ADVERTISEMENT

ಹೂವಿನಹಡಗಲಿ: ಹರಿದ ಭದ್ರಾ, ಜನ ನಿರಾಳ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 23:30 IST
Last Updated 12 ಏಪ್ರಿಲ್ 2024, 23:30 IST
<div class="paragraphs"><p>ಹೂವಿನಹಡಗಲ ತಾಲ್ಲೂಕು ಮಾಗಳ ಗ್ರಾಮ ಬಳಿ ತುಂಗಭದ್ರಾ ನದಿ ಹರಿಯುತ್ತಿರುವುದು</p></div>

ಹೂವಿನಹಡಗಲ ತಾಲ್ಲೂಕು ಮಾಗಳ ಗ್ರಾಮ ಬಳಿ ತುಂಗಭದ್ರಾ ನದಿ ಹರಿಯುತ್ತಿರುವುದು

   

ಹೂವಿನಹಡಗಲಿ: ಬೇಸಿಗೆ ಕುಡಿಯುವ ನೀರಿನ ನಿರ್ವಹಣೆಗಾಗಿ ಭದ್ರಾ ಜಲಾಶಯದಿಂದ 2 ಟಿಎಂಸಿ ಅಡಿ ನೀರನ್ನು ತುಂಗಭದ್ರಾ ನದಿಗೆ ಹರಿಸಲಾಗಿದ್ದು, ತಾಲ್ಲೂಕಿನ ಜನರು ಕೊಂಚ ನಿರಾಳವಾಗಿದ್ದಾರೆ.

ದಾವಣಗೆರೆ, ಹಾವೇರಿ, ಗದಗ, ವಿಜಯನಗರ, ಬಳ್ಳಾರಿ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಸಲುವಾಗಿ ಮಾ. 29 ರಿಂದ ಏ.6ರವರೆಗೆ ಭದ್ರಾ ಜಲಾಶಯದಿಂದ ಪ್ರತಿದಿನ ಮೂರು ಸಾವಿರ ಕ್ಯೂಸೆಕ್‌ನಂತೆ 2 ಟಿಎಂಸಿ ಅಡಿ ನೀರು ಹರಿಸಲಾಗಿದೆ. ನದಿಪಾತ್ರದಲ್ಲೇ ಅನೇಕ ಕಡೆ ಮರಳು ಚೀಲಗಳಿಂದ ತಾತ್ಕಾಲಿಕ ತಡೆಗೋಡೆ ಕಟ್ಟಿ ನೀರು ನಿಲ್ಲಿಸಿರುವುದರಿಂದ ಇಲ್ಲಿನ ಸಿಂಗಟಾಲೂರು ಬ್ಯಾರೇಜ್‌ಗೆ 0.37 ಟಿಎಂಸಿ ಅಡಿ ನೀರು ಮಾತ್ರ ಹರಿದು ಬಂದಿದೆ.

ADVERTISEMENT

ಬೇಸಿಗೆ ಮುನ್ನವೇ ನದಿ ಬತ್ತಿದ್ದರಿಂದ ಜನ, ಜಾನುವಾರುಗಳು ನೀರಿಗಾಗಿ ಪರದಾಡುವಂತಾಗಿತ್ತು. ಈಗ ಮತ್ತೆ ನದಿಯಲ್ಲಿ ನೀರ ಹರಿವು ಕಂಡು ನದಿ ತೀರದ ಜನರು ಸಂತಸಗೊಂಡಿದ್ದಾರೆ. ಮೈಲಾರ, ಹೊಳಲು, ಕತ್ತೆಬೆನ್ನೂರು, ಬ್ಯಾಲಹುಣ್ಸಿ, ಹಿರೇಹಡಗಲಿ-ಮಾಗಳ, ಕೆ.ಅಯ್ಯನಹಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಮತ್ತೆ ಚಾಲನೆಗೊಂಡಿದ್ದು, ಕೆಲ ಹಳ್ಳಿಗಳಿಗೆ ನದಿಯಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ.

‘ಸಿಂಗಟಾಲೂರು ಬ್ಯಾರೇಜ್ ನಲ್ಲಿ 0.37 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಮುಂದಿನ 15 ದಿನಗಳವರೆಗೆ ಕುಡಿಯುವ ನೀರಿನ ನಿರ್ವಹಣೆ ಮಾಡಬಹುದು. ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು ಪಟ್ಟಣಗಳ ಕುಡಿಯುವ ನೀರಿಗಾಗಿ ಬ್ಯಾರೇಜ್ ನಿಂದ 300 ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದೆ’ ಎಂದು ಸಿಂಗಟಾಲೂರು ಏತ ನೀರಾವರಿ ಯೋಜನೆ ಎಇಇ ರಾಘವೇಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.