ಮೇಲುಕೋಟೆ: ಐತಿಹಾಸಿಕ ಮೇಲುಕೋಟೆ ಕ್ಷೇತ್ರದಲ್ಲಿ ಸಹಸ್ರಾರು ಭಕ್ತರ ಹರ್ಷೋದ್ಗಾರದ ನಡುವೆ ಸೋಮವಾರ ರಾತ್ರಿ ವಿಶ್ವವಿಖ್ಯಾತ ಚಲುವನಾರಾಯಣಸ್ವಾಮಿ ವೈರಮುಡಿ ಉತ್ಸವ ನೆರವೇರಿತು.
ವಜ್ರಖಚಿತ ವೈರಮುಡಿ ಧರಿಸಿದ್ದ ಚೆಲುವನಾರಾಯಣಸ್ವಾಮಿಯನ್ನು ಕಣ್ತುಂಬಿಕೊಂಡ ಭಕ್ತರು ‘ಗೋವಿಂದ, ಗೋವಿಂದ’ ಮಂತ್ರ ಜಪಿಸಿದರು. ಗಂಡುಭೇರುಂಡಸ್ವರೂಪಿ ಚಂದ್ರಪ್ರಭೆ ಪ್ರಭಾವಳಿ ಮಧ್ಯದಲ್ಲಿ ಅಲಂಕಾರಸ್ವರೂಪಿಯಾಗಿದ್ದ ಚೆಲುವನಾರಾಯಣಸ್ವಾಮಿ ದೇವಾಲಯದ ಹೊರಕ್ಕೆ ಬರುತ್ತಿದ್ದಂತೆ ಭಕ್ತರು ಜಯಘೋಷ ಮೊಳಗಿಸಿದರು. ರಾಮಾನುಜಾಚಾರ್ಯರ ಸನ್ನಿಧಿಯಲ್ಲಿ ಪ್ರಥಮ ಪೂಜೆ ಸಲ್ಲಿಸಿದ ನಂತರ ರಾತ್ರಿ 9.30ಕ್ಕೆ ವೈರಮುಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಗರುಡದೇವನ ಮೆರವಣಿಗೆಯ ನಂತರ ವೈರಮುಡಿ ಬ್ರಹ್ಮೋತ್ಸವ ಆರಂಭವಾಯಿತು.
ಚೆಲುವನ ಪಲ್ಲಕ್ಕಿಯನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಮೆರವಣೆಗೆ ಸಾಗುವ ರಾಜಬೀದಿ ತಳಿರು, ತೋರಣ, ದೀಪಾಲಂಕಾರದಿಂದ ಬೆಳಗುತ್ತಿತ್ತು. ಬೀದಿಯ ಎರಡೂ ಬದಿಯಲ್ಲಿ ಭಕ್ತರು ಸಾಲುಗಟ್ಟಿ ನಿಂತಿದ್ದರು. ರಾಜ್ಯ ಮಾತ್ರವಲ್ಲದೆ ತಮಿಳುನಾಡು, ಆಂಧ್ರಪ್ರದೇಶ, ಕೇರಳದಿಂದಲೂ ಭಕ್ತರು ಬಂದಿದ್ದರು. ಮೇಲುಕೋಟೆಯ ವಸತಿಗೃಹಗಳು, ಛತ್ರಗಳು ಭಕ್ತರಿಂದ ಕಿಕ್ಕಿರಿತು ತುಂಬಿದ್ದವು.
ಜಿಲ್ಲಾ ಖಜಾನೆಯಲ್ಲಿದ್ದ ವೈರಮುಡಿ ಹಾಗೂ ರಾಜಮುಡಿ ತಿರುವಾಭರಣ ಪೆಟ್ಟಿಗೆಯನ್ನು ಸೋಮವಾರ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಪೂಜೆ ಸಲ್ಲಿಸುವ ಮೂಲಕ ಹೊರತೆಗೆದರು. ನಂತರ ಮಂಡ್ಯದ ಲಕ್ಷ್ಮಿಜನಾರ್ದನ ದೇವಾಲಯದಲ್ಲಿ ಆಭರಣ ಪೆಟ್ಟಿಗೆಗೆ ಪೂಜೆ ಸಲ್ಲಿಸಲಾಯಿತು. ವಿಶೇಷ ವಾಹನದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಮೇಲುಕೋಟೆಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ರಾತ್ರಿ 7.30ಕ್ಕೆ ವೈರಮುಡಿ, ರಾಜಮುಡಿ ಮೇಲುಕೋಟೆ ದೇವಾಲಯ ತಲುಪಿದವು.
ನಂತರ ಪೆಟ್ಟಿಗೆ ತೆರೆಯಲಾಯಿತು. ಬಳಿಕ ಮಹಾಮಂಗಳಾರತಿಯೊಂದಿಗೆ ವೈರಮುಡಿ ಉತ್ಸವ ರಾಜಬೀದಿ ಪ್ರವೇಶಿಸಿತು. ದೇವಾಲಯದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಹೊರಗೆ ಎಲ್ಇಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು.
ಯದುಗಿರಿ ಯತಿರಾಜ ಜೀಯರ್, ಬ್ರಹ್ಮಪುತ್ರ ಪರಕಾಲ ಶ್ರೀ, ಕಾಂಚಿಪುರ ಅಳಹೀಯ ಮನವಾಳ ಜೀಯರ್ ಸಮ್ಮುಖ ವಹಿಸಿದ್ದರು. ಸ್ಥಾನಿಕರಾದ ಕರಗಂ ನಾರಾಯಣ ಐಯ್ಯಂಗಾರ್, ತಿರುನಾರಾಯಣ ಐಯ್ಯಂಗಾರ್, ಶ್ರೀನಿವಾಸ ನರಸಿಂಹನ್ ಗುರೂಜಿ ಪೂಜಾ ಕೈಂಕರ್ಯ ನೆರವೇರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.