ADVERTISEMENT

‘ಮುಳುಗಡೆ’ ಕಾಣಿಸಿದ ಬದುಕಿನ ಮುಖಗಳು

ಸಮ್ಮೇಳನಾಧ್ಯಕ್ಷರ ಜತೆ ಸಂವಾದದಲ್ಲಿ ವಿಚಾರ ವೈವಿಧ್ಯ

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 19:30 IST
Last Updated 8 ಜನವರಿ 2014, 19:30 IST

ಭಾರತೀಸುತ ವೇದಿಕೆ (ಮಡಿಕೇರಿ): ಶರಾವತಿ ಯೋಜನೆಯಲ್ಲಿ ಮುಳುಗಡೆ ಆಯಿತು. ಆ ಪ್ರದೇಶದ ಜನರಿಗೆ ಬೇರೆ ಕಡೆ ಜಮೀನು ಕೊಟ್ಟರು. 120 ಕಿ.ಮೀ. ದೂರಕ್ಕೆ ಅವರೆಲ್ಲ ತಮ್ಮ ದನಕರುಗಳನ್ನು ಹೊಡೆದುಕೊಂಡು ಹೋಗಿ ಬಿಟ್ಟರು. ಮತ್ತೆ ತಮ್ಮ ಮೂಲ ನೆಲೆಗೇ ಬಂದರು. ಆರು ದಿನಗಳ ನಂತರ ಆ ಹಾದಿ ನೋಡಿಕೊಂಡಿದ್ದ ದನಕರುಗಳು ಅದೇ ಹಳ್ಳಿಗೆ ಮರಳಿದವು. ಪ್ರಾಣಿಗಳಿಗೇ ಪ್ರದೇಶದ ಬಗೆಗೆ ಇಂಥ ವ್ಯಾಮೋಹ ಇರುವಾಗ, ಮನುಷ್ಯನಿಗೆ ಎಂಥ ನಂಟು ಇದ್ದೀತು?

–ಇಂಥದೊಂದು ಮನ ಮಿಡಿಯುವ ಘಟನೆಯನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾ.ಡಿಸೋಜ ನೆನಪಿಸಿಕೊಂಡರು.

‘ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಬುಧವಾರ ಡಾ.ಪಾರ್ವತಿ ವೆಂಕಣ್ಣನವರ್‌ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಅವರು ಭಾವುಕರಾದರು.

ಸಂಸ್ಕೃತಿ, ಸಂಬಂಧ, ಸ್ನೇಹ, ಕಲೆ ಎಲ್ಲವನ್ನೂ ಮುಳುಗಿಸುವ ಅಭಿವೃದ್ಧಿಗೆ ತಮ್ಮದು ಸ್ಪಷ್ಟ ವಿರೋಧ ಎಂದರು. ಅಮೆರಿಕದಲ್ಲಿ ಅಣೆಕಟ್ಟುಗಳಿಂದಾಗುವ ಅಪಾಯ ಅರಿತು ಅವುಗಳನ್ನು ನಾಶಪಡಿಸುತ್ತಿರುವ ಈ ಸಂದರ್ಭದಲ್ಲಿ ನಾವೂ ಸರಿಯಾದ ದಾರಿಯಲ್ಲಿ ಯೋಚಿಸಬೇಕಿದೆ ಎಂಬುದು ಅವರ ಕಿವಿಮಾತು.

ಅಜ್ಜಿ ಕತೆಯ ಬರೆವ ಸುಖ
‘ಅಜ್ಜಿ ತೊಡೆ ಮೇಲೆ ಮೊಮ್ಮಗು­ವನ್ನು ಮಲಗಿಸಿ, ಕೈಗೆ ಚಾಕಲೇಟನ್ನೋ ಚಕ್ಕುಲಿಯನ್ನೋ ಕೊಟ್ಟು, ರಾಜ ಮಹಾರಾಜರ–ಮಂತ್ರವಾದಿಗಳ ಕತೆ ಹೇಳುತ್ತಿದ್ದ ಕಾಲವೊಂದಿತ್ತು. ಈಗಿನ ಅಜ್ಜಿಯರು ಟೀವಿ ಮುಂದೆ ಕೂತಿದ್ದಾರೆ. ಅದಕ್ಕೇ ಮಕ್ಕಳಿಗೆ ಕತೆ ಬರೆಯುವ ಕೆಲಸವನ್ನು ನಾನು, ನನ್ನಂಥ ಕೆಲವರು ಮಾಡುತ್ತಿದ್ದೇವೆ.

