ಬಳ್ಳಾರಿ/ಕುರುಗೋಡು: ತಾಲ್ಲೂಕಿನ ಸಿಂಧಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಲೂರು ಗ್ರಾಮದಲ್ಲಿ ಹರಾಜಿನ ಮೂಲಕ 13 ಜನ ಸದಸ್ಯರನ್ನು ಆಯ್ಕೆಮಾಡಿರುವ ಕುರಿತ ವೀಡಿಯೋ ವಾಟ್ಸ್ ಅಪ್ ಗುಂಪುಗಳಲ್ಲಿ ಸೋಮವಾರ ರಾತ್ರಿ ಹರಿದಾಡಿತ್ತು.
‘ಇದು ಸ್ಪಷ್ಟವಾಗಿ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಪ್ರಕರಣ ದಾಖಲಿಸಲಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ತಿಳಿಸಿದ್ದಾರೆ.
ಎಲ್ಲ ವಾರ್ಡ್ಗಳ ಆಕಾಂಕ್ಷಿಗಳು ನೀಡಿದ್ದಾರೆ ಎನ್ನಲಾದ ಮೊತ್ತವನ್ನು ವ್ಯಕ್ತಿಯೊಬ್ಬರು ಘೋಷಿಸಿರುವ ವೀಡಿಯೋದಲ್ಲಿ ಅಭ್ಯರ್ಥಿಗಳ ಹೆಸರುಗಳೂ ಇವೆ. ಮೊತ್ತವನ್ನು ಹೇಳುವ ವ್ಯಕ್ತಿ ಕೊನೆಯಲ್ಲಿ ‘ಈ ದಿನ ಎಲ್ಲ ಅಭ್ಯರ್ಥಿಗಳ ಒಟ್ಟು ಮೊತ್ತ ₨ 51.20 ಲಕ್ಷ. ಜಗದಾಂಬ ಮಾರಿಕಾಂಬ ದೇವಿಯ ಗುಡಿಗೆ ಅರ್ಪಿಸಿದೆ’ ಎಂದು ಘೋಷಿಸುತ್ತಾರೆ. ಅದನ್ನು ನೆರೆದ ಜನ ಸಂಭ್ರಮದಿಂದ ಕೂಗಿ ಅದನ್ನು ಸ್ವಾಗತಿಸುತ್ತಾರೆ.
ಈ ಕುರಿತು ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ, ಹರಾಜಿನಲ್ಲಿ ಆಯ್ಕೆಯಾದ ಮತ್ತು ಹರಾಜು ಏರ್ಪಡಿಸಿದ ಎಲ್ಲ ಮುಖಂಡರು ಗ್ರಾಮ ತೊರೆದಿದ್ದಾರೆ. ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಅವರು ಶೋಧದಲ್ಲಿ ತೊಡಗಿದ್ದಾರೆ.
ಭಿನ್ನ ಹೇಳಿಕೆ: ಈ ಬಗ್ಗೆ ಗ್ರಾಮದ ವ್ಯಕ್ತಿಗಳ ಹೇಳಿಕೆ ಬೇರೆಯಾಗಿದೆ. ‘ಚುನಾವಣೆಯಲ್ಲಿ ಅಭಿವೃದ್ದಿ ಪರ ಚಿಂತನೆ ಇಲ್ಲದ ವ್ಯಕ್ತಿಗಳು ಆಯ್ಕೆಯಾಗಬಹುದು. ಅದರಿಂದ ತಪ್ಪಿಸಲು ಗ್ರಾಮದ ಬಗ್ಗೆ ಕಳಕಳಿ ಇರುವ ವ್ಯಕ್ತಿಗಳನ್ನು ಆಯ್ಕೆಮಾಡಿ ಚುನಾವಣೆಗೆ ಖರ್ಚು ಮಾಡುವ ಹಣವನ್ನು ಅವರಿಂದ ಪಡೆದು ದೇವಸ್ಥಾನ ಅಭಿವೃದ್ಧಿ ಮಾಡಲು ಈ ಕ್ರಮ ಅನುಸರಿಸಲಾಗಿದೆ’ ಎನ್ನುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.