ಔರಾದ್ (ಬೀದರ್ ಜಿಲ್ಲೆ): ತಾಲ್ಲೂಕಿನ ವಲ್ಲೇಪುರ ಗ್ರಾಮದಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ಸುಂದರಾಬಾಯಿ ತುಕಾರಾಮ (55) ಮೃತಪಟ್ಟಿದ್ದಾರೆ.
ಹೊಲದಿಂದ ಮನೆಗೆ ಬರುತ್ತಿದ್ದಾಗ ಮಳೆ ಜೋರಾಗಿದೆ. ಈ ವೇಳೆ ಮರದ ಆಶ್ರಯ ಪಡೆಯಲು ಹೋದಾಗ ಸಿಡಿಲು ಬಡಿದಿದೆ.
ಧಾರಾಕಾರ ಮಳೆ: ರಾಮನಗರ ಜಿಲ್ಲೆಯಾದ್ಯಂತ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಅಲ್ಲಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಇದರಿಂದ ಬಹುತೇಕ ಕೆರೆಗಳು ಕೋಡಿ ಬಿದ್ದಿವೆ. ಮಳೆಯ ನೀರು ಹೊಲಗಳಿಗೆ ನುಗ್ಗಿದ್ದು, ಕೆಲವು ಕಡೆ ಒಂದೆರಡು ಅಡಿಗಳ ಎತ್ತರಕ್ಕೆ ನೀರು ನಿಂತಿದೆ. ತಗ್ಗಿನ ಪ್ರದೇಶಗಳಲ್ಲಿರುವ ಹೊಲಗಳು ಜಲಾವೃತಗೊಂಡಿವೆ. ಬೆಳೆ ಹಾನಿ ಸಂಭವಿಸುವ ಆತಂಕ ಉಂಟಾಗಿದೆ.
ಧರ್ಮಸ್ಥಳದಲ್ಲಿ 6 ಸೆಂ.ಮೀ. ಮಳೆ
ಬೆಂಗಳೂರು: ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಒಳನಾಡಿನ ಹಲವೆಡೆ ಮತ್ತು ಕರಾವಳಿಯ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ.
ಧರ್ಮಸ್ಥಳ 6, ತಾಳಿಕೋಟೆ, ಇಂಡಿ, ಚಿಂತಾಮಣಿ, ಪಾವಗಡ, ಚನ್ನಪಟ್ಟಣ, ಕನಕಪುರ ತಲಾ 4, ಚಿಕ್ಕೋಡಿ, ಔರಾದ್, ಸೇಡಂ, ಕೊಟ್ಟಿಗೆಹಾರ, ಭರಮಸಾಗರ ತಲಾ 3, ರಾಯಲ ಪಡು, ತೊಂಡೆಬಾವಿ, ಚಿಕ್ಕನಹಳ್ಳಿ, ರಾಮನಗರ ತಲಾ 2, ವಿಜಯಪುರ, ಹುಮ್ನಾಬಾದ್, ರಾಯಚೂರು, ಭಾಗಮಂಡಲ, ಕೋಲಾರ, ಆನೇಕಲ್, ಗೌರಿಬಿದನೂರಿನಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.
ಬಳ್ಳಾರಿಯಲ್ಲಿ 32 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು ಚಿಕ್ಕನಹಳ್ಳಿಯಲ್ಲಿ 20.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಹವಾಮಾನ ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿ ಮತ್ತು ಒಳನಾಡಿನ ಹಲವು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.