ ಬಂದಾಗ ಎದುರಿಸಿದ ಹಾಸ್ಯ ಪ್ರಸಂಗ ಸ್ಮರಿಸಿಕೊಂಡರು.

1950ರ ದಶಕದಲ್ಲಿ ಗೌರೀಶ್‌ ಕಾಯ್ಕಿಣಿ ಧಾರವಾಡಕ್ಕೆ ಬಂದು ಬಸ್ಸು ಇಳಿದಾಗ ಬಸ್‌ ನಿಲ್ದಾಣದ ಸಮೀಪ ಮಾಸಲು ಧೋತರ ಉಟ್ಟ ಇಬ್ಬರು ಹಿರಿಯರು ಬೇಂದ್ರೆ ಕವನದ ಬಗ್ಗೆ ಚರ್ಚಿಸುತ್ತಿದ್ದರಂತೆ. ಆಶ್ಚರ್ಯಪಟ್ಟ ಗೌರೀಶ್‌ ಅವರು, ಬೇಂದ್ರೆ ಅವರ ಜನಪ್ರಿಯತೆ ಈ ಮಟ್ಟದಲ್ಲಿದೆ ಅಂದುಕೊಂಡಿ­ರಲಿಲ್ಲ ಎಂದು ಸಂಭ್ರಮಿಸಿ ಆ ಇಬ್ಬರು ಹಿರಿಯರನ್ನು ಮಾತನಾಡಿ­ಸಿದಾಗ ಅವರಲ್ಲಿ ಒಬ್ಬರು ಜಿ.ಬಿ.ಜೋಶಿ, ಇನ್ನೊಬ್ಬರು ದ.ರಾ.ಬೇಂದ್ರೆ ಆಗಿದ್ದರಂತೆ!

ಸಾಹಿತಿಗಳಾದ ಯಶವಂತ ಚಿತ್ತಾಲ ಹಾಗೂ ಅವರ ನಡುವೆ ಮುಂಬೈನ ಹೋಟೆಲ್‌ ಒಂದರಲ್ಲಿ ನಡೆದ ‘ಮುಸ್ಸಂಜೆ’ಯ ಚುಟುಕು ಸಂಭಾಷಣೆ­ಯನ್ನು ಜಯಂತ್‌ ಕಾಯ್ಕಿಣಿ ಅಷ್ಟೇ ಸ್ವಾರಸ್ಯಕರವಾಗಿ ಸ್ಮರಿಸಿಕೊಂಡರು.

‘ಅನಂತ್‌, ನಿನ್ನ ನಾವೆಲ್‌ನಲ್ಲಿ ಪ್ರಣಯದ ದೃಶ್ಯಗಳು ಜಾಸ್ತಿ ಅನ್ನಿಸ್ತಿವೆ’ ಎಂದು ಚಿತ್ತಾಲರು ಹೇಳಿದರಂತೆ. ಅದಕ್ಕೆ ಅನಂತಮೂರ್ತಿ ‘ಏನೇ ಹೇಳು ಯಶವಂತ್‌ ನೀನು ತುಂಬಾ ಶಿಷ್ಟಾಚಾರ­ದಲ್ಲಿ ನಿನ್ನ ಹಿರೋಯಿನ್‌ಗಳನ್ನು ನೋಡುತ್ತಿ. ನೀನ್ಯಾಕೆ  ಅವರನ್ನು ನನ್ನ ನಾವೆಲ್‌ಗೆ ಕಳುಹಿಸಿಕೊಡ­ಬಾರದು’ ಎಂದರಂತೆ!

ಕವಿ ಡಾ.ಸಿದ್ಧಲಿಂಗಯ್ಯ ತಮ್ಮದೇ ಬದುಕಿನ ಹಾಸ್ಯ ಪ್ರಸಂಗಳನ್ನು ಹೇಳಿ ಸಭಿಕರನ್ನು ನಕ್ಕು ನಗಿಸಿದರು. ಕಲಾಸಿಪಾಳ್ಯದಲ್ಲಿ ರಾಗಿ ಮುದ್ದೆ, ನಾಟಿಕೋಳಿ ಸಾರು ಊಟ ಮಾಡುತ್ತಿದ್ದಾಗ ಎದುರಿಗೆ ಕುಳಿತವ ಬಹಳಷ್ಟು ಹೊತ್ತು ತಮ್ಮನ್ನೇ ದಿಟ್ಟಿಸಿ ನೋಡುತ್ತಿದ್ದುದನ್ನು ಗಮನಿಸಿ ತಾವು ಜನಪ್ರಿಯರು, ತಮ್ಮ ಫೋಟೋ ಪತ್ರಿಕೆಗಳಲ್ಲಿ ಬಂದಿದೆ ಹೀಗಾಗಿ ಇರಬೇಕು ಎಂದುಕೊಂಡಾಗ ಎದುರಿ­ದ್ದಾತ ‘ನಮ್ಮ ಹಾಸ್ಟೇಲ್‌ಗೆ ತರಕಾರಿ ಹಾಕೋದು ನೀವೇ ಅಲ್ವೆ’ ಎಂದನಂತೆ !

