
ಧಾರವಾಡ: ಹಿರಿಯ ವಿಮರ್ಶಕ ಡಾ. ಜಿ.ಎಸ್.ಆಮೂರ ಅವರಿಗೆ ‘ಡಾ. ಬೆಟಗೇರಿ ಕೃಷ್ಣಶರ್ಮ ವಿಮರ್ಶಾ ಪ್ರಶಸ್ತಿ’ಯನ್ನು ಶನಿವಾರ ಇಲ್ಲಿ ಪ್ರದಾನ ಮಾಡಲಾಯಿತು.
ಬೆಳಗಾವಿಯ ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಕವಿ ಡಾ.ಚೆನ್ನವೀರ ಕಣವಿ ಪ್ರಶಸ್ತಿ ಪ್ರದಾನ ಮಾಡಿದರು. ₹ 1 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಪ್ರಶಸ್ತಿ ಒಳಗೊಂಡಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಆಮೂರ, ‘ಕನ್ನಡದ ಜನತೆ ಲೇಖಕರನ್ನು ಅಲಕ್ಷಿಸಿರಬಹುದು. ಆದರೆ ವಿಮರ್ಶಕನಾದ ನನ್ನನ್ನು ಅಲಕ್ಷಿಸಿಲ್ಲ. ಅದಕ್ಕೆ ಇಲ್ಲಿಯವರೆಗೂ ನನಗೆ ದೊರೆತ ಪ್ರಶಸ್ತಿಗಳೇ ಸಾಕ್ಷಿ. ನನ್ನ ವಿಮರ್ಶಾ ಕಾರ್ಯಕ್ಕೆ ದೊರೆತ ಪ್ರಶಸ್ತಿಗಳೆಲ್ಲವೂ ಸಾಹಿತಿಗಳ ಹೆಸರಿನವೇ ಆಗಿವೆ. ಅದಕ್ಕೆ ಈಗ ಆನಂದಕಂದರ ಹೆಸರು ಜೋಡಿಸಿದಂತಾಗಿದೆ’ ಎಂದರು.
‘ಮನುಷ್ಯ ತನ್ನನ್ನು ತಾನು ತಿಳಿದುಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದಲ್ಲಿ ತಾನು ನಡೆಯುವ ಮಾರ್ಗಗಳನ್ನು ಬದಲಿಸಿಕೊಳ್ಳುವುದು ಉತ್ತಮ. ನನಗೆ ಈಗ ಸಾಹಿತ್ಯ ವಿಮರ್ಶೆ ಕುರಿತು ಶ್ರದ್ಧೆ ಕಡಿಮೆಯಾಗಿದೆ. ಶ್ರದ್ಧೆ ಇಲ್ಲದ ಯಾವುದೇ ಕೆಲಸ ಮಾಡಬಾರದು ಎಂಬುದು ನನ್ನ ನಿಲುವು. ಹೀಗಾಗಿ ಬೇರೆ ಯಾವ ಮಾರ್ಗವನ್ನು ಆಯ್ದುಕೊಳ್ಳಬೇಕು ಎಂಬುದನ್ನು ವಿಚಾರ ಮಾಡುತ್ತಿದ್ದೇನೆ. ಅದರ ಪರಿಣಾಮ ಏನು ಎಂಬುದು ನನಗೂ ಗೊತ್ತಿಲ್ಲ. ಅಂಥ ಒಂದು ಸಂಧಿಕಾಲದಲ್ಲಿದ್ದೇನೆ’ ಎಂದರು.
ಕಾರ್ಯಕ್ರಮದಲ್ಲಿ ಡಾ.ಸಿದ್ಧಲಿಂಗಪಟ್ಟಣಶೆಟ್ಟಿ ಹಾಗೂ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಮಾತನಾಡಿದರು. ಟ್ರಸ್ಟ್ನ ಅಧ್ಯಕ್ಷ ರಾಘವೇಂದ್ರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.