ADVERTISEMENT

8 ತಿಂಗಳಲ್ಲಿ 46,499 ಮನೆಗಳ ಹಂಚಿಕೆ: ಸಚಿವ ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 19:04 IST
Last Updated 28 ಸೆಪ್ಟೆಂಬರ್ 2021, 19:04 IST
ವಿ.ಸೋಮಣ್ಣ
ವಿ.ಸೋಮಣ್ಣ   

ಬೆಂಗಳೂರು: ‘ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ ಅಡಿ ನಗರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮುಂದಿನ ಏಳು ಅಥವಾ ಎಂಟು ತಿಂಗಳಲ್ಲಿ 46,499 ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡುವುದಾಗಿ ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಇದಕ್ಕಾಗಿ ಈಗಾಗಲೇ 316 ಎಕರೆ ಪ್ರದೇಶದಲ್ಲಿ 46,499 ಮನೆಗಳ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ ಎಂದು ಅವರು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹರಾಜಿಗೆ ಗುರುತಿಸಲಾಗಿದ್ದ ಜಮೀನುಗಳಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಮೂಲಸೌಕರ್ಯ ಒದಗಿಸಲು ಮುಖ್ಯಮಂತ್ರಿಯವರು ₹500 ಕೋಟಿ ಒದಗಿಸಿದ್ದಾರೆ. ಈ ಹಿಂದೆ ಫ್ಲಾಟ್‌ಗೆ ₹6.50 ಲಕ್ಷದಿಂದ ₹7 ಲಕ್ಷ ಎಂದು ನಿಗದಿ ಮಾಡಲಾಗಿತ್ತು. ಆದರೆ, ಹೆಚ್ಚುವರಿ ಮಹಡಿಗಳ ವೆಚ್ಚ ಏರಿಕೆ ಆಗಿರುವುದರಿಂದ ₹9 ಲಕ್ಷ ನಿಗದಿ ಮಾಡಲು ಉದ್ದೇಶಿಸಿದ್ದು, ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಬೆಲೆ ಅಂತಿಮಗೊಳಿಸಲಾಗುವುದು ಎಂದರು.

ಮನೆಗಳ ಹಂಚಿಕೆಯಲ್ಲಿ ಸ್ಥಳೀಯರಿಗೆ ಶೇ 50 ರಷ್ಟು ಕಾಯ್ದಿರಿಸಿ ಉಳಿದ ಮನೆಗಳನ್ನು ಕೋರಿಕೆ ಮೇರೆಗೆ ಹಂಚಿಕೆ ಮಾಡಲಾಗುವುದು. ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವ ಉದ್ದೇಶದಿಂದ ಪ್ರತಿ ತಿಂಗಳು ನಗರದ ಸಚಿವರು ಮತ್ತು ಶಾಸಕರ ಜತೆ ಸಭೆ ನಡೆಸಲಾಗುವುದು ಎಂದು ಸೋಮಣ್ಣ ಹೇಳಿದರು.

ADVERTISEMENT

‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಗರದಲ್ಲಿ ₹3,800 ಕೋಟಿ ವೆಚ್ಚದಲ್ಲಿ 2.53 ಲಕ್ಷ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಿದ್ದೇವೆ. ಅಲ್ಲದೆ, ಹುಬ್ಬಳ್ಳಿಯಲ್ಲಿ ಕೊಳೆಗೇರಿ ನಿವಾಸಿಗಳಿಗೆ 35,999 ಫಲಾನುಭವಿಗಳಿಗೆ ಸದ್ಯದಲ್ಲೇ ಹಕ್ಕು ಪತ್ರಗಳನ್ನು ವಿತರಿಸುತ್ತೇವೆ’ ಎಂದು ತಿಳಿಸಿದರು.