ಮಕ್ಕಳ ಕೈಗೆ ಮೊಬೈಲ್‌, ಟ್ಯಾಬ್‌ ಕೊಟ್ಟು ಖುಷಿಪಡುವುದನ್ನು ಬಿಟ್ಟು ಪುಸ್ತಕಗಳನ್ನು ಕೊಡಬೇಕು. ಅವುಗಳ ಸಾರಾಂಶ ಇರುವ ಟಿಪ್ಪಣಿಯನ್ನು ಕೈಗಿಟ್ಟು, ಓದಲು ಹಚ್ಚಬೇಕು. ಹಿಂದೆ ಅಜ್ಜ ಚಂದಮಾಮ ಪುಸ್ತಕ ಓದಿ, ಆಮೇಲೆ ಮೊಮ್ಮಕ್ಕಳಿಗೆ ಓದಿಸುವ ಪರಂಪರೆ ಇತ್ತು. ಅದು ಮುಂದಿವರಿಯಬೇಕು’– ಡಾ.ಕೋರನ ಸರಸ್ವತಿ, ತಾವು ಮಕ್ಕಳ ಸಾಹಿತ್ಯ ಬರೆದದ್ದು ಯಾಕೆ ಎಂದು ಕೇಳಿದ್ದಕ್ಕೆ ಡಿಸೋಜ ಕೊಟ್ಟ ದೀರ್ಘ ಉತ್ತರವಿದು.

ಕಾರಂತರಿಂದ ಕಲಿತದ್ದು...
ಚಳವಳಿಗಳಲ್ಲೂ ತೊಡಗಲು ಮನಸ್ಸು ಮಾಡಿದ ತಾವು ಜನಜಾಗೃತಿಗೆ ಇನ್ನೇನು ಸಲಹೆ ಕೊಡುವಿರಿ ಎಂಬ ಆಶಯ ಇರುವ ಪ್ರಶ್ನೆಯನ್ನು ರಾ.ನಂ. ಚಂದ್ರಶೇಖರ್‌ ಗೋಜಲು ಗೋಜಲಾಗಿ ಕೇಳಿದರು. ‘ನೀವು ಪ್ರಶ್ನೆ ಕೇಳುವ ಬದಲು ಭಾಷಣ ಮಾಡಿಬಿಟ್ಟಿರಿ’ ಎನ್ನುತ್ತಲೇ ಅವರನ್ನು ಚುಚ್ಚಿದ ಡಿಸೋಜ, ಆಮೇಲೆ ಪ್ರತಿಕ್ರಿಯಿಸಿದ್ದು ಹೀಗೆ. ‘1938ರಲ್ಲಿ ಬೆಂಗಳೂರು–ತಾಳಗುಪ್ಪ ನಡುವೆ ಶುರುವಾದ ರೈಲು ಆಮೇಲೆ ಇದ್ದಕ್ಕಿದ್ದಂತೆ ನಿಂತುಹೋಯಿತು. ಆಗ ನಾವು ಒಂದಿಷ್ಟು ಜನ ಸೇರಿ ಬ್ರಾಡ್‌ಗೇಜ್‌ ರೈಲ್ವೆ ಹೋರಾಟ ಸಮಿತಿ ಮಾಡಿಕೊಂಡೆವು. ಕೆಲವರು ಒತ್ತಡ ಹೇರಿದರೂ ರೈಲು ರೋಕೋ ಮಾಡಲಿಲ್ಲ. ಬೆಂಗಳೂರು–ತಾಳಗುಪ್ಪ ರೈಲು ಯಾಕೆ ಬೇಕು ಎಂಬುದನ್ನು ರೈಲ್ವೆ ಅಧಿಕಾರಿಗಳಿಗೆ ಸತತವಾಗಿ ಮನವರಿಕೆ ಮಾಡುತ್ತಾ ಬಂದೆವು. ಏಳು ವರ್ಷ ಹೋರಾಡಿದೆವು. ಕೊನೆಗೆ ಅಧಿಕಾರಿಗಳಿಗೆ ಅರಿವಾಗಿ, ರೈಲು ಸಂಚಾರ ಪ್ರಾರಂಭಿಸಿದರು. ನಾನು ನಂಬಿದ ಹೋರಾಟದ ಹಾದಿ ಅಂಥದ್ದು. ಶಿವರಾಮ ಕಾರಂತರಿಂದ ನಾನು ಹೋರಾಟಕ್ಕೆ ಧುಮುಕುವುದನ್ನು ಕಲಿತೆ. ಸಾಹಿತಿಗಳ ಸಾಮಾಜಿಕ ಹೊಣೆಗಾರಿಕೆ ಅದೆಂಬುದು ನನ್ನ ಭಾವನೆ’.

