ಬೆಂಗಳೂರು: ರಾಸಾಯನಿಕ ಗೊಬ್ಬರ ಹಾಗೂ ಬೀಜಗಳನ್ನು ಖರೀದಿ ಮಾಡುವ ರೈತರಿಗೆ 10ಸಾವಿರ ರೂಪಾಯಿಗಳ ಸಹಾಯ ಧನ ನೀಡುವ ಸರ್ಕಾರದ `ಸುವರ್ಣ ಭೂಮಿ~ ಯೋಜನೆಯ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುವ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಒಂದೊಂದು ತಾಲ್ಲೂಕಿನಿಂದ ಐದು ಸಾವಿರ ರೈತರನ್ನು ಮಾತ್ರ ಆಯ್ಕೆ ಮಾಡಲಾಗುತ್ತಿದೆ. ಇದರಿಂದ ಲಕ್ಷಾಂತರ ರೈತರು ಈ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ ಎನ್ನುವುದು ವಕೀಲ ಟಿ.ವೈ. ಕಾಟ್ವಾ ಅವರ ವಾದ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಅನುಕೂಲ ಆಗುವಂತೆ ಯೋಜನೆ ರೂಪಿಸಲು ಸರ್ಕಾರಕ್ಕೆ ಆದೇಶಿಸುವಂತೆ ಅವರು ಕೋರಿದ್ದಾರೆ.
ಅದೇ ರೀತಿ ಈ ಯೋಜನೆಯ ಪ್ರಯೋಜನ ನೀಡುವುದಾಗಿ ಹಲವಾರು ರೈತರಿಂದ ಖಾಲಿ ಛಾಪಾ ಕಾಗದದ ಮೇಲೆ ಸಹಿ ಹಾಕಿಸಿಕೊಳ್ಳಲಾಗಿದೆ. ಇದು ನಿಯಮ ಬಾಹಿರ. ಇಂತಹ ಕ್ರಮಕ್ಕೆ ಕಡಿವಾಣ ಹಾಕಲು ಸರ್ಕಾರಕ್ಕೆ ಆದೇಶಿಸಬೇಕು ಎಂದೂ ಅರ್ಜಿಯಲ್ಲಿ ಕೋರಲಾಗಿದೆ. ಅರ್ಜಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಇತರರನ್ನು ಪ್ರತಿವಾದಿಯನ್ನಾಗಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ಮುಂದೂಡಿದೆ.
ಕುಂಬ್ಳೆ ಪತ್ನಿಗೆ ನೋಟಿಸ್
ಮಗಳ ಕಾಯಂ ಸುಪರ್ದಿಗಾಗಿ ಹಲವು ವರ್ಷಗಳ ಸುದೀರ್ಘ ಕಾನೂನು ಸಮರ ಸಾರಿದ್ದ ಅನಿಲ್ ಕುಂಬ್ಳೆ ಅವರ ಪತ್ನಿಯ ಮೊದಲ ಪತಿ ಕುಮಾರ್ ಜಹಗೀರದಾರ್ ಪುನಃ ಹೈಕೋರ್ಟ್ ಮೊರೆ ಹೋಗಿದ್ದಾರೆ.
10-12 ವರ್ಷಗಳಿಂದ ಕೌಟುಂಬಿಕ ಕೋರ್ಟ್ನಿಂದ ಹೈಕೋರ್ಟ್, ನಂತರ ಸುಪ್ರೀಂಕೋರ್ಟ್, ಪುನಃ ಕೌಟುಂಬಿಕ ಕೋರ್ಟ್ ಮೆಟ್ಟಿಲೇರಿದ್ದ ಈ ಪ್ರಕರಣ ಈಗ ಮತ್ತೆ ಹೈಕೋರ್ಟ್ಗೆ ಬಂದಿದೆ. ಕುಂಬ್ಳೆ ಅವರ ಪತ್ನಿ ಚೇತನಾ ಅವರಿಗೆ ಕೋರ್ಟ್ ಮಂಗಳವಾರ ನೋಟಿಸ್ ಜಾರಿಗೆ ಆದೇಶಿಸಿದೆ.
ಕುಮಾರ್ ಅವರು ಚೇತನಾ ಅವರನ್ನು 1986ರ ಜೂನ್ನಲ್ಲಿ ವಿವಾಹವಾಗಿದ್ದು, 1994ರ ಡಿಸೆಂಬರ್ನಲ್ಲಿ ಮಗಳು ಆರುಣಿ ಜನನವಾಗಿದೆ. 1999ರ ಏಪ್ರಿಲ್ನಲ್ಲಿ ಇವರಿಬ್ಬರೂ ವಿಚ್ಛೇದನ ಪಡೆದರು. ಅಲ್ಲಿಂದ ಈ ಸಮರ ಆರಂಭವಾಗಿದೆ. 1999ರ ಜುಲೈನಲ್ಲಿ ಚೇತನಾ ಅವರು ಅನಿಲ್ ಕುಂಬ್ಳೆಯನ್ನು ವಿವಾಹವಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.