ADVERTISEMENT

ರಾಜ್ಯದ 49 ತಾಲ್ಲೂಕುಗಳು ಬರಪೀಡಿತ: ಸಚಿವ ಆರ್. ಅಶೋಕ ಘೋಷಣೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2020, 10:47 IST
Last Updated 30 ಏಪ್ರಿಲ್ 2020, 10:47 IST
ರಾಜ್ಯದಲ್ಲಿ 49 ತಾಲೂಕುಗಳು ಬರಪೀಡಿತ
ರಾಜ್ಯದಲ್ಲಿ 49 ತಾಲೂಕುಗಳು ಬರಪೀಡಿತ    

ಬೆಂಗಳೂರು: ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ 49 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಈಗಾಗಲೇ ಘೋಷಿಸಿದ್ದು, ಬರ ಪೀಡಿತ ತಾಲ್ಲೂಕುಗಳೆಂಬ ಘೋಷಣೆ ಇನ್ನೂ ಒಂದು ತಿಂಗಳು ಮುಂದುವರಿಯಲಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತಾಲ್ಲೂಕುಗಳಲ್ಲಿ ಮುಂಗಾರು ಪೂರ್ವ ಮಳೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಇನ್ನೊಂದು ತಿಂಗಳ ಅವಧಿಗೆ ಬರ ಪೀಡಿತ ಘೋಷಣೆ ಹೊರಡಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಘೋಷಣೆಯಿಂದಾಗಿ ಇಲ್ಲಿ ಕುಡಿಯುವ ನೀರು ಪೂರೈಕೆ, ಬರ ಕಾಮಗಾರಿ ಮುಂದುವರಿಸಲು ಸಾಧ್ಯವಾಗುತ್ತದೆ. ಇಲ್ಲವಾದರೆ, ಇವತ್ತಿಗೆ ಎಲ್ಲಾ ಕಾರ್ಯಗಳೂ ನಿಂತು ಹೋಗುತ್ತವೆ. ನಾಳೆಯಿಂದ ಕಾಮಗಾರಿಗಳು ಮುಂದುವರಿಯಬೇಕು ಎಂಬ ಕಾರಣಕ್ಕೆ ಈ ಸಂಬಂಧ ಆದೇಶ ಹೊರಡಿಸಲಾಗುವುದು ಎಂದು ಅಶೋಕ ತಿಳಿಸಿದರು.

ADVERTISEMENT

ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಬಂದು ಹಾನಿಯಾಗಿದೆ. ಮುಂಗಾರು ಮಳೆ ಆರಂಭವಾಗುವುದರೊಳಗೆ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲು ಮೇಯರ್‌ ಅಧ್ಯಕ್ಷತೆಯಲ್ಲಿ ಬಿಬಿಎಂಪಿ ಸಭೆ ನಡೆಸಲಾಗುವುದು. ಮುಂಜಾಗ್ರತೆ ಕ್ರಮವಾಗಿ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದರು.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಕೋವಿಡ್‌–19 ಸಮಸ್ಯೆ ಇಲ್ಲದ ಕಡೆಗಳಲ್ಲಿ ಕ್ರಷರ್ಸ್‌, ಸಿಮೆಂಟ್‌, ಉಕ್ಕು‌ ಉದ್ಯಮಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುವುದು ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.