ಇಳಕಲ್ (ಬಾಗಲಕೋಟೆ ಜಿಲ್ಲೆ): ‘ಇತರ ದೇಶಗಳ ಅಗತ್ಯಗಳನ್ನು ಪೂರೈಸುವುದಕ್ಕಾಗಿ ನಮ್ಮ ದೇಶದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಓದುವ ವಿಷಯಗಳು ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುತ್ತಿಲ್ಲ. ಹೀಗಾಗಿ ಪ್ರತಿ ಹಳ್ಳಿಯಲ್ಲೂ ನೌಕರಿಗಾಗಿ ಓದಿದ ಅನೇಕ ಹುಡುಗರು ಕಟ್ಟೆಯ ಮೇಲೆ ಕೈಕಟ್ಟಿ ಕುಳಿತುಕೊಂಡಿದ್ದಾರೆ. ಗ್ರಾಮ ಭಾರತದ ಬದುಕನ್ನು ಶ್ರೀಮಂತಗೊಳಿಸುವ ಬಗ್ಗೆ ಚಿಂತನೆ ನಡೆಯಬೇಕಿದೆ’ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದರು.
ಇಲ್ಲಿಯ ವಿಜಯ ಮಹಾಂತೇಶ ಸಂಸ್ಥಾನ ಮಠದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ‘ಜಾನಪದ ಕಲಾ ಶಿಖರ ಸೂರ್ಯ’ ಪ್ರಶಸ್ತಿ ಹಾಗೂ ರೂ.1 ಲಕ್ಷ ನಗದು ಸ್ವೀಕರಿಸಿ ಮಾತನಾಡಿದರು.
‘ಪಿಎಚ್ಡಿಗಾಗಿ ನಡೆಯುತ್ತಿರುವ ಸಂಶೋಧನೆಗಳು ಯಾರಿಗೂ ಪ್ರಯೋಜನಕ್ಕೆ ಬರುತ್ತಿಲ್ಲ. ಹೀಗಾದರೇ ಜ್ಞಾನ ಸೃಷ್ಟಿ ಆಗುವುದಿಲ್ಲ. ನಮ್ಮ ಪ್ರತಿ ಚಟುವಟಿಕೆಯು ಒಬ್ಬರಿಗಾದರೂ ಪ್ರಯೋಜನಕ್ಕೆ ಬರಬೇಕು. ಆದರೆ ವಿಶ್ವವಿದ್ಯಾಲಯಗಳ ಸಂಶೋಧನಾ ಪ್ರಬಂಧಗಳು ಗಮನ ಸೆಳೆಯುತ್ತಿಲ್ಲ, ಕುತೂಹಲ ಮೂಡಿಸುತ್ತಿಲ್ಲ’ ಎಂದು ವಿಷಾದಿಸಿದರು.
‘ದುಶ್ಚಟಗಳ ವಿರುದ್ಧ ಡಾ.ಮಹಾಂತ ಸ್ವಾಮೀಜಿ ಅವರ ಹೋರಾಟ ಹಾಗೂ ಬಸವತತ್ವ ಪರಿಪಾಲನೆ ನನ್ನ ಮೇಲೆ ತುಂಬಾ ಪ್ರಭಾವ ಬೀರಿವೆ’ ಎಂದರು.
ಡಾ.ಮಹಾಂತ ಸ್ವಾಮೀಜಿ ಸಾನಿದ್ಯ ವಹಿಸಿದ್ದರು. ಗುರು ಮಹಾಂತ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ಪ್ರೊ.ಜಿ.ಎಚ್.ಹನ್ನೆರಡುಮಠ ಅಭಿನಂದನಾ ಮಾತುಗಳನ್ನು ಆಡಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದ ಮುಖ್ಯಸ್ಥ ಡಾ.ವಿರೇಶ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ್ ಪಂಪನಗೌಡ ಮೇಲ್ಸೀಮೆ ಉಪಸ್ಥಿತರಿದ್ದರು. ಸಂಗಣ್ಣ ಗದ್ದಿ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.