ಮಂಗಳೂರು: ‘ಬುಧವಾರ ಹತ್ಯೆಗೀಡಾದ ದೀಪಕ್ ರಾವ್ ಕೊಲೆ ಪ್ರಕರಣ ಸಂಬಂಧ ಆರೋಪಿಗಳ ವಿಚಾರಣೆ ಮುಂದುವರಿದ್ದು, ಪ್ರಕರಣದ ತನಿಖೆಗೆ ಎರಡು ತಂಡಗಳನ್ನು ರಚಿಸಲಾಗಿದೆ. ಯಾವ ಉದ್ದೇಶದಿಂದ ಕೊಲೆ ನಡೆದಿದೆ ಎಂಬುದು ಇನ್ನೂ ಗೊತ್ತಾಗಿಲ್ಲ' ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್ ಹೇಳಿದರು.
ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರೋಪಿಗಳು ಯಾವುದಾದರೂ ಸಂಘಟನೆ ಜೊತೆ ಗುರುತಿಸಿಕೊಂಡಿದ್ದರೇ ಎಂಬುದೂ ಖಚಿತವಾಗಿಲ್ಲ’ ಎಂದರು.
ಇದೇ ವೇಳೆ ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಭಾಗಿಯಾದ ಮೂಲ್ಕಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಶೀತಲ್ ಅಲಗೂರ್, ಎಎಸ್ಐ ಚಂದ್ರಶೇಖರ್, ಮಹೇಶ್, ಹುಸೇನ್, ಆರೋಪಿಗಳಿದ್ದ ಕಾರನ್ನು ಮೊದಲು ಪತ್ತೆ ಮಾಡಿದ್ದ ಗೃಹರಕ್ಷಕ ಸಿಬ್ಬಂದಿ ಹರೀಶ್, ಸಿಸಿಬಿ ಇನ್ಸ್ಪೆಕ್ಟರ್ ಶಾಂತಾರಾಂ, ಪಣಂಬೂರು ಇನ್ಸ್ಪೆಕ್ಟರ್ ಕೆ.ಎಂ. ರಫೀಕ್ ಅವರಿಗೆ ₹1.20 ಲಕ್ಷ ನಗದು ಬಹುಮಾನ ವಿತರಿಸಿದರು.
ಬಂಧಿತ ಅರೋಪಿಗಳಾದ ಪಿಂಕಿ ನವಾಝ್ ಮತ್ತು ರಿಜ್ವಾನ್ ಅಲಿಯಾಸ್ ರಿಜ್ಜು ಅವರಿಗೆ ಕಾರ್ಯಾಚರಣೆ ವೇಳೆ ಪೊಲೀಸರು ಹಾರಿಸಿದ ಗುಂಡು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಉಳಿದಂತೆ ನೌಷಾದ್ ಮತ್ತು ಇರ್ಷಾನ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.