ADVERTISEMENT

13ರಿಂದ ಸುತ್ತೂರು ಜಾತ್ರೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 19:30 IST
Last Updated 8 ಜನವರಿ 2018, 19:30 IST

ಮೈಸೂರು: ಜಿಲ್ಲೆಯ ನಂಜನಗೂಡು ತಾಲ್ಲೂಕು ಸುತ್ತೂರಿನ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಜ.13ರಿಂದ 18ರ ವರೆಗೆ ನಡೆಯಲಿದೆ. ಈ ಬಾರಿ ಹೊಸ ರಥ ನಿರ್ಮಾಣ ಮಾಡಿದ್ದರಿಂದ ಭಕ್ತರ ಉತ್ಸಾಹ ಹೆಚ್ಚಿದೆ. ಧರ್ಮ, ಸಂಸ್ಕೃತಿ ಹಾಗೂ ಜಾನಪದ ಸೊಗಡಿಗೆ ಹೆಸರಾದ ಈ ಜಾತ್ರೆಗೆ ಸಿದ್ಧತೆಗಳು ಭರದಿಂದ ಸಾಗಿವೆ.

ಜ.13ರಂದು ಬೆಳಿಗ್ಗೆ 10.30ಕ್ಕೆ ಸಾಂಸ್ಕೃತಿಕ ಮೇಳ, ಮಾಹಿತಿ ಕೇಂದ್ರ, ರಂಗೋಲಿ ಸ್ಪರ್ಧೆ ಹಾಗೂ ಸೋಬಾನೆ ಪದಗಳ ಸ್ಪರ್ಧೆ ನಡೆಯಲಿದೆ. ಸಂಜೆ 4ಕ್ಕೆ ವಸ್ತುಪ್ರದರ್ಶನ ಹಾಗೂ ಕೃಷಿಮೇಳಕ್ಕೆ ಚಾಲನೆ ದೊರೆಯಲಿದೆ. ಜ.14ರಂದು ಬೆಳಿಗ್ಗೆ 10.15ಕ್ಕೆ ಸಾಮೂಹಿಕ ವಿವಾಹ ಮಹೋತ್ಸವ, ಮಧ್ಯಾಹ್ನ 3ಕ್ಕೆ ರಾಜ್ಯಮಟ್ಟದ ಭಜನಾ ಮೇಳ, ದೇಸಿ ಆಟಗಳು ಹಾಗೂ ದೋಣಿ ವಿಹಾರ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ಜ.15ರಂದು ಬೆಳಿಗ್ಗೆ 10.15ಕ್ಕೆ ರಥೋತ್ಸವ ನಡೆಯಲಿದ್ದು, ಬಳಿಕ ಧಾರ್ಮಿಕ ಸಭೆ, ಮಧ್ಯಾಹ್ನ 3ಕ್ಕೆ 50ನೇ ದನಗಳ ಜಾತ್ರೆ ಆರಂಭಿಸಲಾಗುವುದು. 16ರಂದು ಬೆಳಿಗ್ಗೆ 10.30ಕ್ಕೆ ಕೃಷಿ ವಿಚಾರಸಂಕಿರಣ, 17ರಂದು ಬೆಳಿಗ್ಗೆ 11ಕ್ಕೆ ಭಜನಾ ಮೇಳದ ಸಮಾರೋಪ ಸಮಾರಂಭ, ಮಧ್ಯಾಹ್ನ 2ಕ್ಕೆ ಕುಸ್ತಿ ಪಂದ್ಯಗಳು, ಸಂಜೆ 4.30ಕ್ಕೆ ದನಗಳ ಜಾತ್ರೆಯ ಸಮಾರೋಪ, 18ರಂದು ಬೆಳಿಗ್ಗೆ 10.30ಕ್ಕೆ ಕೃಷಿಮೇಳದ ಮುಕ್ತಾಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ನಡೆಯಲಿದೆ.

ADVERTISEMENT

ಆರು ದಿನಗಳ ಜಾತ್ರೆಯಲ್ಲಿ ಪ್ರತಿ ದಿನವೂ ವಿವಿಧ ಪೂಜಾ ಕಾರ್ಯಗಳು, ಮನರಂಜನಾ ಕ್ರೀಡೆಗಳು, ಧರ್ಮಸಭೆ ಹಾಗೂ ಖ್ಯಾತನಾಮರಿಂದ ನಾಟಕ, ಸಂಗೀತ, ನೃತ್ಯ ಕಾರ್ಯಕ್ರಮಗಳೂ ನಡೆಯಲಿವೆ. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ನೇತೃತ್ವದಲ್ಲಿ ಈ ಜಾತ್ರಾ ಮಹೋತ್ಸವದ ಎಲ್ಲ ಕಾರ್ಯಗಳೂ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.