ADVERTISEMENT

ಹರಾಜು ಹಾಕಿದರೂ ಸಕ್ಕರೆ ಖರೀದಿಸುವವರಿಲ್ಲ

ಕಾರ್ಖಾನೆಗಳ ಗೋದಾಮು ಜಪ್ತಿ...

ವಿನಾಯಕ ಭಟ್ಟ‌
Published 23 ಜೂನ್ 2015, 19:56 IST
Last Updated 23 ಜೂನ್ 2015, 19:56 IST
ಹರಾಜು ಹಾಕಿದರೂ ಸಕ್ಕರೆ ಖರೀದಿಸುವವರಿಲ್ಲ
ಹರಾಜು ಹಾಕಿದರೂ ಸಕ್ಕರೆ ಖರೀದಿಸುವವರಿಲ್ಲ   

ಬೆಳಗಾವಿ: ಕಳೆದ ಎರಡು ವರ್ಷಗಳಿಂದ ಬಾಕಿ ಇರಿಸಿಕೊಂಡಿರುವ ರೈತರ ಕಬ್ಬಿನ ಹಣವನ್ನು ಪಾವತಿಸುವ ಸಲುವಾಗಿ ಜಿಲ್ಲಾಡಳಿತವು ಜಿಲ್ಲೆಯ 21 ಸಕ್ಕರೆ ಕಾರ್ಖಾನೆಗಳಿಗೆ ನೋಟಿಸ್‌ ನೀಡಿದ್ದು, ಈಗಾಗಲೇ ಆರು ಕಾರ್ಖಾನೆಗಳ ಗೋದಾಮು ಜಪ್ತಿ ಮಾಡಿದೆ.

ಆದರೆ, ಸಕ್ಕರೆ ಮಾರಾಟ ಮಾಡಿ ರೈತರ ಬಾಕಿ ತೀರಿಸಲು ಹರಾಜು ಮಾಡಲು ಮುಂದಾದರೂ ಸಕ್ಕರೆ ಖರೀದಿಗೆ ಯಾರೊಬ್ಬರೂ ಆಸಕ್ತಿ ತಾಳದ್ದರಿಂದ ಬಾಕಿ ಪಾವತಿಸುವುದು ವಿಳಂಬವಾಗುತ್ತಿದೆ.

ಜಿಲ್ಲೆಯಲ್ಲಿ 21 ಸಕ್ಕರೆ ಕಾರ್ಖಾನೆಗಳು ಕಳೆದ ಎರಡು ವರ್ಷಗಳಿಂದ ರೈತರಿಂದ ಖರೀದಿಸಿರುವ ಕಬ್ಬಿನ ಅಂದಾಜು ರೂ 800 ಕೋಟಿ ಬಾಕಿ ಉಳಿಸಿಕೊಂಡಿವೆ. ಹೀಗಾಗಿ ಆ ಹಣ ವಸೂಲಿ ಮಾಡಲು ಕರ್ನಾಟಕ ಭೂ ಕಂದಾಯ ಕಾಯ್ದೆ ಅಡಿ ಸಕ್ಕರೆ ಜಪ್ತಿ ಮಾಡಿ ಹರಾಜು
ಹಾಕಲು ಮುಂದಾದರೂ ಸಕ್ಕರೆ ಖರೀದಿಸುವವರೇ ಇಲ್ಲದಂತಾಗಿದೆ.

ಜಿಲ್ಲೆಯ ರಾಮದುರ್ಗದ ಶಿವಶಕ್ತಿ ಸಕ್ಕರೆ ಕಾರ್ಖಾನೆಯು 2013–14ನೇ ಸಾಲಿನಲ್ಲಿ ರೂ 7.78 ಕೋಟಿ ಹಾಗೂ 2014–15ನೇ ಸಾಲಿನಲ್ಲಿ ರೂ 26.60 ಕೋಟಿ ಬಾಕಿ ಉಳಿಸಿಕೊಂಡಿದೆ. ಈ ಕಾರ್ಖಾನೆಯ ಎರಡು ಗೋದಾಮು ಜಪ್ತಿ ಮಾಡಿಕೊಳ್ಳಲಾಗಿದ್ದು, ಒಂದರಲ್ಲಿ 22,015 ಕ್ವಿಂಟಲ್‌ ಹಾಗೂ ಇನ್ನೊಂದರಲ್ಲಿ 34,855 ಕ್ವಿಂಟಲ್‌ ಸಕ್ಕರೆ ದಾಸ್ತಾನು ಇದೆ.

‘ಜಪ್ತಿ ಮಾಡಿದ ಸಕ್ಕರೆ ಹರಾಜಿಗಾಗಿ ಎರಡು ಬಾರಿ ಇ– ಟೆಂಡರ್‌ ಕರೆಯಲಾಗಿತ್ತು. ಖರೀದಿಸಲು ಯಾರೂ ಬಾರದ್ದರಿಂದ ಸೋಮವಾರ (ಜೂನ್‌ 22) ಬಹಿರಂಗ ಹರಾಜು ಕರೆಯಲಾಗಿತ್ತು. ಈ ಬಗ್ಗೆ ಪತ್ರಿಕೆಗಳಲ್ಲಿ ಮೊದಲೇ ಪ್ರಕಟಣೆ ನೀಡಿದ್ದರೂ ವ್ಯಾಪಾರಿಗಳು ಪಾಲ್ಗೊಳ್ಳಲಿಲ್ಲ’ ಎಂದು ಹರಾಜು ಪ್ರಕ್ರಿಯೆ ಏರ್ಪಡಿಸಿದ್ದ ರಾಮದುರ್ಗದ ತಹಶೀಲ್ದಾರ ಟಿ.ವಿ. ದಾಸರ ‘ಪ್ರಜಾವಾಣಿ’ಗೆ ತಿಳಿಸಿದರು.