ನಕ್ಸಲೀಯರನ್ನು ಬರಮಾಡಿಕೊಳ್ಳಿ
ನೂರ್‌ ಶ್ರೀಧರ್‌ ಹಾಗೂ ಸಿರಿಮನೆ ನಾಗರಾಜ್‌ ಮುಖ್ಯವಾಹಿನಿಗೆ ಬರಲು ಸಿದ್ಧ ಎಂದು ಹೇಳಿದ ಸಂಗತಿ ಸುದ್ದಿಯಾದದ್ದನ್ನು ಡಾ.ಶಿವಗಂಗಾ ರುಮ್ಮ ಸ್ಮರಿಸಿಕೊಂಡು, ಇದಕ್ಕೆ ಅಧ್ಯಕ್ಷರ ಪ್ರತಿಕ್ರಿಯೆ ಬಯಸಿದರು.  ನಕ್ಸಲಿಸಂನ ಹುಟ್ಟಿಗೆ ಕೆಟ್ಟ ವ್ಯವಸ್ಥೆಯೇ ಕಾರಣ ಎಂದ ಡಿಸೋಜ, ಮುಖ್ಯವಾಹಿನಿಗೆ ಬರಲು ನಕ್ಸಲೀಯರು ಬಯಸಿದರೆ ಅವರನ್ನು ಸ್ವಾಗತಿಸಬೇಕು. ಅವರ ಮೇಲೆ ಕೇಸುಗಳನ್ನು ಹಾಕದೆ ಬದಲಾವಣೆಗೆ ಅವಕಾಶ ನೀಡಬೇಕು ಎಂದು ಸರ್ಕಾರ ಹಾಗೂ ಸಂಬಂಧಪಟ್ಟವರಿಗೆ ಸಲಹೆ ಕೊಟ್ಟರು.

ತಟ್ಟುವ/ತಟ್ಟದ ಸಾಹಿತ್ಯ
‘ಜನಪ್ರಿಯ ಸಾಹಿತ್ಯ, ಗಂಭೀರ ಸಾಹಿತ್ಯ ಎಂಬ ಭೇದವಿಲ್ಲ. ತಟ್ಟುವ ಸಾಹಿತ್ಯ, ತಟ್ಟದ ಸಾಹಿತ್ಯ ಅಷ್ಟೇ ಇರುವುದು. ನನ್ನನ್ನು ಜನಪ್ರಿಯ ಸಾಹಿತಿಗಳ ಸಾಲಿಗೆ ಎಂದೋ ಸೇರಿಸಿದ್ದರು. ಈಗ ಎಂಬತ್ತನೇ ಸಾಹಿತ್ಯ ಸಮ್ಮೇಳನದ ಗೌರವ ಸಂದಿದೆ. ಬರೆದ ಕತೆ ಒಂದೇ ಓದಿಗೆ ಅರ್ಥವಾಗಕೂಡದು ಎಂದು ಕೆಲವು ವಿಮರ್ಶಕರು ಅಭಿಪ್ರಾಯ­ಪಡುತ್ತಾರೆ. ಇದು ತಪ್ಪು. ನೂರಾರು ಸರಳ ಕತೆಗಳನ್ನು ಬರೆದ ಮಾಸ್ತಿ ದೊಡ್ಡವರೇ ಅಲ್ಲವೇ?’ ಎಂದು ಶ್ರೀಶೈಲ ನಾಗರಾಳ ಕೇಳಿದ ಪ್ರಶ್ನೆಗೆ ಉತ್ತರ ರೂಪದಲ್ಲಿ ಡಿಸೋಜ ಹೇಳಿದರು.

