ADVERTISEMENT

'ಅಲ್ಪಸಂಖ್ಯಾತ ಮುಗ್ಧ'ರ ಮುಖ್ಯಮಂತ್ರಿ: ಅನಂತಕುಮಾರ ಹೆಗಡೆ ಟೀಕೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 14:29 IST
Last Updated 1 ಫೆಬ್ರುವರಿ 2018, 14:29 IST
'ಅಲ್ಪಸಂಖ್ಯಾತ ಮುಗ್ಧ'ರ ಮುಖ್ಯಮಂತ್ರಿ: ಅನಂತಕುಮಾರ ಹೆಗಡೆ ಟೀಕೆ
'ಅಲ್ಪಸಂಖ್ಯಾತ ಮುಗ್ಧ'ರ ಮುಖ್ಯಮಂತ್ರಿ: ಅನಂತಕುಮಾರ ಹೆಗಡೆ ಟೀಕೆ   

ಬೆಂಗಳೂರು: ಕೋಮು ಗಲಭೆಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಕೈಬಿಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರವನ್ನು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಟೀಕಿಸಿದ್ದು, ಆ ಕುರಿತು ಗುರುವಾರ ಫೇಸ್‌ಬುಕ್‌ ಬರಹ ಪ್ರಕಟಿಸಿಕೊಂಡಿದ್ದಾರೆ.

ಕೋಮು ಗಲಭೆಗಳಲ್ಲಿ ಎಲ್ಲ ಮುಗ್ಧರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಸಂಬಂಧ ಗೃಹ ಇಲಾಖೆ ಹೊರಡಿಸಿದ್ದ ಹೊಸ ಸುತ್ತೋಲೆಯಲ್ಲಿ ‘ಅಲ್ಪಸಂಖ್ಯಾತರು’ ಎಂಬ ಪದ ತೆಗೆದು ಹಾಕಿತ್ತು.

ಕೋಮು ಗಲಭೆಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಕೈಬಿಡುವ ಬಗ್ಗೆ ಪೊಲೀಸ್‌ ಕಮಿಷನರ್‌ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠರಿಗೆ ಪತ್ರ ಬರೆದು ಅಭಿಪ್ರಾಯ ಕೇಳಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಿಎಂ ಸಿದ್ದರಾಮಯ್ಯ ಅವರನ್ನು ‘ಅಲ್ಪಸಂಖ್ಯಾತ ಮುಗ್ಧ’ರ ಮುಖ್ಯಮಂತ್ರಿ ಎಂದು ಕರೆದು ಟೀಕಿಸಿದ್ದಾರೆ.

ADVERTISEMENT

ಅನಂತಕುಮಾರ ಹೆಗಡೆ ಫೇಸ್‌ಬುಕ್‌ ಪುಟದಲ್ಲಿ...
’ನಮ್ಮ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಜ್ಯ ಸಮಸ್ತ ಪ್ರಜೆಗಳಿಗೆ ಮುಖ್ಯಮಂತ್ರಿಯೋ ಅಥವಾ ಕೇವಲ ಒಂದು ಕೋಮಿಗೆ ಮಾತ್ರ ಮುಖ್ಯಮಂತ್ರಿಯೋ? ಕೋಮು ಗಲಭೆಯಲ್ಲಿ ಪಾಲ್ಗೊಂಡ ಮುಗ್ಧ ಅಲ್ಪಸಂಖ್ಯಾತರನ್ನು ಮಾತ್ರ ಗಲಭೆ ಪ್ರಕರಣದಿಂದ ಮುಕ್ತಗೊಳಿಸುವುದರ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ, ಇತ್ತೀಚಿಗೆ ಮುಖ್ಯ ಮಂತ್ರಿಗಳು ಛೂ ಬಿಟ್ಟಿದ್ದಾರೆ. ಸಂಪೂರ್ಣ ಐದು ವರ್ಷ ಅವಧಿಯಲ್ಲಿ, ಅವರು ಒಂದು ಕೋಮಿನ ಹಿತೈಷಿಗಳಂತೆ ವರ್ತಿಸುತ್ತಿರುವುದು ಇದೇನು ಮೊದಲಲ್ಲ, ಮತ್ತು, ಇದು ಸಂವಿಧಾನದ ಸ್ಪಷ್ಟ ಉಲ್ಲಂಘನೆಯ ಪುನರಾವರ್ತನೆಯಾಗುತ್ತಿದೆ! ಇನ್ನು ಈ ಮುಖ್ಯಮಂತ್ರಿಗಳು ಬಹಿರಂಗವಾಗಿ ಮತ್ತು ಮಾಧ್ಯಮದ ಮೂಲಕ ಸಂವಿಧಾನದ ಬಗ್ಗೆ ದಿನ ನನಗೆ ಪಾಠ ಮಾಡುತಿರುತ್ತಾರೆ.’

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.