ಅದೇರೀತಿ, ಜಿಲ್ಲೆಯ ಅಥಣಿ ತಾಲ್ಲೂಕಿನ ಬುರ್ಲಟ್ಟಿಯಲ್ಲಿರುವ ರೇಣುಕಾ ಸಕ್ಕರೆ ಕಾರ್ಖಾನೆಯು 2013ನೇ ಸಾಲಿನ ಬಾಕಿ ಉಳಿಸಿಕೊಂಡಿದ್ದರಿಂದ ಒಂದು ಗೋದಾಮವನ್ನು ಎರಡು ತಿಂಗಳ ಹಿಂದೆಯೇ ಜಪ್ತಿ ಮಾಡಿ 10,774 ಕ್ವಿಂಟಲ್‌ ಸಕ್ಕರೆ ವಶಪಡಿಸಿಕೊಳ್ಳಲಾಗಿತ್ತು. ಇದರ ಹರಾಜು ಪ್ರಕ್ರಿಯೆಯಲ್ಲೂ ಖರೀದಿದಾರರು ಬರಲಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಅಲ್ಲದೆ, ಬೈಲಹೊಂಗಲದ ಸೋಮೇಶ್ವರ ಸಕ್ಕರೆ ಕಾರ್ಖಾನೆ, ಸವದತ್ತಿ ತಾಲ್ಲೂಕಿನ ಮುನವಳ್ಳಿಯಲ್ಲಿರುವ ರೇಣುಕಾ ಸಕ್ಕರೆ ಕಾರ್ಖಾನೆ, ರಾಯಬಾಗ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಲೀಸ್‌ ಮೇಲೆ ಪಡೆದಿರುವ ರೇಣುಕಾ ಸಕ್ಕರೆ ಕಾರ್ಖಾನೆಯ ಒಂದು ಗೋದಾಮು ಜಪ್ತಿ ಮಾಡಲಾಗಿದೆ. ಕಾರ್ಖಾನೆಗಳಲ್ಲಿ ಪ್ರತಿ ಕೆ.ಜಿ. ಸಕ್ಕರೆಯು ರೂ 19ರಂತೆ ಮಾರಾಟವಾಗುತ್ತಿದೆ. ಹರಾಜಿನಲ್ಲಿ ಈ ದರದಲ್ಲಿ ಖರೀದಿಸಲು
ಯಾರೂ ಬರುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

‘ಈ ಹಿಂದೆ ಪಡಿತರ ವಿತರಣೆ ವ್ಯವಸ್ಥೆಗಾಗಿ ಜಿಲ್ಲೆಯ ಕಾರ್ಖಾನೆಗಳಿಂದ ಜಪ್ತಿ ಮಾಡಿಕೊಂಡಿದ್ದ ಸಕ್ಕರೆಯನ್ನು ಖರೀದಿಸಲಾಗಿತ್ತು. ಆದರೆ, ಜಪ್ತಿ ಮಾಡಿಕೊಂಡ ಸಕ್ಕರೆಯನ್ನು ಪಡಿತರ ವಿತರಣೆಗಾಗಿ ಖರೀದಿಸಲು ಸಾಧ್ಯವಿಲ್ಲ. ಈಗಾಗಲೇ ಸರ್ಕಾರಿ ಸ್ವಾಮ್ಯದ ಮೈಶುಗರ್ಸ್‌ ಕಾರ್ಖಾನೆಯಿಂದಲೇ ಸಕ್ಕರೆ ಖರೀದಿಸಲಾಗಿದೆ. ಹೀಗಾಗಿ ಈಗ ಎದುರಾಗಿರುವ ಸಮಸ್ಯೆ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು’ ಎಂದು ಜಿಲ್ಲಾಧಿಕಾರಿ ಎನ್‌. ಜಯರಾಂ ತಿಳಿಸಿದರು.

ಕೆಲವು ಸಕ್ಕರೆ ಕಾರ್ಖಾನೆಗಳ ಗೋದಾಮು ಜಪ್ತಿ ಮಾಡಿ, ಸಕ್ಕರೆಯನ್ನು ಹರಾಜು ಹಾಕಲು ಮುಂದಾದರೂ ಖರೀದಿಗೆ ಯಾರೂ ಬರುತ್ತಿಲ್ಲ
ಎನ್‌. ಜಯರಾಂ,
ಬೆಳಗಾವಿ ಜಿಲ್ಲಾಧಿಕಾರಿ

ಮುಗಿದ ಗಡುವು: ಸಕ್ಕರೆ ಗೋದಾಮು ಜಪ್ತಿ ಇಂದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.