‘ವಸತಿ ನಿರ್ಮಾಣದ ವಿಚಾರಗಳಲ್ಲಿ ಸಿದ್ದರಾಮಯ್ಯ ಮತ್ತು ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಸರ್ಕಾರಗಳು ಮಾಡಿಟ್ಟಿದ್ದ ಗೊಂದಲಗಳನ್ನು ನಮ್ಮ ಸರ್ಕಾರ ಪರಿಹರಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಯವರು 5 ಲಕ್ಷ ಮನೆಗಳನ್ನು ಮಂಜೂರು ಮಾಡಿದ್ದು, 4 ಲಕ್ಷ ಮನೆಗಳನ್ನು ಗ್ರಾಮಾಂತರ ಪ್ರದೇಶದಲ್ಲೂ, 1 ಲಕ್ಷ ನಗರ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುವುದು. 3.50 ಲಕ್ಷ ಮನೆಗಳನ್ನು ಬಸವ ವಸತಿ ಯೋಜನೆಯಲ್ಲಿ ನಿರ್ಮಿಸಲಾಗುವುದು’ ಎಂದು ಹೇಳಿದರು.

‘ವಸತಿ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರದಿಂದ ಯಾವುದೇ ನೋಟಿಸ್‌ ಬಂದಿಲ್ಲ. ₹200 ಕೋಟಿ ಮೊತ್ತದ ಟೆಂಡರ್‌ ಏನಾಗಿದೆ ಎಂಬ ಮಾಹಿತಿಗಳನ್ನು ಕೇಳಿ ಪತ್ರ ಬಂದಿದೆ.ಟೆಂಡರ್‌ಪ್ರಕ್ರಿಯೆ ನಡೆಸುತ್ತಿರುವುದು ಸರ್ಕಾರದ ಮುಖ್ಯ ಕಾರ್ಯದರ್ಶಿ ಇನ್ನೂ ಟೆಂಡರ್‌ ಪ್ರಕ್ರಿಯೆ ಮುಗಿದಿಲ್ಲ.ಕೆಲವರು ನನ್ನನ್ನು ಗುರಿಯಾಗಿಸಿ ಷಡ್ಯಂತ್ರ ನಡೆಸಿದ್ದಾರೆ’ ಎಂದು ಹೇಳಿದರು.

ಫ್ಲ್ಯಾಟ್‌ ಬೆಲೆ lಪರಿಷ್ಕೃತ ಬೆಲೆ–₹9 ಲಕ್ಷ

ಎಸ್‌ಸಿ/ಎಸ್‌ಟಿ ವರ್ಗ:ಕೇಂದ್ರ ಸರ್ಕಾರದಿಂದ ₹ 1.50 ಲಕ್ಷ, ರಾಜ್ಯ ಸರ್ಕಾರ ₹2 ಲಕ್ಷ, ಎಸ್‌ಸಿಪಿ–ಟಿಎಸ್‌ಪಿ ಯೋಜನೆಯಿಂದ ತಲಾ ₹50 ಸಾವಿರ, ಫಲಾನುಭವಿಗಳು ಪಾವತಿಸಬೇಕಾಗಿದ್ದು ₹5 ಲಕ್ಷ. ಇದರಲ್ಲಿ ₹1 ಲಕ್ಷ ಕಟ್ಟಿದರೆ, ಉಳಿಯುವ ₹4 ಲಕ್ಷವನ್ನು ಬ್ಯಾಂಕ್‌ನಿಂದ ಸಾಲ ಸೌಲಭ್ಯ.

ಸಾಮಾನ್ಯ ವರ್ಗ: ಕೇಂದ್ರ ಸರ್ಕಾರದಿಂದ ₹1.50 ಲಕ್ಷ, ರಾಜ್ಯ ಸರ್ಕಾರ ₹1.20 ಲಕ್ಷ. ಫಲಾನುಭವಿ ಪಾವತಿಸಬೇಕಾದ ಮೊತ್ತ ₹5.50 ಲಕ್ಷ. ₹1 ಲಕ್ಷ ಠೇವಣಿ ಮಾಡಿದರೆ ಉಳಿದ ಮೊತ್ತಕ್ಕೆ ಬ್ಯಾಂಕ್‌ ಸಾಲ ಸೌಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.