ಬೆಂಗಳೂರು: ಎರಡನೇ ಹಂತದ ಭದ್ರಾ ಮೇಲ್ಡಂಡೆ ಕಾಮಗಾರಿಯ ಗುತ್ತಿಗೆ ನೀಡುವಾಗ ಪಕ್ಷಪಾತ ಮಾಡಿ ಹಣ ಪಡೆಯಲಾಗಿದೆ ಎಂಬ ಆರೋಪದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಯಡಿಯೂರಪ್ಪ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಅವರು ಸೆ. 9ಕ್ಕೆ ಮುಂದೂಡಿದ್ದಾರೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಸಂಸ್ಥೆಯೊಂದಕ್ಕೆ ಎರಡನೇ ಹಂತದ ಭದ್ರಾ ಮೇಲ್ಡಂಡೆ ಕಾಮಗಾರಿಯ ಗುತ್ತಿಗೆ ನೀಡಿ ಪ್ರತಿಯಾಗಿ ತಮ್ಮ ಇಬ್ಬರು ಮಕ್ಕಳು ಮತ್ತು ಅಳಿಯ ನಡೆಸುತ್ತಿರುವ ಎರಡು ಸಂಸ್ಥೆಗಳಿಗೆ ಹಣ ಪಡೆದಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ಅವರು ಖಾಸಗಿ ದೂರು ನೀಡಿದ್ದರು.
ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಂಡಿದ್ದ ಹೈಕೋರ್ಟ್, ಯಡಿಯೂರಪ್ಪ ಅವರ ವಕೀಲರ ಮನವಿಯನ್ನು ಮನ್ನಿಸಿ ಅರ್ಜಿಯ ವಿಚಾರಣೆಯನ್ನು ಸೆ.ಕ್ಕೆ ಮುಂದೂಡಿತು.
ಎರಡನೇ ಹಂತದ ಭದ್ರಾ ಮೇಲ್ಡಂಡೆ ಗುತ್ತಿಗೆ ಕಾಮಗಾರಿ ನೀಡುವಾಗ ಯಡಿಯೂರಪ್ಪ ಅವರ ಇಬ್ಬರು ಮಕ್ಕಳು ಹಾಗೂ ಅಳಿಯನಿಗೆ ಸಂಬಂಧಿಸಿದ ಎರಡು ಸಂಸ್ಥೆಗಳಿಗೆ ರೂ. 13 ಕೋಟಿ ಸಂದಾಯವಾಗಿದೆ ಎಂದು ದತ್ತ ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದರು.
ದತ್ತ ಅವರ ದೂರನ್ನು ಆಧರಿಸಿ, ಲಂಚ ವಿರೋಧ ಕಾನೂನಿನ ಅಡಿ ಲೋಕಾಯುಕ್ತ ಪೊಲೀಸರು ಯಡಿಯೂರಪ್ಪ ಅವರ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.