ಬೆಳಗಾವಿ: ಆ್ಯಪ್ ಒಂದರ ಮೂಲಕ ಪರಿಚಯವಾದ ವ್ಯಕ್ತಿಗಳಿಂದ ಕಾರು ಖರೀದಿಸಲು ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದ ಸಹೋದರರನ್ನು, ನಾಲ್ವರು ದುಷ್ಕರ್ಮಿಗಳು ಬೆದರಿಸಿ ₹2.82 ಲಕ್ಷ ನಗದು, ಫೋನ್, ವಾಚ್, ಉಂಗುರ ದೋಚಿ ಪರಾರಿಯಾಗಿದ್ದಾರೆ.
ಬೆಂಗಳೂರಿನ ಹೆಬ್ಬಾಳದ ಚೋಳನಾಯಕನಹಳ್ಳಿ 8ನೇ ಕ್ರಾಸ್ ನಿವಾಸಿಗಳಾದ ಮಹ್ಮದ್ ಶಾಬಾಷ್ ಅಹ್ಮದ್ ಹಾಗೂ ಮಹ್ಮದ್ ಯಾಸೀನ್ ಅಹಮದ್ ಹಣ ಕಳೆದುಕೊಂಡವರು.
‘ಆ್ಯಪ್ನಲ್ಲಿ ಪರಿಚಯವಾದ ಕೆಲವರು, ಕಾರು ಖರೀದಿಗಾಗಿ ಇಲ್ಲಿಗೆ ಬರುವಂತೆ ಫೋನ್ನಲ್ಲಿ ತಿಳಿಸಿದ್ದರು. ಅವರನ್ನು ನಂಬಿ ಸಹೋದರ ಮಹ್ಮದ್ ಯಾಸಿನ್ ಜೊತೆ ಶನಿವಾರ ಇಲ್ಲಿಗೆ ಬಂದಿದ್ದೆವು. ಇಂಡಿಕಾ ಕಾರ್ನಲ್ಲಿ ಬಂದ ವ್ಯಕ್ತಿಯೊಬ್ಬರು ಬಾಮನವಾಡಿ ಬಳಿಯ ಶಾಂತಾಯಿ ವೃದ್ಧಾಶ್ರಮ ಸಮೀಪದ ಮಾವಿನ ತೋಟದ ಬಳಿಗೆ ಕರೆದೊಯ್ದರು. ಅಲ್ಲಿದ್ದ ನಾಲ್ವರು ಚಾಕು ತೋರಿಸಿ ಬೆದರಿಸಿ, ನಮ್ಮ ಬಳಿ ಇದ್ದ ನಗದು, 2 ಮೊಬೈಲ್ ಫೋನ್ಗಳು, ವಾಚ್, ಬೆಳ್ಳಿ ಉಂಗುರ, ಎಪಿಕ್ ಕಾರ್ಡ್, ಪ್ಯಾನ್ ಕಾರ್ಡ್ ಕಿತ್ತುಕೊಂಡು ಪರಾರಿಯಾದರು’ ಎಂದು ಮಹ್ಮದ್ ಶಾಬಾಷ್ ಅಹ್ಮದ್ ದೂರು ನೀಡಿದ್ದಾರೆ.
ಪ್ರಕರಣ ದಾಖಲಾಗಿದ್ದು, ಆರೋಪಿಗಳು ಕರೆ ಮಾಡಲು ಬಳಸಿದ ಮೊಬೈಲ್ ನಂಬರ್ಗಳನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಉದ್ಯಮಬಾಗ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.