ಬೆಂಗಳೂರು: ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ಅಭಿವೃದ್ಧಿ ಕಾಮಗಾರಿ ನಡೆಸಿರುವ ಕುರಿತು ಪರಿಶೀಲಿಸಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್ಟಿಸಿಎ) ಅಧಿಕಾರಿಗಳು ಸದ್ಯದಲ್ಲೇ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ಕಾಳಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಹಳಿಯಾಳ ಪ್ರಾದೇಶಿಕ ವಿಭಾಗದ ಅರಣ್ಯದ ಮೂಲಕ ಹಾದುಹೋಗಿರುವ ಕುಳಗಿ–ಪೊಟೊಳಿ ರಸ್ತೆಯನ್ನು ಅನಧಿಕೃತವಾಗಿ ಮೇಲ್ದರ್ಜೆಗೇರಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ, ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ವನ್ಯಜೀವಿ ಕಾರ್ಯಕರ್ತರು ಪ್ರಾಧಿಕಾರಕ್ಕೆ ದೂರು ನೀಡಿದ್ದರು.
ಪ್ರಾಧಿಕಾರದ ದಕ್ಷಿಣ ವಲಯದ ಸಹಾಯಕ ಅರಣ್ಯ ಮಹಾನಿರೀಕ್ಷಕರು 30 ದಿನಗಳೊಳಗೆ ವಾಸ್ತವಿಕ ವರದಿ ನೀಡಬೇಕು ಎಂದು ಸೂಚಿಸಿ ಎನ್ಟಿಸಿಎ ಇತ್ತೀಚೆಗೆ ಆದೇಶ ಹೊರಡಿಸಿತ್ತು. ‘ಒಂದೆರಡು ದಿನಗಳಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಲಿದ್ದಾರೆ’ ಎಂದು ಪ್ರಾಧಿಕಾರದ ದಕ್ಷಿಣ ವಲಯದ ಕಚೇರಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.