ಬೆಂಗಳೂರು: ಕಾಲ್ಪನಿಕ ವೇತನ ನಿಗದಿ ಬಗ್ಗೆ ಬಸವರಾಜ ಹೊರಟ್ಟಿ ಸಮಿತಿ ನೀಡಿರುವ ವರದಿಯನ್ನು ಅಂಗೀಕರಿಸಬೇಕು ಎಂದು ಒತ್ತಾಯಿಸಿ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಸದಸ್ಯರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಕಾಲ್ಪನಿಕ ವೇತನಕ್ಕೆ ಒಪ್ಪಿಗೆ ಸೂಚಿಸಿದರೆ ಸರ್ಕಾರಕ್ಕೆ ₹5,000 ಕೋಟಿ ಹೊರೆಯಾಗಲಿದೆ ಎಂದು ಐಎಎಸ್ ಅಧಿಕಾರಿಗಳು ವರದಿ ನೀಡಿದ್ದಾರೆ. ಆದರೆ, ವಾಸ್ತವವಾಗಿ ಹೊರೆಯಾಗುವುದು ₹ 351 ಕೋಟಿ. ಈ ಬಗ್ಗೆ ಹೊರಟ್ಟಿ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು, ‘2006ರ ನಂತರ ನೇಮಕಗೊಂಡ ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಇಲ್ಲವಾದರೆ, ನೌಕರರಿಗೆ ಅನ್ಯಾಯವಾಗಲಿದೆ’ ಎಂದರು.
ಸಂಘದ ಅಧ್ಯಕ್ಷ ಡಿ.ಸಿ.ಗೋಪಿನಾಥ್, ‘ಈ ಹೋರಾಟ ಸರ್ಕಾರದ ವಿರುದ್ಧವಲ್ಲ. ಬೇಡಿಕೆಗಳ ಈಡೇರಿಕೆ ಬಗ್ಗೆ ಸದನದಲ್ಲಿ ಹೋರಾಟ ಮಾಡುತ್ತಿರುವ ನಮ್ಮ ಪ್ರತಿನಿಧಿಗಳಿಗೆ ನೈತಿಕ ಬೆಂಬಲ ನೀಡುವ ಸಲುವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ತನ್ವೀರ್ ಸೇಠ್ ಸ್ಥಳಕ್ಕಾಗಮಿಸಿ ಭರವಸೆ ನೀಡುವವರೆಗೆ ಹೋರಾಟ ನಿಲ್ಲಲ್ಲ’ ಎಂದು ಹೇಳಿದರು.
ಪ್ರಮುಖ ಬೇಡಿಕೆಗಳು
* ಶಿಕ್ಷಕರ ಸಂಪೂರ್ಣ ಆರೋಗ್ಯ ವೆಚ್ಚವನ್ನು ಸರ್ಕಾರವೇ ಭರಿಸಬೇಕು
* ಅನುದಾನಿತ ಶಾಲೆಗಳ ಮಕ್ಕಳಿಗೂ ಸಮವಸ್ತ್ರ, ಶೂ ಮತ್ತು ಸಾಕ್ಸ್ ನೀಡಬೇಕು
* ಶೈಕ್ಷಣಿಕ ಪ್ರವಾಸ ಸೌಲಭ್ಯ ಒದಗಿಸಬೇಕು
* ಹೆಚ್ಚುವರಿ ಶಿಕ್ಷಕರನ್ನು ಸರ್ಕಾರಿ ಶಾಲೆಗಳಿಗೆ ಕಾಯಂ ಆಗಿ ನೇಮಿಸಬೇಕು
* ಕೌನ್ಸೆಲಿಂಗ್ ಮೂಲಕ ಅನುದಾನಿತ ಶಿಕ್ಷಕರನ್ನು ವರ್ಗಾವಣೆ ಮಾಡಬೇಕು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.