ದೇಸಿತನ ಕುರಿತ ಪ್ರಶ್ನೆಗೆ ಅವರು ಪರಂಪರೆಯ ಬೇರಿಗೆ ಅಂಟಿಕೊಂಡೇ ಉತ್ತರ ಕೊಟ್ಟದ್ದು. ಅಜ್ಜಿ ಮಾಡುವ ಗೊಜ್ಜಿನ ಹದ ಜಂಕ್‌ಫುಡ್‌ನಲ್ಲಿ ಇಲ್ಲ ಎಂಬುದು ಅವರ ಅನುಭವದ ಮಾತು. ‘ಗಾಂಧೀಜಿ, ವಿವೇಕಾನಂದ ಇಬ್ಬರೂ ಭಾರತಕ್ಕಾಗಿಯೇ ನಮ್ಮತನವನ್ನು ಉಳಿಸುವ ಸಂಕಲ್ಪ ಮಾಡಿದವರು. ವಿವೇಕಾನಂದರು ಯುವಕರ ಜಡತ್ವ ನೀಗುವಂತೆ ಎದೆಮೇಲೆ ಕೈಕಟ್ಟಿ ನಿಂತರು. ಗಾಂಧಿ ಅವರಿಂದ ಪ್ರಭಾವಿತರಾದರು’ ಎನ್ನುವಾಗ ಸಮ್ಮೇಳನಾಧ್ಯಕ್ಷರ ಕಂಠ ತುಂಬಿಬಂತು.

ಶೂನ್ಯದಿಂದ ಸಂಪಾದನೆ
ಖಾಸಗಿ ಶಾಲೆಗಳ ಡೊನೆಷನ್‌ ಹಾವಳಿ, ಅವು ರೂಪಿಸುತ್ತಿರುವ ಪರಕೀಯ ಸಂಸ್ಕೃತಿಯ ಕುರಿತು ಸಿಟ್ಟು ತೋಡಿಕೊಂಡ ಅವರು, ಅಂಥ ಶಾಲೆಗಳ ಮೇಲೆ ಸರ್ಕಾರದ ಹಿಡಿತ ಬೇಕು ಎಂದು ಪುನರುಚ್ಚರಿಸಿದರು.

ಅತೃಪ್ತ ಪಾತ್ರಗಳನ್ನೇತಾವೇಕೆ ಸೃಷ್ಟಿಸಿದ್ದೀರಿ ಎಂಬ ಮಾರಸಿಂಗನಹಳ್ಳಿ ರಾಮಚಂದ್ರ ಅವರ ಪ್ರಶ್ನೆಗೆ ಅವರು ಕೊಟ್ಟ ಉತ್ತರ ಮಾರ್ಮಿಕ: ‘ಸೋತವರ, ನಿರಾಸೆ ಪಟ್ಟವರ ಕತೆಗಳನ್ನೇ ನಾನು ಹೆಚ್ಚಾಗಿ ಬರೆದಿರು­ವುದು. ಶೂನ್ಯದಲ್ಲಿ ಸಂಪಾದನೆ ಮಾಡುವುದೇ ಮನುಷ್ಯ ಶಕ್ತಿ– ಹ್ಯೂಮನ್‌ ಪವರ್‌ ಈಸ್‌ ಟು ಮೇಕ್‌ ಮೈನಸ್‌ ಇನ್‌ಟು ಪ್ಲಸ್‌’. ಅವರ ಈ ಉತ್ತರಕ್ಕೆ ಪ್ರೇಕ್ಷಕರಿಂದ ಜೋರು ಚಪ್ಪಾಳೆಯೂ ಸಂದಿತು. 

