ಮೂಡುಬಿದಿರೆ: ‘ಭಾರತ ಸಡೃಢ ದೇಶ. ಇಲ್ಲಿ ಶೇ. 68ರಷ್ಟು ಯುವಜನತೆ ಇದ್ದಾರೆ. ಮುಂದಿನ ದಿನಗಳಲ್ಲಿ ಪ್ರಪಂಚದ ಕೆಲವೊಂದು ಬಲಿಷ್ಠ ದೇಶಗಳಲ್ಲಿ ಯುವಜನರ ಸಂಖ್ಯೆ ತುಂಬ ಕಡಿಮೆ ಆಗಲಿದ್ದು, ಭಾರತದ ಯುವಕರು ಕೌಶಲ ಭರಿತ ಶಿಕ್ಷಣ ಪಡೆದು ವಿಶ್ವದ ಅವಕಾಶಗಳಿಗೆ ತೆರೆದುಕೊಳ್ಳಬೇಕು’ ಎಂದು ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ. ಆಚಾರ್ಯ ಸಲಹೆ ನೀಡಿದರು.
ಮೂಡುಬಿದಿರೆಯ ವಿವೇಕಾನಂದ ನಗರದಲ್ಲಿರುವ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಶುಕ್ರವಾರ ಆರಂಭಗೊಂಡ ಮೂರು ದಿನಗಳ 24ನೇ ವರ್ಷದ ಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
‘ಆಳ್ವಾಸ್ ಶಿಕ್ಷಣ ಸಂಸ್ಥೆ ಮಿನಿ ಇಂಡಿಯಾದಂತಿದೆ. ಆಳ್ವಾಸ್ ವಿರಾಸತ್ ದೇಶದ ಸಂಸ್ಕೃತಿಯನ್ನು ಮೆರೆಸುವ ವೈಭವದ ಕಾರ್ಯಕ್ರಮವಾಗಿದೆ’ ಎಂದರು.
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕರಾದ ಪಂಡಿತ್ ರಾಜನ್ ಮತ್ತು ಸಾಜನ್ ಮಿಶ್ರಾ ಅವರಿಗೆ ಶಾಲು, ಫಲಕ, ಹಣ್ಣು, ಹಾರ ಮತ್ತು ₹1 ಲಕ್ಷ ನಗದು ಒಳಗೊಂಡ ಆಳ್ವಾಸ್ ವಿರಾಸತ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ.ಮೋಹನ್ ಆಳ್ವ, ‘23 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ವಿರಾಸತ್ ಕಾರ್ಯಕ್ರಮದಲ್ಲಿ ಸಾವಿರಾರು ಕಲಾವಿದರು ಭಾಗವಹಿಸಿದ್ದಾರೆ. ನಾಡಿನ, ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. 25ನೇ ವರ್ಷದ ವಿರಾಸತ್ ಕಾರ್ಯಕ್ರಮವನ್ನು ಮತ್ತಷ್ಟು ಅರ್ಥಪೂರ್ಣವಾಗಿ ಆಯೋಜಿಸುವ ಅಭಿಲಾಷೆ ಇದೆ’ ಎಂದು ತಿಳಿಸಿದರು. ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.