ತುಮಕೂರು: ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ 105ನೇ ಹುಟ್ಟುಹಬ್ಬ ಸಮಾರಂಭ ಮಠದ ಆವರಣದಲ್ಲಿ ಭಾನುವಾರ ಸಂಭ್ರಮದಿಂದ ನೆರವೇರಿತು.ಎಂದಿನಂತೆ ನಸುಕಿನ 4.30ಕ್ಕೆ ದಿನಚರಿ ಪ್ರಾರಂಭಿಸಿದ ಸ್ವಾಮೀಜಿ ಉದ್ದಾನ ಶಿವಯೋಗಿಗಳ ಗದ್ದುಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಭಕ್ತವೃಂದ ನಿರ್ಮಿಸಿದ್ದ ವೇದಿಕೆಗೆ ಆಗಮಿಸಿದ ಶಿವಕುಮಾರ ಸ್ವಾಮೀಜಿ ಅವರಿಗೆ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಮಠಾಧೀಶರು ಪಾದಪೂಜೆ ಸಲ್ಲಿಸಿದರು.ಮುಂಜಾನೆ 6ರಿಂದಲೇ ಭಕ್ತರು ಸ್ವಾಮೀಜಿ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು. ಹಾರ ಹಾಕಲು, ಕಾಲು ಮುಟ್ಟಿ ನಮಸ್ಕರಿಸಲು ಭಕ್ತರು ಹಾತೊರೆಯುತ್ತಿದ್ದರು. ಇದೇ ಸಂದರ್ಭದಲ್ಲಿ ಸ್ಟೇಟ್ ಬ್ಯಾಂಕ್ ಮೈಸೂರು ವತಿಯಿಂದ ಸ್ವಾಮೀಜಿ ಮುಖಚಿತ್ರವಿರುವ ಪಾಕೆಟ್ ಕ್ಯಾಲೆಂಡರ್ಗಳ ಉಚಿತ ವಿತರಣೆ ನಡೆಯಿತು.
ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಸ್ವಾಮೀಜಿ, ಮನುಷ್ಯತ್ವದ ಔಚಿತ್ಯವನ್ನು ಒತ್ತಿ ಹೇಳಿದರು. ಜಗತ್ತಿನಲ್ಲಿರುವ ಲಕ್ಷಾಂತರ ಜೀವರಾಶಿಗಳ ಪೈಕಿ ಮನುಷ್ಯನಿಗೆ ಮಾತ್ರ ಚಿಂತನೆಯ ಸಾಮರ್ಥ್ಯವಿದೆ. ಮನುಷ್ಯನೇ ಇಲ್ಲದಿದ್ದರೆ ಜಗತ್ತಿನ ಅಸ್ತಿತ್ವಕ್ಕೆ ಅರ್ಥವಿಲ್ಲ. ಐನ್ಸ್ಟಿನ್ ಸೇರಿದಂತೆ ಅನೇಕ ವಿಜ್ಞಾನಿಗಳು ತಮ್ಮ ಎಟುಕಿಗೆ ಮೀರಿದ ಮಹಾಶಕ್ತಿ ಇದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ವಿವರಿಸಿದರು.
ಮನುಷ್ಯತ್ವ ಕಳೆದುಕೊಂಡ ಮನುಷ್ಯನ ಬಾಳಿಗೆ ಅರ್ಥವೇ ಇರುವುದಿಲ್ಲ. ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು ಮನುಷ್ಯ ತನ್ನನ್ನು ತಾನು ಪರೀಕ್ಷೆಗೆ ಒಡ್ಡಿಕೊಳ್ಳಬೇಕು. ವ್ಯಕ್ತಿ, ಸಮಾಜ ಮತ್ತು ರಾಷ್ಟ್ರದ ಹಿತಾಸಕ್ತಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಜಗದೀಶ್ಶೆಟ್ಟರ್,ವಸತಿ ಸಚಿವ ವಿ. ಸೋಮಣ್ಣ, ರಾಜ್ಯಸಭೆಯ ಉಪಸಭಾಪತಿ ರೆಹಮಾನ್ಖಾನ್, ಸಂಸದ ಜಿ.ಎಸ್.ಬಸವರಾಜು, ಶಾಸಕ ಸುರೇಶ್ಗೌಡ, ಕೃಷಿ ಮಾರುಕಟ್ಟೆ ಇಲಾಖೆಯ ನಿರ್ದೇಶಕ ಡಾ.ಸಿ.ಸೋಮಶೇಖರ್ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗೆ ಶುಭ ಹಾರೈಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.