ಮೈಮೇಲೆ ದೇವರು ಬರುವ ಪ್ರಸಂಗ, ನಾಟಕಕಾರ ಬಿ.ವಿ.ಕಾರಂತ್‌, ಕವಿ ಸುಮತೀಂದ್ರ ನಾಡಿಗ ಅವರೊಂದಿಗಿನ ಒಡನಾಟದಲ್ಲಿ ಮೂಡಿದ ಪ್ರಸಂಗಗಳನ್ನು ಅವರು ವಿವರಿಸಿದಾಗ ಸಭೆ ನಗೆಗಡಲಲ್ಲಿ ಮುಳುಗಿತ್ತು.ಇವರ ನಡುವೆ ನಿಘಂಟು ತಜ್ಞ ಡಾ.ಟಿ.ವಿ.­ವೆಂಕಟಾಚಲಶಾಸ್ತ್ರಿ, ಪ್ರಕಾಶಕ ರಮಾಕಾಂತ ಜೋಶಿ, ನಿರ್ದೇಶಕ ಟಿ.ಎಸ್‌.ನಾಗಾಭರಣ ಹಾಗೂ ನಿವೃತ್ತ ಐ.ಎ.ಎಸ್‌.ಅಧಿಕಾರಿ ಐ.ಎಂ.ವಿಠ್ಠಲ­ಮೂರ್ತಿ ಒಂದಿಷ್ಟು ಗಂಭೀರವಾದ ಹಾಗೂ ತಮ್ಮ ಬದುಕಿನ ಸಾಹಿತ್ಯಿಕ ಪ್ರಸಂಗಗಳನ್ನು ಹಂಚಿ­ಕೊಂಡರು.

ಲೇಖಕಿಯರಿಗೆ ಪ್ರಾತಿನಿಧ್ಯ ಸಿಗಬೇಕಿತ್ತು
ಧಾರವಾಡ: ಸಾಹಿತ್ಯ ಸಂಭ್ರಮದಲ್ಲಿ ಲೇಖಕಿಯರಿಗೆ ಮಾತನಾಡಲು ಹೆಚ್ಚು ಅವಕಾಶವೇ ಸಿಗಲಿಲ್ಲ ಎಂಬ ಅಭಿಪ್ರಾಯವನ್ನು ಕೆಲಸ ಪ್ರತಿನಿಧಿಗಳು ವ್ಯಕ್ತಪಡಿಸಿದರು.ನಾಟಕ ಕೃತಿ ಹುಟ್ಟುವ ರೀತಿ, ಯುವ ಬರಹಗಾರರ ಸವಾಲುಗಳು, ಸಂಕೀರ್ಣ, ವಿದ್ಯುನ್ಮಾನ ಮಾಧ್ಯಮ ಮತ್ತು ಸಾಹಿತ್ಯ ಗೋಷ್ಠಿಗಳು ಪುರುಷಮಯವಾಗಿದ್ದವು. ಆದರೆ ಸಂಪೂರ್ಣ ಮಹಿಳೆಯರೇ ಇದ್ದ ಒಂದು ಗೋಷ್ಠಿಯೂ ಇರಲಿಲ್ಲ.

ಸಂಶೋಧನೆ: ಇತ್ತೀಚಿನ ಪ್ರವೃತ್ತಿಗಳು ಗೋಷ್ಠಿಯನ್ನು ಇತಿಹಾಸಕಾರ ಷ.ಶೆಟ್ಟರ್ ಆವರಿಸಿದರು. ವೇದಿಕೆಯಲ್ಲಿದ್ದ  ಹನುಮಾಕ್ಷಿ ಗೋಗಿ ಅವರಿಗೆ ಮಾತನಾಡಲು ವಿಷಯ­ಗಳಿದ್ದರೂ ಹೆಚ್ಚು ಅವಕಾಶವೇ ಸಿಗಲಿಲ್ಲ. ಹಳೆಗನ್ನಡ ಕಾವ್ಯದ ಓದು ಯಾಕೆ ಬೇಕು? ಗೋಷ್ಠಿಯಲ್ಲಿ ಸುಕನ್ಯಾ ಅವರಿಗೂ ಇದೇ ಸ್ಥಿತಿ ಒದಗಿತು.

ಮುಂದಿನ ದಿನಗಳಲ್ಲಿ ಲೇಖಕಿಯರೇ ಇರುವ ಒಂದಾದರೂ ಗೋಷ್ಠಿಯನ್ನು ಸಂಘಟಕರು ಆಯೋಜಿಸಬೇಕು. ನೆಪಕ್ಕೆ ಒಬ್ಬ ಲೇಖಕಿಯನ್ನು ವೇದಿಕೆಯ ಮೇಲೆ ಕೂರಿಸುವ ಬದಲು ಅವರ ಅಭಿಪ್ರಾಯ ಮಂಡನೆಗೂ ಅವಕಾಶ ನೀಡುವಂತೆ ನಿರ್ದೇಶಕರಿಗೆ ಸೂಚಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾರಸಂದ್ರದಿಂದ ಬಂದಿದ್ದ ಪ್ರತಿನಿಧಿ ವಿಜಯ್‌ಕುಮಾರ್ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT