ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಕೇಂದ್ರ ಸರ್ಕಾರದ ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಜಾತಿಗಳನ್ನು ಬಿಟ್ಟು ಉಳಿದ ಎಲ್ಲ ಜಾತಿಗಳಲ್ಲಿನ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಕೇಂದ್ರ ಸರ್ಕಾರದ ಹುದ್ದೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಶೇ 10ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರ ಶನಿವಾರ ಪರಿಷ್ಕೃತ ಆದೇಶ ಹೊರಡಿಸಿದೆ.
ಈ ಆದೇಶ ಹೊರಡಿಸಿರುವುದರಿಂದ, ಶೇ 10ರಷ್ಟು ಮೀಸಲಾತಿ ಸೌಲಭ್ಯ 144 ಜಾತಿಗಳಿಗೆ ಮಾತ್ರ ಅನ್ವಯವಾಗುವಂತೆ 2019ರ ಮೇ 14ರಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ಜುಲೈ 22ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಪರಿಷ್ಕೃತ ಆದೇಶ ಹೊರಡಿಸಲಾಗಿದೆ.
ವಾರ್ಷಿಕ ಆದಾಯ ₹ 8 ಲಕ್ಷಗಳಿಗೂ ಕಡಿಮೆ ಇರುವ ಕುಟುಂಬಗಳ ಅರ್ಹ ಅಭ್ಯರ್ಥಿಗಳಿಗೆ ಈ ಮೀಸಲಾತಿ ಸೌಲಭ್ಯ ಸಿಗಲಿದೆ. ಕಂದಾಯ ಇಲಾಖೆ ಅಟಲ್ಜೀ ಜನಸ್ನೇಹಿ ಕೇಂದ್ರಗಳ ಮೂಲಕ ಆದಾಯ ಮತ್ತು ಸ್ವತ್ತು ಪ್ರಮಾಣ ವಿತರಿಸಲಿದೆ. ಪ್ರಮಾಣಪತ್ರ ವಿತರಿಸುವ ಸಂದರ್ಭದಲ್ಲಿ ಪ್ಯಾನ್ ಕಾರ್ಡ್, ಫಾರ್ಮ್–16, ಆದಾಯ ತೆರಿಗೆ ಪಾವತಿ ಬಗ್ಗೆ ಪರಿಶೀಲಿಸಬೇಕು. ಈ ದಾಖಲೆಗಳು ಕುಟುಂಬದ ಸದಸ್ಯರ ಬಳಿ ಇಲ್ಲವೆಂದು ನೋಟರಿಯಿಂದ ದೃಢೀಕರಿಸಿದ ಪ್ರಮಾಣಪತ್ರವನ್ನು ಅಭ್ಯರ್ಥಿಗಳು ಸಲ್ಲಿಸಬೇಕು. ಆ ಬಳಿಕ, ಕುಟುಂಬದ ಆದಾಯ ಖಚಿತಪಡಿಸಿ ಪ್ರಮಾಣಪತ್ರ ನೀಡಬೇಕು ಎಂದು ಪರಿಷ್ಕೃತ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಯಾರು ಅರ್ಹರಲ್ಲ: 5 ಎಕರೆ ಮತ್ತು ಅದಕ್ಕಿಂತ ಹೆಚ್ಚು ಕೃಷಿ ಜಮೀನು ಹೊಂದಿರುವ, ಒಂದು ಸಾವಿರ ಚದರ ಅಡಿ ಅಥವಾ ಅದಕ್ಕಿಂತ ದೊಡ್ಡ ಫ್ಲ್ಯಾಟ್ ಇರುವ, ನಗರಸಭೆ ವ್ಯಾಪ್ತಿಯಲ್ಲಿ 100 ಚದರ ಅಡಿ ಮತ್ತು ಅದಕ್ಕಿಂತ ಹೆಚ್ಚು ಅಥವಾ ಆ ವ್ಯಾಪ್ತಿ ಹೊರತಾದ ಕಡೆಗಳಲ್ಲಿ 200 ಅಡಿ ಮತ್ತು ಅದಕ್ಕಿಂತ ಹೆಚ್ಚು ವಿಸ್ತೀರ್ಣದ ವಾಸ್ತವ್ಯ ಜಾಗ ಹೊಂದಿರುವ ಕುಟುಂಬ ಈ ಮೀಸಲಾತಿ ಸೌಲಭ್ಯ ಪಡೆಯಲು ಅರ್ಹರಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.