ಎಲ್ಲಾ ಲಲಿತಕಲೆಗಳನ್ನು ಬಿಟ್ಟು ಬದುಕನ್ನು ಕಾಣಿಸುವಂಥ ಸಾಹಿತ್ಯವನ್ನು ತಾವು ಆರಿಸಿಕೊಂಡದ್ದು ಸುಖ ಎಂಬ ಧಾಟಿಯ ಅವರ ಉತ್ತರಕ್ಕೂ ಜನರಿಂದ ‘ವ್ಹಾ ವ್ಹಾ’ ಎಂಬ ಮೆಚ್ಚುಗೆ ವ್ಯಕ್ತವಾಯಿತು.

ಸಭಿಕರಲ್ಲಿ ನಗು ಮೂಡಿಸಿದಾಗ...
ಸಮ್ಮೇಳನಾಧ್ಯಕ್ಷರಿಗೆ ಹದಿನಾಲ್ಕು ಮಂದಿ ಪ್ರಶ್ನೆ ಕೇಳುವ ಅವಕಾಶವಿತ್ತು. ಆದರೆ, ಕೇಳಲು ವೇದಿಕೆ ಮೇಲೆ ಬಂದವರ ಸಂಖ್ಯೆ ಹನ್ನೊಂದು. ಡಾ.ಸಿ.ನಾಗಣ್ಣ ನಿರ್ವಹಿಸಿದ ಸಂವಾದದಲ್ಲಿ ಮೊದಲ ಪ್ರಶ್ನೆ ಕೇಳಲು ಬಂದ ಶ್ರೀಧರ ಹೆಗಡೆ ಒಂದೇ ಉಸಿರಿನಲ್ಲಿ ಐದು ಪ್ರಶ್ನೆಗಳನ್ನು ಹಾಕಿದರು. ‘ನಿಮ್ಮ ಮೊದಲ ಪ್ರಶ್ನೆಗೆ ಉತ್ತರ ಯೋಚಿಸುವಷ್ಟರಲ್ಲಿ ಐದನೆಯ ಪ್ರಶ್ನೆ ಕೇಳುತ್ತಿದ್ದಿರಿ. ಆ ಪ್ರಶ್ನೆ ನನಗೆ ಕೇಳಿಸಲೇ ಇಲ್ಲ’ ಎಂದು ನಾ.ಡಿಸೋಜ ಹೇಳಿದಾಗ ಪ್ರೇಕ್ಷಕರಲ್ಲಿ ಗೊಳ್ಳನೆ ನಗು. ಆಮೇಲೂ ಕೆಲವರು ಭಾಷಣ ಸ್ವರೂಪದಲ್ಲಿ ಪ್ರಶ್ನಿಸುವ, ಗೋಜಲು ಗೋಜಲಾಗಿ ಕೇಳಬೇಕಾದದ್ದನ್ನು ಮಂಡಿಸುವ ಚಾಳಿ ಮುಂದುವರಿಸಿದರು. ಅಂಥವರತ್ತ ಪ್ರೇಕ್ಷಕರೇ, ‘ಇದೇನ್ರೀ?’ ಎಂದು ಮಾತಿನ ಬಾಣ ಎಸೆದರು. ಕಸ್ತೂರಿ ರಂಗನ್‌ ವರದಿ ಜಾರಿಯಾಗುವ ಅಗತ್ಯವಿಲ್ಲ, ಅದನ್ನು ಸಮ್ಮೇಳನಾಧ್ಯಕ್ಷರು ಒಪ್ಪಕೂಡದು ಎಂಬ ಸೊಲ್ಲೂ ಕೆಲವರಿಂದ ಕೇಳಿಬಂದಿತು. ತಾವು ಸಾಕಷ್ಟು ಯೋಚಿಸಿಯೇ ಅಧ್ಯಕ್ಷ ಭಾಷಣ ಮಂಡಿಸಿದ್ದಾಗಿ ಡಿಸೋಜ ಪ್ರತಿಕ್ರಿಯಿಸಿದರು.

**ಮುಂದಿನ ಸಮ್ಮೇಳನ ಹಾವೇರಿಯಲ್ಲಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.