ADVERTISEMENT

ಸಿಡಿಮದ್ದು ಸ್ಫೋಟಕ್ಕೆ ಗರ್ಭಿಣಿ ಚಿರತೆ ಬಲಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 19:17 IST
Last Updated 9 ಏಪ್ರಿಲ್ 2013, 19:17 IST

ಜಗಳೂರು: ಅರಣ್ಯದಲ್ಲಿ ಬೇಟೆಗಾರರು ಹೂತಿಟ್ಟಿದ್ದ ಮದ್ದು ಸಿಡಿದು ಗರ್ಭಿಣಿ ಚಿರತೆ ಮೃತಪಟ್ಟ ಘಟನೆ ಮಂಗಳವಾರ ತಾಲ್ಲೂಕಿನ ರಂಗಯ್ಯನದುರ್ಗ ಕೊಂಡುಕುರಿ ವನ್ಯಧಾಮದಲ್ಲಿ ಬೆಳಕಿಗೆ ಬಂದಿದೆ.

ವನ್ಯಜೀವಿಧಾಮ ವ್ಯಾಪ್ತಿಯ ತಾರೇಹಳ್ಳಿ ಕೆರೆಯ ಸಮೀಪ ಅರಣ್ಯದಲ್ಲಿ ಸುಮಾರು 5 ವರ್ಷದ ಹೆಣ್ಣು ಚಿರತೆಯ ಕಳೇಬರ ಕೊಳೆತ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದೆ.

ಅರಣ್ಯ ಪ್ರದೇಶದಲ್ಲೇ ಚಿರತೆಯ ಕಳೇಬರದ ಪರೀಕ್ಷೆ ನಡೆಸಲಾಯಿತು. ಹೆಣ್ಣು ಚಿರತೆಯ ಗರ್ಭದಲ್ಲಿದ್ದ ಮೂರು ಮರಿಗಳು ಮೃತಪಟ್ಟಿದ್ದವು. ಸ್ಫೋಟದ ತೀವ್ರತೆಗೆ ಶ್ವಾಸಕೋಶ ಹಾಗೂ ಹೃದಯ ಸಿಡಿದು ಹೊಟ್ಟೆಯತ್ತ ಸರಿದಿವೆ. ದೇಹದ ಒಳಭಾಗದಲ್ಲಿ ಎಲ್ಲೆಡೆ ರಕ್ತಸ್ರಾವವಾಗಿದೆ ಎಂದು ಪಶು ವೈದ್ಯಾಧಿಕಾರಿ ಡಾ.ಬುಡೇನ್ `ಪ್ರಜಾವಾಣಿ'ಗೆ  ಮಾಹಿತಿ ನೀಡಿದರು.

ನಾಲ್ಕು ತಿಂಗಳ ಹಿಂದೆ ಇದೇ ವನ್ಯಜೀವಿಧಾಮದ ಮಾಗಡಿ ಕೆರೆಯ ತೂಬಿನಲ್ಲಿ ಅವಿತಿದ್ದ ಗಂಡು ಚಿರತೆಯೊಂದನ್ನು ಗ್ರಾಮಸ್ಥರು ಬೆಂಕಿ ಹಾಕಿ ಕೊಂದಿದ್ದರು.

ಐದು ತಿಂಗಳ ಹಿಂದೆ ಗರ್ಭಿಣಿ ಕೊಂಡುಕುರಿಯನ್ನು ಬೇಟೆಯಾಡಲಾಗಿತ್ತು. ಆದರೆ, ಯಾವುದೇ ಆರೋಪಿಗಳ ವಿರುದ್ಧ ಇದುವರೆಗೆ ಇಲಾಖೆ ಕ್ರಮ ಕೈಗೊಂಡಿಲ್ಲ.

ಸ್ಥಳೀಯವಾಗಿ ನಿರ್ಮಿಸುವ ಸ್ಫೋಟಕ  ವಸ್ತುವಿನ ಹೊರಭಾಗವನ್ನು ಕುರಿ, ಕೋಳಿಯ ಮಾಂಸ ಬಳಸಿ ಮದ್ದು ಅಥವಾ ಗುಂಡನ್ನು ನಿರ್ಮಿಸಲಾಗಿರುತ್ತದೆ. ಅರಣ್ಯದಲ್ಲಿ ಹಂದಿಗಳು ಹಾಗೂ ಇತರೆ ವನ್ಯಪ್ರಾಣಿಗಳು ಸಂಚರಿಸುವ ಆಯಕಟ್ಟಿನ ಸ್ಥಳದಲ್ಲಿ  ಬೇಟೆಗಾರರು ಇದನ್ನು ಹುದುಗಿಸಿಡುತ್ತಾರೆ.

ಸೂಕ್ಷ್ಮಗ್ರಾಹಿಯಾಗಿರುವ ವನ್ಯಜೀವಿಗಳು ವಾಸನೆ ಹಿಡಿದು ಬಂದು, ಮಾಂಸವನ್ನು ಕಚ್ಚಿದ ಕೂಡಲೇ ತಲೆ ಸ್ಫೋಟಗೊಂಡು ದುರಂತ ಸಾವು ಕಾಣುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.